ಎಚ್ ಡಿಕೆ ಸಿಎಂ: ಚನ್ನಪಟ್ಟಣದಲ್ಲಿ ಜೆಡಿಎಸ್ ಸಂಭ್ರಮ, ವಿಶೇಷ ಪೂಜೆ
ರಾಮನಗರ, ಮೇ 22 : ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಗೊಂಬೆನಗರಿ ಚನ್ನಪಟ್ಟಣದಲ್ಲಿ ಸಿಹಿ ಹಂಚುವ ಮೂಲಕ ಜೆಡಿಎಸ್ ಕಾರ್ಯಕರ್ತರು ಸಂಭ್ರಮಿಸಲು ಮುಂದಾಗಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಎಚ್ ಡಿಕೆ ರಾಮನಗರ ಹಾಗೂ ಚನ್ನಪಟ್ಟಣದಿಂದ ಸ್ಪರ್ಧಿಸಿ ಎರಡು ಕ್ಷೇತ್ರದಲ್ಲೂ ಗೆಲುವು ಕಂಡಿದ್ದರು. ಇದುವರೆಗೂ ರಾಮನಗರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕುಮಾರಸ್ವಾಮಿ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಚನ್ನಪಟ್ಟಣದ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದರು.
ಇದೇ ಮೊದಲ ಬಾರಿಗೆ ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಗೊಂಡ ಶಾಸಕರು ಮುಖ್ಯಮಂತ್ರಿ ಆಗುತ್ತಿರುವುದು ಅಲ್ಲಿನ ಕಾರ್ಯಕರ್ತರ ಸಂತಸ ಇಮ್ಮಡಿಗೊಳಿಸಿದೆ. ಅಲ್ಲದೇ ಚನ್ನಪಟ್ಟಣ ತಾಲೂಕಿನ ಬೇವೂರಿನಲ್ಲಿ ಪ್ರಮಾಣವಚನ ಸಂದರ್ಭದಲ್ಲಿ ಸಿಹಿ ಹಂಚಲು ಲಾಡು ಸಹ ತಯಾರುಗೊಳ್ಳುತ್ತಿದೆ.

ಇನ್ನು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಎಚ್ ಡಿಕೆ ಕಟ್ಟಾ ಅಭಿಮಾನಿ ಆಗಿರುವ ಗುರುಕುಮಾರ್ ಲಾಡು ತಯಾರಿಸಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಿಹಿ ಹಂಚಲು ನಿರ್ಧರಿಸಿದ್ದು , ಜೆಡಿಎಸ್ ಕಾರ್ಯಕರ್ತರೇ ಸಾವಿರಾರು ಲಾಡುಗಳನ್ನು ಕಟ್ಟುವ ಸಿದ್ದತೆಯಲ್ಲಿ ತೊಡಗಿದ್ದಾರೆ.
ಇನ್ನು ಸಿಎಂ ಆಗಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಚನ್ನಪಟ್ಟಣ ಕ್ಷೇತ್ರದಾದ್ಯಂತ ಜನರಿಗೆ ಈ ಸಿಹಿಯನ್ನು ಹಂಚುವುದಾಗಿ ಗುರುಕುಮಾರ್ ಹೇಳಿದರು.
ಪಟ್ಟಣದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಕುಮಾರಸ್ವಾಮಿ ನಾಡಿನ ಪೂರ್ಣಾವಧಿ ಮುಖ್ಯಮಂತ್ರಿಯಾಗಲಿ ಎಂದು ಕೆಂಗಲ್ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ಪಟ್ಟರು.
ದೇವಸ್ಥಾನದ ಆವರಣದಲ್ಲೇ ಕುಮಾರಸ್ವಾಮಿಗೆ ಜೈಕಾರ ಹಾಕಿದ ಜೆಡಿಎಸ್ ಬೆಂಬಲಿಗರು, ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.












Click it and Unblock the Notifications