ಬೊಂಬೆ ತಯಾರಿಕೆಯ ಮೇಲೆ ಕೇಂದ್ರ ಸರ್ಕಾರದ ಗದಾ ಪ್ರಹಾರ: ಎಚ್ಡಿಕೆ ಆಕ್ರೋಶ
ರಾಮನಗರ, ಅಕ್ಟೋಬರ್ 19: ಬೊಂಬೆ ತಯಾರಿಕೆಗೆ ಕೇಂದ್ರ ಸರ್ಕಾರ ಬಿಐಎಸ್ ಮುದ್ರೆ ಕಡ್ಡಾಯ ಮಾಡುವ ಮೂಲಕ ಗುಡಿ ಕೈಗಾರಿಕೆಯ ಮೇಲೆ ಗದಾ ಪ್ರಹಾರ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ "ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಚನ್ನಪಟ್ಟಣದ ಬೊಂಬೆಗಳ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾರೆ. ಆದರೆ ಸಾಂಪ್ರದಾಯಕ ಬೊಂಬೆ ತಯಾರಕರ ಮೇಲೆ ಕೆಂಗಣ್ಣು ಬೀರಿದ್ದಾರೆ ಎಂದು ಹೇಳಿದ್ದಾರೆ.
ಕೇವಲ ದೊಡ್ಡ ಉದ್ದಿಮೆದಾರರ ಹಿತಕಾಯುವ ಇಂತಹ ನಿರ್ಧಾರದಿಂದ, ಆಟಿಕೆ ತಯಾರಿಕೆಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿಯ ಉದ್ಯೋಗಕ್ಕೆ ಸಂಚಕಾರ ಬರಲಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಬೊಂಬೆ ತಯಾರಿಕೆಗೆ ಭಾರತೀಯ ಮಾನಕ ಬ್ಯೂರೋ (BIS) ಮುದ್ರೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರ, ತಕ್ಷಣವೇ ತಮ್ಮ ನಿರ್ಧಾರ ವಾಪಸ್ಸು ಪಡೆಯುವ ಮೂಲಕ ಗುಡಿ ಕೈಗಾರಿಕೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ಸಿಎಂ ಹಾಗೂ ಚನ್ನಪಟ್ಟಣ ಶಾಸಕರಾದ ಎಚ್.ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
Recommended Video
ಬಿಐಎಸ್ ಪ್ರಮಾಣಪತ್ರ ಪಡೆಯಲು ಸಾವಿರಾರು ರುಪಾಯಿಗಳು ವೆಚ್ಚವಾಗಲಿದ್ದು, ಸಣ್ಣ ಬೊಂಬೆಗಳ ತಯಾರಕರಿಗೆ ದುಬಾರಿ ಆಗಲಿದೆ. ದೇಶೀಯ ಬೊಂಬೆ ಉತ್ಪಾದಕರ ಭವಿಷ್ಯಕ್ಕೆ ಮಾರಕವಾಗಲಿದೆ ಹಾಗೂ ಕೇಂದ್ರ ಸರ್ಕಾರದ ಈ ನಿರ್ಧಾರ ಗುಡಿ ಕೈಗಾರಿಕೆಗಳಿಗೆ ಮುಳ್ಳಾಗಲಿದೆ ಎಂದು ಮಾಜಿ ಸಿಎಂ ಎಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications