ಚನ್ನಪಟ್ಟಣ ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ; ಎಚ್ಡಿಕೆ
ರಾಮನಗರ, ನವೆಂಬರ್ 07; "ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನು ಯಾವತ್ತು ರಾಜಿಯಾಗುವುದಿಲ್ಲ. ನಾನು ಕ್ಷೇತ್ರಕ್ಕೆ ಶಾಸಕನಾಗಿ ಆಯ್ಕೆಯಾಗಿ ಮೂರು ವರ್ಷ ಕಳೆದಿದೆ. ಅಭಿವೃದ್ಧಿಯನ್ನು ಗಮನಿಸಿ, ಸುಖಾಸುಮ್ಮನೆ ಆರೋಪ ಮಾಡಿದರೆ ನಾನು ಸೊಪ್ಪು ಹಾಕುವುದಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರೋಧಿಗಳಿಗೆ ಟಾಂಗ್ ನೀಡಿದರು.
ಕ್ಷೇತ್ರದ ಅರಳಾಳುಸಂದ್ರ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶನಿವಾರ ಕುಮಾರಸ್ವಾಮಿ ಭೂಮಿ ಪೂಜೆ ನೇರವೇರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, "ಜನರಿಗೆ ಗುಣಾತ್ಮಕ ಕೆಲಸ ಮಾಡಿ, ಯಾವುದೇ ಅಪೇಕ್ಷೆ ಇಲ್ಲ ಎಂದು ಗುತ್ತಿಗೆದಾರರಿಗೆ ಸೂಚನೆ ಇದು ನನ್ನ ನೇಚರ್" ಎಂದು ಹೇಳಿದರು.
"ನಾನು ನಿಮಗೆ ಬಸ್ ಮಾಡಿ ಕೊಡುತ್ತೇನೆ. ಸಿಂಧಗಿಗೆ ಹೋಗಿ ಬನ್ನಿ. ಅಲ್ಲಿನ ಜನ ಹೇಗೆ ಬದುಕುತ್ತಿದ್ದಾರೆ ನೋಡಿ. ನಾವು ಇಲ್ಲಿ ಅಭಿವೃದ್ಧಿ ಮಾಡಿರುವುದನ್ನು ನೋಡಿ. ನನ್ನ ಖರ್ಚಿನಲ್ಲಿಯೇ ಬಸ್ ಮಾಡಿ ಕೊಡುವೆ ಹೋಗಿ ಬನ್ನಿ. ನನ್ನ ಅಭಿವೃದ್ಧಿ ಬಗ್ಗೆ ಟೀಕೆ ಮಾಡುವವರಿಗೆ ನಾನು ಹೇಳುತ್ತಿದ್ದೇನೆ" ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

"ಕಳೆದ ಅವಧಿಯಲ್ಲಿ ಪ್ರತಿ ಕಾಮಗಾರಿಗೂ ಪೇಮೆಂಟ್ ಹೋಗಬೇಕಿತ್ತು. ಇಲ್ಲದಿದ್ದರೆ ಶಾಸಕರು ಗುದ್ದಲಿ ಹಿಡಿಯುತ್ತಿರಲಿಲ್ಲ. ಈಗಲೂ ಕೆಲ ಕ್ಷೇತ್ರದಲ್ಲಿ ಈ ರೀತಿ ನಡೆಯುತ್ತಿದೆ. ಇದನ್ನು ನಾನು ಓಪನ್ ಆಗಿ ಹೇಳುತ್ತೇನೆ. ಈ ಬಗ್ಗೆ ಈಗಿರುವ ಗುತ್ತಿಗೆದಾರರನ್ನು ಕೇಳಿ ನೋಡಿ" ಎಂದು ಬಿಜೆಪಿ ನಾಯಕ ಸಿ. ಪಿ. ಯೋಗೀಶ್ವರ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
"ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವಿಚಾರದಲ್ಲಿ ನಾನು ಗಂಭೀರವಾಗಿದ್ದೇನೆ. ದಾಖಲೆಗಳೊಂದಿಗೆ ಕಚೇರಿಗೆ ಬಂದಿರುವ ಅರ್ಜಿಗಳು ಎಷ್ಟು?, ಆ ಅರ್ಜಿಗಳು ಎಷ್ಟು ಪೆಂಡಿಂಗ್ ಇದ್ದಾವೆ ಅನ್ನೋ ಮಾಹಿತಿ ಬೇಕು" ಎಂದು ಚನ್ನಪಟ್ಟಣದಲ್ಲಿ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
"ತಾಲೂಕು ಕಚೇರಿಯಲ್ಲಿ ಹಣಕ್ಕಾಗಿ ರೈತರ ಅರ್ಜಿಗಳನ್ನು ಎಷ್ಟು ಪೆಂಡಿಂಗ್ ಇಟ್ಟಿದ್ದಾರೆ ಅನ್ನೋ ದಾಖಲೆ ಕೊಡಲಿ. ನಾನು ಯಾರದೋ ಹೇಳಿಕೆಗೆ ಉತ್ತರ ಕೊಡಲ್ಲ. ಕಾನೂನು ಬಾಹಿರವಾಗಿ ಭೂಮಿ ಹೊಡೆಯುವವರಿಗೆ ನಾನು ಪ್ರೋತ್ಸಾಹ ಎಂದಿಗೂ ಕೊಡುವ ಪ್ರಶ್ನೆಯೇ ಇಲ್ಲ" ಎಂದರು.
"ಭ್ರಷ್ಟಾಚಾರ ಯಾರೇ ಮಾಡಲಿ. ಅದು ನನ್ನ ಪಕ್ಷದಲ್ಲಿಯೇ ಇರಲಿ, ಬೇರೆ ಪಕ್ಷದಲ್ಲಿಯೇ ಇರಲಿ ಪ್ರೋತ್ಸಾಹ ಕೊಡಲ್ಲ. ಅದರಲ್ಲೂ ಬಡವರ ಹೆಸರಿನಲ್ಲಿ ಭೂಮಿ ಹೊಡೆಯುವವರಿಗೆ ನಾನು ಪ್ರೋತ್ಸಾಹ ಕೊಡಲ್ಲ. ಬಡವರ ಕೆಲಸಕ್ಕಾಗಿ ಮಾತ್ರ ನಾನಿದ್ದೇನೆ" ಎಂದು ಯೋಗಿಶ್ವರ್ ವಿರುದ್ಧ ಪರೋಕ್ಷವಾಗಿ ಗುಡುಗಿದರು.
"ಅಧಿಕಾರಿಗಳು ಹೆದರುತ್ತಿದ್ದಾರೆ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ಆದರೆ ಅಧಿಕಾರಿಗಳು ಮಾತ್ರ ಮಂತ್ರಿಗಳಿಗೆ ಹೆದರುತ್ತಿದ್ದಾರೆ. ಯಾವುದಾರೂ ಕಟ್ಟಡದ ವೀಕ್ಷಣೆಗೆ ಹೋಗಬೇಕಾದರೂ ಪ್ರೋಟೋಕಾಲ್ ಅಂತಾರೆ" ಎಂದು ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.
"ಎಲ್ಲದಕ್ಕೂ ಜಿಲ್ಲಾ ಮಂತ್ರಿ ಹಾಗೂ ಇತರೆ ಜನಪ್ರತಿನಿಧಿಗಳಿಗೆ ಹೇಳಬೇಕು ಅಂತಾರೆ. ಇಲ್ಲಿ ಕೆಲಸ ಮಾಡೋಕೆ ಕುಮಾರಸ್ವಾಮಿ ಬೇಕು, ಆದರೆ ಅಧಿಕಾರಿಗಳು ಪ್ರೋಟೋಕಾಲ್ ಅಂತಾರೆ. ಜನರ ಪರವಾಗಿ ಕೆಲಸ ಮಾಡಿ, ಹೆದರಬೇಡಿ ನಾನು ನಿಮ್ಮ ಬೆಂಬಲಕ್ಕೆ ಇದ್ದೇನೆ" ಎಂದು ಕುಮಾರಸ್ವಾಮಿ ಅಧಿಕಾರಿಗಳಿಗೆ ಹೇಳಿದರು.
ಯೋಗೀಶ್ವರ್ ಪಕ್ಷ ಬಿಡೋಲ್ಲ; "ಸಿ. ಪಿ. ಯೋಗೀಶ್ವರ್ ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯಿಲ್ಲ, ಅವರು ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದರು.
ಮಾಜಿ ಸಚಿವ ಸಿ. ಪಿ. ಯೋಗೀಶ್ವರ್ ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಾಂಗ್ರೆಸ್ ಸೇರುವಂತೆ ಡಿ. ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಚನ್ನಪಟ್ಟದಲ್ಲಿ ಸ್ಪಷ್ಟನೆ ನೀಡಿದರು.
"ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ನಾಯಕರಿಗೆ ಇಷ್ಟೊಂದು ಮಾನ್ಯತೆ ನೀಡಿದ್ದಾರೆ. ಆದರೆ ಸಿ. ಪಿ. ಯೋಗೀಶ್ವರ್ ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಯೋಗೀಶ್ವರ್ ನಮ್ಮ ಪಕ್ಷದಲ್ಲೇ ಇರುತ್ತಾರೆ. ನಮ್ಮ ನಾಯಕರಾಗಿ ಇರುತ್ತಾರೆ, ನಮ್ಮ ನಾಯಕರಾಗಿ ಬಿಜೆಪಿಯಲ್ಲೇ ಸದೃಢವಾಗಿ ಬೆಳೆಯುತ್ತಾರೆ" ಎಂದರು.












Click it and Unblock the Notifications