42 ರೈತರ ಸಮಾಧಿ ಮೇಲೆ ಕಾಂಗ್ರೆಸ್ ಮಹಾಘಟಬಂಧನ್-ಕುಮಾರಸ್ವಾಮಿ ಕಿಡಿ
ರಾಮನಗರ, ಜುಲೈ 17: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ನಂತರದಲ್ಲಿ ಸುಮಾರು 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಬಗ್ಗೆ ಚಿಂತನೆ ಇಲ್ಲ. ಐದು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಕೃಷಿ ಇಲಾಖೆ ಸಂಪೂರ್ಣ ಕಡೆಗಣಿಸಿದ್ದಾರೆ. ರೈತರ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಿಲ್ಲ. ಹಾಗಾಗಿ ಇದೊಂದು ಧರಿದ್ರ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹಿಂದಿನ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಟೀಕೆಗಳನ್ನು ಮಾಡುತ್ತಾರೆ. ಅದರೆ ಪ್ರಾರಂಭಿಕವಾಗಿಯೇ ಈ ಸರ್ಕಾರದಕ್ಕೆ ಆರ್ಥಿಕ ಶಿಸ್ತು ಇಲ್ಲ. ಐದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಲೂಟಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಇವತ್ತು ಮಹಾಘಟ ಬಂಧನ್ ವಿಚಾರವಾಗಿ ಸಭೆ ಮಾಡುತ್ತಿದ್ದಾರೆ. ಏರ್ಪೋರ್ಟ್ನಿಂದ ತಾಜ್ ವೆಸ್ಟೆಂಡ್ ಹೋಟೆಲ್ವರೆಗೂ ದೊಡ್ಡ ದೊಡ್ಡ ಬ್ಯಾನರ್ ಕಟ್ಟಿದ್ದಾರೆ. ಪಾಪ ರೈತರ ಸಮಾಧಿ ಮೇಲೆ ವಿಜೃಂಭಣೆ ಮಾಡ್ತಿದ್ದಾರೆ. ರೈತರ ಸಮಾಧಿ ಮೇಲೆ ಈ ಮಹಾಘಟಬಂಧನ್ ಮಾಡ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು.
ದೇಶದ ಇತಿಹಾಸದಲ್ಲಿ ವರ್ಗಾವಣೆ ದಂಧೆ ಲೂಟಿ
ಕೋಟ್ಯಾಂತರ ರೂಪಾಯಿ ಹಣವನ್ನು. ವರ್ಗಾವಣೆ ರೂಪದಲ್ಲಿ ತೆಗೆದುಕೊಂಡಿದ್ದಾರೆ. ಲಂಚ ಕೊಟ್ಟ ಅಧಿಕಾರಿ ತನ್ನ ಜೇಬು ತುಂಬಿಸಿಕೊಳ್ಳಲು ಕಡೆಗೆ ಜನಸಾಮಾನ್ಯರ ಜೇಬಿಗೆ ಕೈ ಹಾಕುತ್ತಾನೆ. ಇಂತಹ ಕೆಟ್ಟ ಸರ್ಕಾರವನ್ನು ನಾನು ಈವರೆಗೂ ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಜೆಡಿಎಸ್ಗೆ ವಿಪಕ್ಷ ಸ್ಥಾನ ನೀಡುತ್ತಾರೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ನಾಡಿನ ಜನರು ನನ್ನ ಸ್ಥಾನಮಾನಗಳಿಂದ ಗುರುತಿಸಿಲ್ಲ. ಎಲ್ಲಿಯೇ ಹೋದರು ಕುಮಾರಸ್ವಾಮಿ ಎನ್ನುವುದು ಒಂದು ಗುಡ್ ವಿಲ್ ಇಟ್ಟುಕೊಂಡಿದ್ದೇನೆ. ಸ್ಥಾನಮಾನಗಳನ್ನು ಪಡೆದು ಗುಡ್ ವಿಲ್ ಮುಂದುವರೆಯಬೇಕಿಲ್ಲ. ವಿಪಪಕ್ಷ ನಾಯಕನ ವಿಚಾರದಲ್ಲಿ ಪಕ್ಷದ ವತಿಯಿಂದ ಯಾವುದೇ ರೀತಿಯ ಮಾತುಕತೆ ಆಗಿಲ್ಲ. ಮಾತುಕತೆಯಾಗದೆ ಡಿಮ್ಯಾಂಡ್ ಎಲ್ಲಿಂದ ಬರುತ್ತದೆ..? ನನಗೆ ಯಾವ ರಾಷ್ಟ್ರ ರಾಜಕಾರಣ ಬಗ್ಗೆ ಒಲವಿಲ್ಲ. ಕೇಂದ್ರದಲ್ಲಿ ಮಂತ್ರಿ ಆಗುವ ಬಗ್ಗೆಯೂ ಒಲವು ಇಲ್ಲ. ನಾಡಿನ ಜನರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ ಎಂದರು.

ಇನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಮರ್ಥವಾದ ನಾಯಕರು ಬಿಜೆಪಿಯಲ್ಲಿ ಇದ್ದಾರೆ. 65 ಜನರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಬಿಜೆಪಿಯ ವರಿಷ್ಠರು ಕಾಲಾಹರಣ ಮಾಡದೆ ಯಾರಾದರೂ ಸಮರ್ಥವಾದ ವ್ಯಕ್ತಿ ಘೋಷಣೆ ಮಾಡಲಿ ಎಂದು ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾಡಿಗೆ ದರಿದ್ರ
ಮುಂಗಾರು ಮಳೆ ಕೊರತೆ, ತಮಿಳುನಾಡಿನಿಂದ ನೀರಿನ ಖ್ಯಾತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಟ್ರಿಬುನಲ್ ಕೋರ್ಟ್ನಲ್ಲಿ ನೀರು ಹಂಚಿಕೆ ಬಗ್ಗೆ ತೀರ್ಪು ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಅವರು ನೀರು ಕೇಳುತ್ತಾರೆ. ಈಗ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಬೇಕು. ಕಾಂಗ್ರೆಸ್ ಸರ್ಕಾರ ಬಂದರೆ ನಾಡಿಗೆ ದರಿದ್ರ, ಬರ ಬರುತ್ತದೆ ಎನ್ನುವ ಪ್ರತೀತಿ ಇದೆ. ಯಾಕೋ ಈಗಲೂ ಅದೇ ವಾತಾವರಣ ಇದೆ ನೋಡೊಣ ಎಂದರು.
ಬಿಜೆಪಿ ಪಕ್ಷದ ಬಗ್ಗೆ ಕುಮಾರಸ್ವಾಮಿಗೆ ಒಲವು ವಿಚಾರವಾಗಿ ಮಾತನಾಡಿದ ಅವರು, ನನಗೆ ಯಾರ ಬಗ್ಗೆಯೂ ಸಾಫ್ಟ್ ಕಾರ್ನ್ ಇಲ್ಲ. ನಾಡಿನ ಜನತೆ ಕಷ್ಟದ ಬಗ್ಗೆ ಸಾಫ್ಟ್ ಕಾರ್ನ್ ಇದೆ. ಪಕ್ಷಗಳ ಬಗ್ಗೆ ಸಾಫ್ಟ್ ಕಾರ್ನ್ ಇಟ್ಕೊಂಡು ಏನು ಮಾಡಲಿ ಎಂದು ಜೆಡಿಎಸ್ ಅವಕಾಶವಾದಿ ರಾಜಕಾರಣ ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ವಿರುದ್ಧ ಕಿಡಿಕಾರಿದ ಅವರು, ಅವರೆಲ್ಲ ಯಾವ ರಾಜಕಾರಣ ಮಾಡ್ತಿದ್ದಾರಂತೆ. ಡಿಎಂಕೆ ಜೊತೆ ಸೇರಿ 10ವರ್ಷ ಸರ್ಕಾರ ಮಾಡಿದ್ರಲ್ಲ, ಅದು ಯಾವ ರಾಜಕಾರಣ. ಯಾವ ರೀತಿ ರಾಜಕೀಯ ಮಾಡಬೇಕು ಎಂದು ದಿನೇಶ್ ಗುಂಡೂರಾವ್ ಅವರಿಂದ ಕಲಿಯಬೇಕಾ. ಅಂತಹ ಸ್ಥಿತಿ ನನಗೆ ಬಂದಿಲ್ಲ ಎಂದರು.












Click it and Unblock the Notifications