ರಾಮನಗರವನ್ನ ಜಿಲ್ಲೆಯನ್ನಾಗಿ ಮಾಡಿದ್ದು ಇದೇ ಕಾರಣಕ್ಕೆ: ಕಾಂಗ್ರೆಸ್ ಹೇಳಿದ್ದೇನು?
ಬೆಂಗಳೂರನ್ನು ವಿಸ್ತರಿಸಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಪರಿಕಲ್ಪನೆಗೆ ಜೆಡಿಎಸ್ ಪಕ್ಷದಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಪಕ್ಕದ ರಾಮನಗರ ಜಿಲ್ಲೆಯ ಹಲವು ಗ್ರಾಮಗಳು ಕೂಡ ಸೇರಿಕೊಳ್ಳಲಿದ್ದು, ರಿಯಲ್ ಎಸ್ಟೇಟ್ ಉದ್ದೇಶದಿಂದ ಈ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ ಎಂದು ಜೆಡಿಎಸ್ ಆರೋಪ ಮಾಡಿತ್ತು. ಕಾಂಗ್ರೆಸ್ ಸರ್ಕಾರ ತಂದಿರುವ "ಗ್ರೇಟರ್ ಬೆಂಗಳೂರು" ಬಿಲ್ ಕನ್ನಡಿಗರ ಪಾಲಿನ ಮರಣ ಶಾಸನ ಎಂದು ಹೇಳಿತ್ತು. ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ. ಇದೇ ವೇಳೆ ರಾಮನಗರವನ್ನು ಜಿಲ್ಲಾ ಕೇಂದ್ರ ಮಾಡಿದ್ದು ಯಾವ ಕಾರಣಕ್ಕೆ ಎಂಬುದನ್ನೂ ಉಲ್ಲೇಖಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಬೆಂಗಳೂರು ನಗರವು ಕೆಂಪೇಗೌಡರು ಕಟ್ಟಿಸಿದ ಗೋಪುರ ಮೀರಿ ಬೆಳೆದಿದೆ. ಕೆಂಪೇಗೌಡರ ದೂರದೃಷ್ಟಿಯಂತೆ ಈಗಲೂ ಬೆಳೆಯುತ್ತಲೇ ಇದೆ. ಈಗ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ, ಮುಂದೆಯೂ ಆಗುವುದಿಲ್ಲ. ಈ ಹಿಂದೆ ಅಧಿಕಾರ ವಿಕೇಂದ್ರಿಕರಣದ ಉದ್ದೇಶದಿಂದಲೇ ಬೆಂಗಳೂರು ಮೂರು ಜಿಲ್ಲೆಯಾಯಿತು. ಈಗಲೂ ಕೂಡ ಆಡಳಿತಾತ್ಮಕ ದೃಷ್ಟಿಯಿಂದಲೇ ಪಾಲಿಕೆ ವಿಭಜನೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.

2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ಪ್ರತ್ಯೇಕ ಜಿಲ್ಲೆಯಾಗಿತ್ತು. ಇದನ್ನೂ ಉಲ್ಲೇಖಿಸಿರುವ ಕಾಂಗ್ರೆಸ್, ಬೆಂಗಳೂರನ್ನು ಇಬ್ಭಾಗ ಮಾಡಿ ರಾಮನಗರ ಜಿಲ್ಲೆಯಾಗಿಸಿದ್ದು ಸನ್ಮಾನ್ಯ ಬ್ರದರ್ ಸ್ವಾಮಿಗಳು ರಿಯಲ್ ಎಸ್ಟೇಟ್ ದಂಧೆ ನಡೆಸುವುದಕ್ಕಾ? ಎಂದು ಜೆಡಿಎಸ್ಗೆ ಪ್ರಶ್ನೆಯೂ ಕೇಳಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಂತ ಪರಿಶ್ರಮದಿಂದ ಅವಶ್ಯಕತೆಯಷ್ಟು ಸಂಪಾದಿಸಿದ್ದಾರೆ. ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಕಳ್ಳಾಟವಾಡುತ್ತಿರುವ ಪ್ರಭಾವಿ ಕುಟುಂಬದಂತೆ ದಂಧೆ ನಡೆಸುವ ಅವಶ್ಯಕತೆ ಅವರಿಗಿಲ್ಲ ಎಂದು ತಿರುಗೇಟು ನೀಡಿದೆ.
ಕರ್ನಾಟಕ, ಕನ್ನಡಿಗರಿಗೆ ನಿರಂತರ ದ್ರೋಹ ಬಗೆಯುತ್ತಿರುವ ಬಿಜೆಪಿಯವರೊಂದಿಗೆ ಅನಧಿಕೃತ ವಿಲೀನ ಮಾಡಿಕೊಂಡು, ಅವಲಕ್ಷಣ ಎನಿಸಿಕೊಂಡು ಮೋದಿ ಮುಂದೆ ಮಂಡಿಯೂರಿದ ವಿಲಕ್ಷಣ ರಾಜಕಾರಣ ಮಾಡಿದವರಿಗೆ ದಿಢೀರ್ ಕನ್ನಡಿಗರು ಹಾಗೂ ಬೆಂಗಳೂರಿನ ಬಗ್ಗೆ ಕಾಳಜಿ ಉಕ್ಕಿ ಹರಿಯುತ್ತಿರುವುದು ಆಶ್ಚರ್ಯಕರ ಎಂದು ಜೆಡಿಎಸ್ಗೆ ಲೇವಡಿ ಮಾಡಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ಅವರು ಮಂಡಿಸಿದ ಗ್ರೇಟರ್ ಬೆಂಗಳೂರು ವಿಧೇಯಕ ಬೆಂಗಳೂರಿನ ಆಡಳಿತವನ್ನು ವಿಕೇಂದ್ರೀಕರಣ ಮಾಡುವ ಮೂಲಕ ಬೆಂಗಳೂರು ನಗರವನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸುವ ದೂರದೃಷ್ಟಿಯ, ಮಹತ್ತರ ಉದ್ದೇಶ ಹೊಂದಿದೆ. ಜನರ ದಿಕ್ಕುತಪ್ಪಿಸುವ, ಕಲ್ಪಿತ ಊಹಾಪೋಹಗಳನ್ನು ಹರಿಬಿಡುವುದು, ಆರೋಪ ಮಾಡುವುದು, ಮೋದಿ ಮುಂದೆ ಜೀ ಹುಜೂರ್ ಎನ್ನುವುದು ಬಿಟ್ಟು ಪಳೆಯುಳಿಕೆ ಪಕ್ಷವಾದ ನಿಮಗಾದರೂ ಇನ್ನೇನು ಉಳಿದಿದೆ? ಎಂದು ಟೀಕಿಸಿದೆ.

ಬೆಂಗಳೂರು ಗ್ರೇಟ್ ಆಗಿಯೇ ಇದೆ: ಜೆಡಿಎಸ್
ಗ್ರೇಟರ್ ಬೆಂಗಳೂರಿನ ಹಿಂದೆ ಬೆಂಗಳೂರಿನ ಅಭಿವೃದ್ಧಿಯ ಹಿತಾಸಕ್ತಿಗಿಂತ ಡಿಕೆ ಶಿವಕುಮಾರ್ ಅವರ ರಿಯಲ್ ಎಸ್ಟೇಟ್ ಹಿತಾಸಕ್ತಿಯೇ ಅಡಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಗ್ರೇಟರ್ ಬೆಂಗಳೂರು ಎನ್ನುವುದು ಅಧಿಕಾರದ ವಿಕೇಂದ್ರೀಕರಣವಲ್ಲ. ಕಾಂಗ್ರೆಸ್ ಸರ್ಕಾರದ ಹೊಡೆದು ಆಳುವ ವಿಲಕ್ಷಣ ರಾಜಕಾರಣ ಎಂದು ಜೆಡಿಎಸ್ ಆರೋಪ ಮಾಡಿತ್ತು. ಬಿಬಿಎಂಪಿಯನ್ನು ಏಳು ವಿಭಾಗಗಳಾಗಿ ವಿಭಜಿಸುವುದು, ಬೆಂಗಳೂರನ್ನು ಪರಭಾಷಿಕರ ತೆಕ್ಕೆಗೆ ನೀಡುವುದಕ್ಕೆ ಸಿದ್ದರಾಮಯ್ಯ ಸರ್ಕಾರ ಅಂಕಿತ ಹಾಕಿದೆ. ಬೆಂಗಳೂರು ಮೊದಲಿನಿಂದಲೂ ಗ್ರೇಟ್ ಆಗಿಯೇ ಇದೆ. ಗ್ರೇಟರ್ ಬೆಂಗಳೂರಿನ ಅವಶ್ಯಕತೆಯೇ ಇಲ್ಲ. ಇದು ಅಭಿವೃದ್ಧಿಯ ನೆಪದಲ್ಲಿ ಕನ್ನಡಿಗರ ಒಕ್ಕಲೆಬ್ಬಿಸುವ ಕುತಂತ್ರವಷ್ಟೇ ಎಂದು ದೂರಿತ್ತು.












Click it and Unblock the Notifications