'ಕಂಡವ್ರ ಮಕ್ಕಳನ್ನು ಕಿಡ್ನಾಪ್ ಮಾಡಿಸುವುದು': ಡಿಕೆ ಬ್ರದರ್ಸ್ ವಿರುದ್ದ ಬೆಂಕಿ ಉಗುಳಿದ ಎಚ್ಡಿಕೆ
ರಾಮನಗರ, ಮಾರ್ಚ್ 13: ಬಿಡದಿ ಬಳಿಯಿರುವ ಈಗಲ್ಟನ್ ರೆಸಾರ್ಟ್ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾವಿಸಿದ್ದಕ್ಕೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದರು. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಾಧ್ಯಮದವರ ಜೊತೆಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, "ನೀರಾವರಿ ವಿಚಾರದ ಬಗ್ಗೆ ಸದನದಲ್ಲಿ ಸುದೀರ್ಘವಾಗಿ ಮಾತನಾಡಿದೆ, ಅದನ್ನು ಅವರು ನೋಡಿದ್ದಾರಾ"ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಅಂತವರಿಂದ ರಾಜಕೀಯ ಕಲಿಯುವ ಅವಶ್ಯಕತೆ ನನಗಿಲ್ಲ ಎಂದು ತಿರುಗೇಟು ನೀಡಿದರು.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದೇಬಿಟ್ಟೆವು ಎಂದು ಬೀಗುತ್ತಿದ್ದವರಿಗೆ ಶಾಕ್: ಕುಮಾರಸ್ವಾಮಿ
"ಈಗಲ್ಟನ್ ನವರು 98ಸಾವಿರ ರೂಪಾಯಿ ಬಿಲ್ ಕೊಡಬೇಕಾಯಿತು ಎಂದು 980ಕೋಟಿ ರೂಪಾಯಿಗಳನ್ನು ಮಾಡಿದವರು ಇದೇ ಕನಕಪುರದ ಬ್ರದರ್ಸ್. ನಾನು ರಾಮನಗರದ ಜನಪ್ರತಿನಿಧಿ, ಯಾವುದೇ ವಿಷಯದಲ್ಲಿ ಜನರಿಗೆ ತೊಂದರೆಯಾದರೆ ಅದರ ಬಗ್ಗೆ ಮಾತನಾಡುವುದು ನನ್ನ ಕರ್ತವ್ಯ"ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡರು.
"ಸದನದಲ್ಲಿ ಏನು ಮಾತನಾಡಬೇಕು, ರೈತರ ಬಗ್ಗೆ ಏನು ನಿಲುವನ್ನು ತೆಗೆದುಕೊಳ್ಳಬೇಕು ಎಂದು ಅವರಿಂದ ಕಲಿಯಬೇಕಾಗಿಲ್ಲ. ಕನಕಪುರದಲ್ಲಿ ಎಷ್ಟು ರೈತ ಕುಟುಂಬವನ್ನು ಹಾಳು ಮಾಡಿದ್ದಾರೆ ಎನ್ನುವುದನ್ನು ಅವರು ಒಮ್ಮೆ ಅವಲೋಕಿಸಿಕೊಳ್ಳಲಿ"ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕುಮಾರಸ್ವಾಮಿಗೆ ಮಂಡ್ಯ ರೈತರಿಂದ ಜೋಡಿ ಎತ್ತುಗಳ ಕಾಣಿಕೆ
ನೀರಾವರಿ ಬಗ್ಗೆ ಸುಮಾರು ಮೂರು ತಾಸು ಸದನದಲ್ಲಿ ಮಾತನಾಡಿದೆ
"ಹಣದ ದಾಹಕ್ಕೆ ಆ ಬ್ರದರ್ಸ್ ಮಾಡದಿರದ ಕೆಲಸವಿಲ್ಲ, ಎಷ್ಟು ಜನರ ಜಮೀನನ್ನು ಒತ್ತುವರಿ ಮಾಡಿಸಿ ಬಂಡೆಗಳನ್ನು ಒಡೆದು ವಿದೇಶಕ್ಕೆ ಸಾಗಿಸಿದ ಇತಿಹಾಸ ಅವರದ್ದು. ರೈತರ ಬಗ್ಗೆ ಅಂತಹ ಕುಟುಂಬದಿಂದ ನಾನು ಕಲಿಯುವುದೇನಿಲ್ಲ. ನೀರಾವರಿ ಬಗ್ಗೆ ಸುಮಾರು ಮೂರು ತಾಸು ಸದನದಲ್ಲಿ ಮಾತನಾಡಿದೆ. ಈ ವಿಚಾರದ ಬಗ್ಗೆ ಏನಾದರೂ ಈ ಬ್ರದರ್ಸ್ ತಿಳಿದುಕೊಂಡಿದ್ದಾರಾ"ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಎತ್ತಿನಹೊಳೆ, ಮೇಕೆದಾಟು, ಅಪ್ಪರ್ ಕೃಷ್ಣ, ನವಿಲೆ ಡ್ಯಾಂ
"ಎತ್ತಿನಹೊಳೆ, ಮೇಕೆದಾಟು, ಅಪ್ಪರ್ ಕೃಷ್ಣ, ನವಿಲೆ ಡ್ಯಾಂ ಮುಂತಾದ ವಿಚಾರದಲ್ಲಿ ಮಾತನಾಡಿದೆ. ಈ ವಿಷಯದ ಬಗ್ಗೆ ಕಿಂಚಿತ್ತಾದರೂ ಅವರುಗಳಿಗೆ ಮಾಹಿತಿಯಿದೆಯಾ? ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನತೆಗೆ ದ್ರೋಹ ಮಾಡಿದ್ದಾರೆ ಎನ್ನುವುದರ ಬಗ್ಗೆಯೂ ಸದನದಲ್ಲಿ ಮಾತನಾಡಿದ್ದೇನೆ. ಈಗಲ್ಟನ್ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಚರ್ಚೆ ಮಾಡಿದ್ದೇನೆ"ಎಂದು ಕುಮಾರಸ್ವಾಮಿ ಹೇಳಿದರು.
"ಈಗಲ್ಟನ್ ಗೆ 98,000 ರೂ. ಬಿಲ್ ಕೊಡಬೇಕು ಎಂದು ಹೇಳಿ 982 ಕೋಟಿ ರೂ. ದಂಡ ಹಾಕಿದ್ದು ಯಾರು? ಇದು ಯಾವ ಸೀಮೆ ನ್ಯಾಯ? ನಾನು ರಾಮನಗರದಲ್ಲಿ ಇರುವುದರಿಂದಲೇ ಈ ಅನ್ಯಾಯವನ್ನು ಪ್ರಶ್ನೆ ಮಾಡಿದ್ದೇನೆ. ಅನ್ಯಾಯವನ್ನು ಅನ್ಯಾಯ ಎನ್ನುವುದೂ ತಪ್ಪೇ? ಅಂದರೆ, ಇವರು ಮಾಡುವ ಎಲ್ಲ ಅನ್ಯಾಯಗಳನ್ನು ಸಹಿಸಿಕೊಂಡು ಇರಬೇಕೆ?" ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ ಬ್ರದರ್ಸ್ ವಿರುದ್ದ ಭಾರೀ ಆರೋಪ ಹೊರಿಸಿದ ಕುಮಾರಸ್ವಾಮಿ
"ಜನಪ್ರತಿನಿಧಿಗಳ ಕರ್ತವ್ಯ ಡಿಕೆ ಸಹೋದರರು ಕಂಡುಕೊಂಡಿದ್ದು ಏನಂದರೆ, ಕಂಡವರ ಆಸ್ತಿಯನ್ನು ಲೂಟಿ ಹೊಡೆಯುವುದು, ಮಕ್ಕಳನ್ನು ಕಿಡ್ನಾಪ್ ಮಾಡಿಸುವುದು. ತಂದೆತಾಯಿಗಳನ್ನು ಹೆದರಿಸಿ ಬೆದರಿಸಿ ಆಸ್ತಿಪತ್ರದ ಮೇಲೆ ರುಜು ಹಾಕಿಸಿಕೊಳ್ಳುವುದು. ಇಂತಹ ಹೇಸಿಗೆ ಜೀವನವನ್ನು ನಾನು ಮಾಡಿಲ್ಲ"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಡಿಕೆಶಿ ಬ್ರದರ್ಸ್ ವಿರುದ್ದ ಭಾರೀ ಆರೋಪವನ್ನು ಹೊರಿಸಿದರು.
"ನನ್ನ ಮತಕ್ಷೇತ್ರಕ್ಕೆ ಬರಲು ಯಾರೋಬ್ಬರ ಪರ್ಮಿಷನ್ ಪಡೆದು ಬರಬೇಕಿಲ್ಲ. ನನ್ನನ್ನು ರಾಜಕೀಯವಾಗಿ ಬೆಳಸಿದ, ಮರುಜನ್ಮ ಕೊಟ್ಟ ಕ್ಷೇತ್ರವಿದು. ಈ ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಮಾಡಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದೆ. ಬರೀ ರಾಮನಗರ ಮಾತ್ರವಲ್ಲ, ಇಡೀ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದೇನೆ. ಅದೇ ಬೇರೆಯವರು ಏನು ಮಾಡಿದ್ದಾರೆ ಎನ್ನುವುದನ್ನು ಹೇಳಲಿ. ಅವರ ಹಣೆಬರಹ ಜನರಿಗೆ ಚೆನ್ನಾಗಿ ಗೊತ್ತಾಗಿದೆ. ಇವರು ಅಲಿಬಾಬಾ ನಲವತ್ತು ಕಳ್ಳರು ಅಂತಾರಲ್ಲ ಹಾಗೆ" ಎಂದು ಕುಮಾರಸ್ವಾಮಿ ತಮ್ಮ ವಿರೋಧಿಗಳಿಗೆ ಚುರುಕು ಮುಟ್ಟಿಸಿದರು.
ಅವರ ಬಣ್ಣ ಬಯಲಾಗಿರುವಂತಹ ಈ ಸಂದರ್ಭ, ಡಿ.ಕೆ.ಸುರೇಶ್
"ರೈತರ ಕಷ್ಟದ ಬಗ್ಗೆ ಕುಮಾರಸ್ವಾಮಿಯವರು ಮಾತನಾಡಿದ್ದರೆ ನಾವು ಅದಕ್ಕೆ ಉತ್ತರ ಕೊಡಬಹುದಾಗಿತ್ತು. ಅವರ ಬಣ್ಣ ಬಯಲಾಗಿರುವಂತಹ ಈ ಸಂದರ್ಭದಲ್ಲಿ ಆ ಬಗ್ಗೆ ಹೆಚ್ಚಿಗೆ ಹೇಳಲು ಬಯಸುವುದಿಲ್ಲ. ಕಾನೂನಿನ ಪ್ರಕಾರ ಈಗಲ್ಟನ್ ನಲ್ಲಿ ಒತ್ತುವರಿಯಾಗಿತ್ತು. ಇವತ್ತು ಸದನದಲ್ಲಿ ಒಬ್ಬರ ಪರವಾಗಿ ಕುಮಾರಸ್ವಾಮಿ ಮಾತನಾಡಿದ್ದಾರೆ"ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದರು.
Recommended Video