ಉಪಚುನಾವಣೆ: ಬಿಜೆಪಿಗೆ ಭರ್ಜರಿ ಶಾಕ್ ಕೊಟ್ಟ ಡಿ.ಕೆ.ಬ್ರದರ್ಸ್
Recommended Video

ರಾಮನಗರ, ನವೆಂಬರ್ 01: ಕೆಲವೇ ತಿಂಗಳುಗಳ ಹಿಂದೆ ಬಿಜೆಪಿ ತಮ್ಮ ವಿರುದ್ಧ ಕುತಂತ್ರ ನಡೆಸುತ್ತಿದೆ, ಐಟಿ, ಇಡಿಗಳನ್ನು ಬಳಸಿಕೊಂಡು ರಾಜಕೀಯವಾಗಿ ಮುಗಿಸಲು ನೋಡುತ್ತಿದೆ ಎಂದು ಆರೋಪ ಮಾಡಿದ್ದ ಡಿ.ಕೆ.ಸಹೋದರರು ಇಂದು ಅದೇ ಬಿಜೆಪಿಗೆ ಭಾರಿ ಪೆಟ್ಟು ನೀಡಿದ್ದಾರೆ.
ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್.ಚಂದ್ರಶೇಖರ್ ಅವರು ಮತದಾನಕ್ಕೆ ಎರಡು ದಿನ ಇದ್ದಂತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇಂತಹಾ ಘಟನೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಬಲು ಅಪರೂಪ. ರಾಮನಗರದ ಈ ಬೆಳವಣಿಗೆ ಬಿಜೆಪಿಗೆ ಭಾರಿ ಪೆಟ್ಟು ನೀಡಿರುವುದಂತೂ ಸತ್ಯ.
ಕಾಂಗ್ರೆಸ್ ಸೇರಿರುವ ಚಂದ್ರಶೇಖರ್ ಅವರು ಬಿಜೆಪಿಯು ತಮ್ಮನ್ನು ಒಂಟಿ ಮಾಡಿತು, ತಮ್ಮ ಪರವಾಗಿ ಪ್ರಚಾರಕ್ಕೆ ಬರಲಿಲ್ಲ, ನಿರ್ಲಕ್ಷ್ಯ ಮಾಡಿತು ಎಂದೆಲ್ಲಾ ಹೇಳಿದ್ದಾರೆ ಅವೆಲ್ಲ ಸತ್ಯವೂ ಇರಬಹುದು. ಆದರೆ ಈ ಬೆಳವಣಿಗೆ ಹಿಂದೆ ಡಿ.ಕೆ.ಶಿವಕುಮಾರ್ ಮತ್ತು ಸುರೇಶ್ ಇದ್ದಾರೆಂದು ಕ್ಷೇತ್ರದಲ್ಲಿ ಮಾತನಾಡುತ್ತಿದ್ದಾರೆ.

ಡಿ.ಕೆ.ಸುರೇಶ್, ಶಿವಕುಮಾರ್ ಕೈವಾಡ
ಅದರಲ್ಲಿಯೂ ಈ ಬೆಳವಣಿಗೆಯಲ್ಲಿ ಡಿ.ಕೆ.ಸುರೇಶ್ ಅವರ ಪಾತ್ರ ಹೆಚ್ಚಿದೆ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಕಟ್ಟಾ ಬೆಂಬಲಿಗರಾಗಿದ್ದ ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕಳುಹಿಸಿದ್ದೇ ಡಿ.ಕೆ.ಶಿವಕುಮಾರ್ ಮತ್ತು ಸುರೇಶ್ ಎಂಬ ಮಾತುಗಳೂ ರಾಮನಗರದಲ್ಲಿ ಹರಿದಾಡುತ್ತಿವೆ. ಬಿಜೆಪಿಗೆ ಹೀಗೊಂದು ಮರ್ಮಾಘಾತ ನೀಡಲೆಂದೇ ಸಹೋದರರು ಈ ಬಲೆ ಹೆಣೆದಿದ್ದರು ಎಂಬುದು ಸ್ಥಳೀಯರ ಮಾತು.

ಕುಮಾರಸ್ವಾಮಿ ಕೈವಾಡ?
ಪತ್ನಿ ಅನಿತಾ ಕುಮಾರಸ್ವಾಮಿ ಅವರ ಗೆಲುವನ್ನು ಸುಲಭವಾಗಿಸಲು ಚಂದ್ರಶೇಖರ್ ಅವರು ಕೊನೆಯ ಗಳಿಗೆಯಲ್ಲಿ ಬಿಜೆಪಿ ಬಿಡುವಂತೆ ಮಾಡುವಲ್ಲಿ ಸಿಎಂ ಕುಮಾರಸ್ವಾಮಿ ಅವರ ಪಾತ್ರವೂ ಬಹಳಷ್ಟಿದೆ ಎನ್ನಲಾಗುತ್ತಿದೆ. ಅನಿತಾ ಕುಮಾರಸ್ವಾಮಿ ಅವರು ಚುನಾವಣೆ ಸ್ಪರ್ಧಿಸಲು ಜೆಡಿಎಸ್ನ ಕೆಲವರು ಆರಂಭದಲ್ಲಿ ಅಸಹನೆ ವ್ಯಕ್ತಪಡಿಸಿದ್ದರು, ಅವರು ಈ ಚುನಾವಣೆಯಲ್ಲಿ ಜೆಡಿಎಸ್ಗೆ ವಿರೋಧವಾಗಿ ಕೆಲಸ ಮಾಡುವ ಸಾಧ್ಯತೆ ಇದ್ದ ಕಾರಣ ಕುಮಾರಸ್ವಾಮಿ ಅವರು ಈ ತಂತ್ರವನ್ನು ಹೂಡಿರುವ ಸಾಧ್ಯತೆಯೂ ಇದೆ.

ಬಿಜೆಪಿಯಲ್ಲಿ ಒಳಜಗಳ ಹುಟ್ಟಿಸಿದ ರಾಮನಗರ
ತಮ್ಮ ಅಭ್ಯರ್ಥಿ ಚಂದ್ರಶೇಖರ್ ಕೈಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಚಂದ್ರಶೇಖರ್ ಅನ್ನು ಬಿಜೆಪಿಗೆ ಕರೆತಂದವರು ಯಾರು ಅವರನ್ನು ಬಿಟ್ಟು ಹೋದವರು ಯಾರು? ಅವರೇ ಈ ಘಟನೆಗೆ ಉತ್ತರ ನೀಡಬೇಕು ಎಂದು ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ. ಚಂದ್ರಶೇಖರ್ ಅವರು ಕಾಂಗ್ರೆಸ್ಗೆ ಹಾರಿದ್ದಕ್ಕೆ ಆರ್.ಅಶೋಕ್, ಸದಾನಂದಗೌಡ ಅವರನ್ನು ದೋಷಿಗಳನ್ನಾಗಿಸಲಾಗುತ್ತಿದೆ.

ಕಾಂಗ್ರೆಸ್ಗೆ ಪ್ಲಸ್ ಅಥವಾ ಮೈನಸ್
ಚಂದ್ರಶೇಖರ್ ಅವರು ಕಾಂಗ್ರೆಸ್ಗೆ ಸೇರಿರುವುದು ಉಪಚುನಾವಣೆಯಲ್ಲಿ ಜೆಡಿಎಸ್ನ ಗೆಲುವನ್ನು ಅತ್ಯಂತ ಸುಲಭ ಮಾಡಿದೆಯಾದರೂ, ನೈತಿಕ ರಾಜಕಾರಣದ ದೃಷ್ಠಿಯಲ್ಲಿ ಕಾಂಗ್ರೆಸ್ಗೆ ಇದು ಹೊಡೆತ ಬೀಳುವ ಸಾಧ್ಯತೆ ಇದೆ. ಮತದಾನಕ್ಕೆ ಎರಡು ದಿನ ಇದ್ದಾಗ ಅಭ್ಯರ್ಥಿಯನ್ನೇ ತಮ್ಮತ್ತ ಸೆಳೆದುಕೊಂಡರು ಎಂಬುದನ್ನು ಬಿಜೆಪಿಯು ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ.












Click it and Unblock the Notifications