ವಿಡಿಯೋ: ಸಿಎಂ ಬೊಮ್ಮಾಯಿ ಸಮ್ಮುಖದಲ್ಲೇ ಸಚಿವ, ಸಂಸದರ ಗಲಾಟೆ
ರಾಮನಗರ, ಜನವರಿ 3: ರಾಮನಗರ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳೆ ಸಿಎಂ ಬಸವರಾಜ ಬೊಮ್ಮಯಿ ಸಮ್ಮುಖದಲ್ಲಿ ಸಚಿವ, ಸಂಸದರ ನಡುವೆ ಗಲಾಟೆ ನಡೆದಿದೆ.
ರಾಮನಗರದಲ್ಲಿ ಕಾರ್ಯಕ್ರಮ ವೇಳೆ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಮತ್ತು ಸಂಸದ ಡಿ.ಕೆ.ಸುರೇಶ್ ಮಧ್ಯೆ ವಾಕ್ಸಮರ ಉಂಟಾಗಿದ್ದು, ಸಚಿವ ಡಾ.ಅಶ್ವತ್ಥ್ ನಾರಾಯಣ ಭಾಷಣಕ್ಕೆ ಡಿ.ಕೆ. ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

'ನಮ್ಮ ಕಾಲದಲ್ಲೇ ಅಡಿಗಲ್ಲು, ನಮ್ಮ ಕಾಲದಲ್ಲೇ ಉದ್ಘಾಟನೆ' 'ನಮ್ಮ ಸರ್ಕಾರದಲ್ಲಿ ಬೇರೆ ಸರ್ಕಾರದ ರೀತಿ ಅಲ್ಲ' ಎಂದು ಅಶ್ವತ್ಥ್ ನಾರಾಯಣ ಭಾಷಣ ಮಾಡಿದರು. ನೀರಾವರಿ ಯೋಜನೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ನಮ್ಮ ಅಭಿವೃದ್ಧಿ ಮಾಡಿಕೊಳ್ಳುವುದನ್ನು ಮಾತ್ರ ಮಾಡಿಕೊಳ್ಳಲ್ಲ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿ, ಸಚಿವ ಅಶ್ವತ್ಥ್ ನಾರಾಯಣ ಜತೆ ಡಿ.ಕೆ. ಸುರೇಶ್ ವಾಕ್ಸಮರ ನಡೆಸಿದರು.
ಮೈಕ್ ಎಳೆದಾಡಿದ ಎಂಎಲ್ಸಿ ಎಸ್. ರವಿ
ಸಚಿವ ಅಶ್ವಥ್ ನಾರಾಯಣ ಬಳಿಯಿದ್ದ ಮೈಕ್ ಅನ್ನು ಎಂಎಲ್ಸಿ ಎಸ್. ರವಿ ಹಿಡಿದು ಎಳೆದಾಡಿದ್ದಾರೆ. ಏನು ತಪ್ಪಾಗಿದೆ ಎಂದು ಕೂಗೋದು, ಕೆಲಸದಲ್ಲಿ ತೋರಿಸಿ. ಕಾರ್ಯಕ್ರಮದಲ್ಲಿ ಗಲಾಟೆ ಮಾಡುವುದಾ? ಎಂದು ಡಾ.ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದ್ದಾರೆ.
"ನಾವು ಏನು ಮಾಡಿದ್ದೇವೆ ಎಂಬುದನ್ನು ತೋರಿಸುತ್ತೇವೆ. ಜಿಲ್ಲೆಗೆ ವಂಚನೆ ಮಾಡಲು ಬಂದಿಲ್ಲ. ಸಿಎಂ ಬಂದಾಗ ಅವರಿಗೆ ಅಗೌರವ ತೋರಿಸುತ್ತೀರಾ? ಸಿಎಂ ಸಹಕಾರ ಕೊಡಲು ಬಂದಿದ್ದಾರೆ, ರಾಜಕಾರಣಕ್ಕೆ ಅಲ್ಲ. ರಾಮನಗರ ಜಿಲ್ಲೆಯಲ್ಲಿ ನಮ್ಮ ಪ್ರತಿನಿಧಿ ಇಲ್ಲದಿದ್ದರೂ ಕೈಬಿಟ್ಟಿಲ್ಲ. ಜಿಲ್ಲೆಯನ್ನು ಅಭಿವೃದ್ಧಿಯಿಂದ ಕೈಬಿಟ್ಟಿಲ್ಲ," ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ. ಸಚಿವ ಅಶ್ವಥ್ ನಾರಾಯಣ ಭಾಷಣ ವಿರೋಧಿಸಿ ವೇದಿಕೆಯಲ್ಲೇ ಧರಣಿ ನಡೆಸಲಾಗಿದೆ. ವೇದಿಕೆಯಲ್ಲೇ ಕುಳಿತು ಕೈ ಸಂಸದ ಡಿ.ಕೆ. ಸುರೇಶ್ ಧರಣಿ ಮಾಡಿದ್ದಾರೆ.
ಘಟನೆ ಬಗ್ಗೆ ಡಿ.ಕೆ. ಸುರೇಶ್ ಆಕ್ರೋಶ
"ಬಿಜೆಪಿ ಬಂದ ಮೇಲೆ ರೇಷ್ಮೆಗೆ ಬೆಲೆ ಬರಲಿಲ್ಲ. ಜನಪ್ರತಿನಿಧಿಗಳ ಸಭೆ ಕರೆದಿಲ್ಲ. ಸಂಸ್ಕೃತ ಯಾವುದು? ಆರ್ಎಸ್ಎಸ್ನವರು ಹೇಳಿಕೊಟ್ಟರಾ? ನಮ್ಮ ಸಂಸ್ಕೃತಿಯ ಬಗ್ಗೆ ಮಾತನಾಡುವುದು ಬೇಡ. ಆರೋಗ್ಯ ವಿವಿಗೆ ವಿರೋಧ ವ್ಯಕ್ತಪಡಿಸಿದ್ದು ಸಚಿವ ಅಶ್ವಥ್ ನಾರಾಯಣ. ಸಿಂಡಿಕೇಟ್ನಲ್ಲಿ ವಿರೋಧ ವ್ಯಕ್ತಪಡಿಸಿದ್ದು ಸಚಿವ ಅಶ್ವಥ್ ನಾರಾಯಣ," ಎಂದು ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮಂತ್ರಿಗಳು ಮಂತ್ರಿಗಳ ರೀತಿ ನಡೆದುಕೊಳ್ಳಲಿಲ್ಲ. ಸಚಿವರು ಸವಾಲೆಸೆದು ಕರೆದಾದ ಮೇಲೆ ಸುಮ್ಮನೆ ಕೂರಲು ಆಗಲಿಲ್ಲ. ಇದು ರಾಜ್ಯ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಆದರೆ, ಇದು ಬಿಜೆಪಿ ಕಾರ್ಯಕ್ರಮದಂತೆ ಕಾಣುತ್ತಿತ್ತು. ರಾಮನಗರ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ಪಡೆದಿದ್ದಾರೆ. ಇಲ್ಲಿ ಹಾಕಿರುವ ಎಲ್ಲಾ ಕಲ್ಲುಗಳನ್ನು ನಾವು ತಂದಿದ್ದೆವು. ಸಚಿವರು ಎಲ್ಲವನ್ನು ನಾವೇ ಮಾಡಿದ್ದೇವೆಂದು ವೀರಾವೇಷ ಪ್ರದರ್ಶಿಸಿದಾಗ ಸುಮ್ಮನಿರಲಾಗಲಿಲ್ಲ. ಸಿಎಂ ಸಮ್ಮುಖದಲ್ಲಿ ವೇದಿಕೆಯಲ್ಲೇ ಅವರಿಗೆ ಉತ್ತರ ಕೊಟ್ಟಿದ್ದೇವೆ," ಎಂದು ಘಟನೆ ಬಳಿಕ ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ.
ವೇದಿಕೆಯಲ್ಲಿ ನಡೆದ ಘಟನೆಗೆ ಸಿಎಂ ಬಳಿ ಕ್ಷಮೆಯಾಚಿಸುವೆ: ಡಿ.ಕೆ. ಸುರೇಶ್
"ವೇದಿಕೆಯಲ್ಲಿ ನಡೆದ ಘಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಕ್ಷಮೆಯಾಚಿಸುವೆ. ಸಿಎಂ ಬಸವರಾಜ ಬೊಮ್ಮಾಯಿಗೆ ಮಾತ್ರ ಕ್ಷಮೆಯಾಚಿಸುವೆ ಎಂದು ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಕ್ಷಮೆಯಾಚನೆ ಮಾಡಿದ್ದಾರೆ. ನಾವು ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ರಾಮನಗರ ಜಿಲ್ಲೆಯ ಜನ ಯಾರಿಗೂ ಹೆದರಿಕೊಳ್ಳುವ ಜನರಲ್ಲ," ಎಂದು ರಾಮನಗರದ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.












Click it and Unblock the Notifications