ಚನ್ನಪಟ್ಟಣದಲ್ಲಿ ಯೋಗೇಶ್ವರಗೆ ಡಿಕೆಶಿ ಸಹೋದರರ ಸವಾಲ್!
ರಾಮನಗರ, ಅಕ್ಟೋಬರ್ 17 : ಕಾಂಗ್ರೆಸ್ ತೊರೆದಿರುವ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರಿಗೆ ತವರು ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು. 'ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ' ಎಂದು ಘೋಷಣೆ ಮಾಡಿದರು.
ಮಂಗಳವಾರ ಚನ್ನಪಟ್ಟಣದ ಶ್ರೀ ಚೌಡೇಶ್ವರಿ ಕಲ್ಯಾಣ ಮಹಲ್ನಲ್ಲಿ ಚನ್ನಪಟ್ಟಣ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಇಂಧನ ಸಚಿವ ಡಿ.ಕೆ.ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಸಿ.ಪಿ.ಯೋಗೇಶ್ವರ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. 'ಸಿ.ಪಿ.ಯೋಗೇಶ್ವರ ನಂಬಿ ನಾವು ಮೋಸ ಹೋಗಿದ್ದೇವೆ. ಇನ್ನು ಮುಂದೆ ಈ ರೀತಿ ಆಗುವುದಿಲ್ಲ. ನಾವು ನಿಮ್ಮ ಜೊತೆ ಇದ್ದೇವೆ' ಎಂದು ಚನ್ನಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, 'ಶಾಸಕ ಸಿ.ಪಿ.ಯೋಗೇಶ್ವರ ಅವರ ಭ್ರಷ್ಟಾಚಾರದ ದಾಖಲೆಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ' ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ತೊರೆದಿದ್ದ ಸಿ.ಪಿ.ಯೋಗೇಶ್ವರ ಅವರು 'ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಈ ನಿರ್ಧಾರ ಕೈಕೊಂಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಜೊತೆಗೆ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಕಾರ್ಯದರ್ಶಿಗಳಿಗೂ ರಾಜೀನಾಮೆ ರವಾನಿಸಿದ್ದೇನೆ' ಎಂದು ಸಿ.ಪಿ.ಯೋಗೇಶ್ವರ ಹೇಳಿದ್ದರು.

'ಇಂದಿನಿಂದ ಚನ್ನಪಟ್ಟಣಕ್ಕೆ ನಾನೇ ಶಾಸಕ'
ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, 'ನಾವು ನಿಮ್ಮ ಜೊತೆಗಿದ್ದೇವೆ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ. ಚನ್ನಪಟ್ಟಣದಲ್ಲಿ ಇಂದಿನಿಂದ ಶಾಸಕರಿಲ್ಲ. ನಾನೇ ಈ ಕ್ಷೇತ್ರದ ಶಾಸಕ' ಎಂದರು.

'ಶಾಸಕರನ್ನು ಆಯ್ಕೆ ಮಾಡುವುದು ನಮ್ಮ ಗುರಿ'
ಸಿ.ಪಿ.ಯೋಗೇಶ್ವರ ನಂಬಿ ನಾವು ಮೋಸ ಹೋಗಿದ್ದೇವೆ. ಇನ್ನು ಮುಂದೆ ಈ ರೀತಿ ಆಗುವುದಿಲ್ಲ. 2018ರ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡುವುದೇ ನಮ್ಮ ಗುರಿ' ಎಂದು ಡಿ.ಕೆ.ಶಿವಕುಮಾರ್ ಘೋಷಿಸಿದರು.

'ಸಹೋದರನಿಂದ ರಾಜೀನಾಮೆ ಕೊಡಿಸಿ'
'ಕನಕಪುರ ಕ್ಷೇತ್ರದ ಜನತೆಗಿಂತ ಚನ್ನಪಟ್ಟಣ ಕ್ಷೇತ್ರದ ಜನರ ಮೇಲೆ ನನಗೆ ಪ್ರೀತಿ ಇದೆ. ನಿಮಗೆ ಮಾನ-ಮರ್ಯಾದೆ ಇದ್ದರೆ ನಿಮ್ಮ ಸಹೋದರನಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ' ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.

'ಸಂಪೂರ್ಣ ಸಹಕಾರ ನೀಡಿದ್ದೇವೆ'
ಸಿ.ಪಿ.ಯೋಗೇಶ್ವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ.ಶಿವಕುಮಾರ್, 'ನಮ್ಮ ಸರ್ಕಾರ ಯೋಗೇಶ್ವರ ಅವರಿಗೆ ಕೊಟ್ಟಷ್ಟು ಅವಕಾಶ ಹಾಗೂ ಸ್ವಾತಂತ್ರ್ಯವನ್ನು ಹಿಂದೆ ಯಾರೂ ಕೊಟ್ಟಿಲ್ಲ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯಲ್ಲಿ ಸಂಪೂರ್ಣ ಸಹಕಾರ ನೀಡಲಾಗಿತ್ತು' ಎಂದು ಹೇಳಿದ್ದರು.

'ಬೇಸತ್ತು ನಿರ್ಧಾರ ಕೈಗೊಂಡಿದ್ದೇನೆ'
'ಕಾಂಗ್ರೆಸ್ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಈ ನಿರ್ಧಾರ ಕೈಕೊಂಡಿದ್ದೇನೆ. ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾವಚಿತ್ರ, ಹೆಸರು ಬಳಸುವುದು ಬೇಡ' ಎಂದು ಸಿ.ಪಿ.ಯೋಗೇಶ್ವರ ಹೇಳಿದ್ದರು.












Click it and Unblock the Notifications