Tumkur Metro: ಬೆಂಗಳೂರು-ತುಮಕೂರು ಮೆಟ್ರೋ DPR ಸ್ವೀಕರಿಸಿದ ಸರ್ಕಾರ, ಗೃಹ ಸಚಿವರು ಹೇಳಿದ್ದೇನು?
ಬೆಂಗಳೂರು: ಬೆಂಗಳೂರು ಹಸಿರು ಮಾರ್ಗದ ಕೊನೆಯ ನಿಲ್ದಾಣವಾಗಿರುವ ಮಾದಾವರದಿಂದ ತುಮಕೂರುವರೆಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಇದರ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕೆಲಸ ಪೂರ್ಣಗೊಂಡಿದ್ದು, ಅದು ಸರ್ಕಾರದ ಕೈ ಸೇರಿದೆ. ಬೆಂಗಳೂರು ನಂತರ ತುಮಕೂರು ಬೆಳವಣಿಗೆಗೆ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ ಶೀಘ್ರವೇ ಮೆಟ್ರೋ ಯೋಜನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ಶನಿವಾರ ಮಾದವಾರ-ತುಮಕೂರು ಮೆಟ್ರೋ ರೈಲು ಯೋಜನೆಯ ಡಿಪಿಆರ್ (ಡಿಪಿಆರ್) ವರದಿಯನ್ನು ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ವಿಧಾನಸೌಧದಲ್ಲಿ ಸ್ವೀಕರಿಸಿದರು. ಒಟ್ಟು 1.26 ಕೋಟಿ ರೂಪಾಯಿಗೆ ಕಳೆದ ಡಿಸೆಂಬರ್ ಆರಂಭದಲ್ಲಿ 'ಆರ್ವೀ ಎಂಜಿನಿಯರಿಂಗ್ ಕನ್ಸಲ್ಟೆಂಟ್' ಕಂಪನಿ ಪಡೆದುಕೊಂಡಿತ್ತು. ಸರ್ಕಾರ ನೀಡಿದ 05 ತಿಂಗಳ ಗಡುವಿನಲ್ಲಿ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ನೀಡಿದೆ.

ರೇಷ್ಮೆ ಸಂಸ್ಥೆ-ಮಾದಾವರವರೆಗೆ ಮೆಟ್ರೋ ಹಸಿರು ಮಾರ್ಗ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ಮಾದಾವರ ನಿಲ್ದಾಣದಿಂದ 59 ಕಿಲೋ ಮೀಟರ್ ದೂರದ ತುಮಕೂರುವರೆಗೆ ವಿಸ್ತರಣೆಗೆ ಸರ್ಕಾರ ಯೋಜನೆ ರೂಪಿಸಿದೆ. ನೆಲಮಂಗಲ, ದಾಬಾಸಪೇಟೆ, ಕ್ಯಾತಸಂದ್ರ ಮೂಲಕ ತುಮಕೂರು ತನಕ ಅಂದಾಜು 20,600 ಕೋಟಿ ರೂ. ವೆಚ್ಚದಲ್ಲಿ ಮೆಟ್ರೋ ವಿಸ್ತರಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಮುಂದೆ ಅಂದಾಜುವೆಚ್ಚ ಹೆಚ್ಚಾಗುವ ನಿರೀಕ್ಷೆ ಇದೆ.
ಡಿಪಿಆರ್ ಸ್ವೀಕರಿಸಿ ಜಿ.ಪರಮೇಶ್ವರ್ ಹೇಳಿದ್ದೇನು?
ಬೆಂಗಳೂರು ನಮ್ಮ ಮೆಟ್ರೋ ಮಾದವಾರ-ತುಮಕೂರು ಮೆಟ್ರೋ ರೈಲು ಯೋಜನೆಯ ಡಿಪಿಆರ್ ವರದಿ ಸ್ವೀಕರಿಸಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಈ ವರದಿಯನ್ನು ಸಚಿವ ಸಂಪುಟ ಸಭೆಗೆ ತೆಗೆದುಕೊಂಡು ಹೋಗಲಾಗುವುದು. ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಸಂಪೂರ್ಣವಾಗಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಡಿಪಿಆರ್ ಸಲ್ಲಿಕೆ ಮುಂದೇನು?
ಸದ್ಯ ರಾಜ್ಯ ಸರ್ಕಾರಕ್ಕೆ ಮೆಟ್ರೋ ವಿಸ್ತರಣಾ ಯೋಜನೆ ಡಿಪಿಆರ್ ಸಲ್ಲಿಕೆ ಆಗಿದ್ದು, ರಾಜ್ಯ ಸರ್ಕಾರ ಅದಕ್ಕೆ ಅನುಮೋದನೆ ಒಪ್ಪಿಗೆ ನೀಡಿದ ಕೇಂದ್ರದ ಅನುಮೋದನೆಗಾಗಿ ರವಾನಿಸಲಿದೆ. ಅಲ್ಲಿಂದ ಅನುಮೋದನೆಗೊಂಡ ಬಳಿಕ ಕಾಮಗಾರಿಗೆ ಗುತ್ತಿಗೆ ನೀಡಲು ಟೆಂಡರ್ ಆಹ್ವಾನ, ಬಿಡ್ ಸಲ್ಲಿಕೆ, ಭೂಸ್ವಾಧೀನದಂತಹ ಇನ್ನಿತರ ಕೆಲಸಗಳು ಆರಂಭವಾಗಲಿವೆ. ಅಗತ್ಯ ಭೂಮಿ ದೊರೆಯುತ್ತಿದ್ದಂತೆ ಕಾಮಗಾರಿ ಕೆಲಸ ಆರಂಭವಾಗಲಿದೆ.

ಬೆಂಗಳೂರು ಪ್ರವೇಶ, ನಿರ್ಗಮನ ಸುಲಭ
ನೆಲಮಂಗಲ, ಮಾದಾವರ, ತುಮಕೂರಿನತ್ತ ತೆರಳುವಾಗ ನಿತ್ಯ ದಟ್ಟಣೆ ಉಂಟಾಗುತ್ತದೆ. ಮೆಟ್ರೋ ನಿರ್ಮಾಣವಾದರೆ ಬೆಂಗಳೂರಿಗೆ ಪ್ರವೇಶ, ನಿರ್ಗಮನ ಸುಲಭವಾಗುತ್ತದೆ. ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ತುಮಕೂರುವರೆಗೆ ಮೆಟ್ರೋ ಹಸಿರು ಮಾರ್ಗ ವಿಸ್ತರಿಸಲಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ನೋಡಿದರೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಅನಿವಾರ್ಯವಾಗಿದೆ.
ಮೆಟ್ರೋ ವಿಸ್ತರಣೆ, ತುಮಕೂರು ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ
ಬೆಂಗಳೂರು ನಮ್ಮ ಮೆಟ್ರೋ ತುಮಕೂರಿನವರೆಗೆ ವಿಸ್ತರಿಸಬೇಕು ಎಂಬ ನಿರ್ಧಾರವನ್ನು ಕೆಲವು ವಿಪಕ್ಷ ನಾಯಕರ ಹೊರತಾಗಿ ಬಹುತೇಕರು ಒಪ್ಪಿದ್ದಾರೆ. ಪಿಸಿ ಮೋಹನ್, ಸಂಸದ ತೇಜಸ್ವಿ ಸೂರ್ಯ ಅವರು ಆಕ್ಷೇಪಿಸಿದ್ದರು. ಇದರು ನಡುವೆ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿಸಬೇಕು ಎಂದು ಜಿ.ಪರಮೇಶ್ವರ್ ಅವರು ಇತ್ತೀಚಿನ ಸಾಧನಾ ಸಮಾವೇಶದಲ್ಲಿ ಮನವಿ ಮಾಡಿದ್ದರು. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಧ್ವನಿಗಗೂಡಿಸಿದ್ದರು.
ಇದೆಲ್ಲ ನೋಡಿದರೆ ಆದಷ್ಟು ಶೀಘ್ರವೇ ಈ ಮೆಟ್ರೋ ಯೋಜನೆಗೆ ಅನುಮೋದನೆ ನೀಡುವ ನಿರೀಕ್ಷೆಗಳು ಎದ್ದು ಕಾಣುತ್ತಿವೆ. ಗೃಹ ಸಚಿವರು ಬೆಂಗಳೂರಿನ ಒತ್ತಡ ಮಾಡುವ ನಿಟ್ಟಿನಲ್ಲಿ ತುಮಕೂರನ್ನು ಅಭಿವೃದ್ಧಿಗೊಳಿಸಲು ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಏಕೆಂದರೆ ಈ ಹಿಂದೆ ಬೆಂಗಳೂರು ಎರಡನೇ ಏರ್ಪೋರ್ಟ್ ಯೋಜನೆಗೂ ಅವರು ತುಮಕೂರು ಭಾಗವನ್ನು ಹೆಸರಿಸಿದ್ದರು.














Click it and Unblock the Notifications