"ಏಸು ಪ್ರತಿಮೆಗೆ ಕ್ರೈಸ್ತರಲ್ಲೇ ವಿರೋಧ, ಕೇವಲ ಡಿಕೆ ಸಹೋದರ ಹಿತಾಸಕ್ತಿ''
ರಾಮನಗರ, ಅಕ್ಟೋಬರ್ 21: ರಾಮನಗರ ಜಿಲ್ಲೆ ಕನಕಪುರದ ಹಾರೋಬೆಲೆ ಬೆಟ್ಟದಲ್ಲಿ ಜಗತ್ತಿನ ಎತ್ತರದ ಏಸು ಪ್ರತಿಮೆ ನಿರ್ಮಾಣಕ್ಕೆ ಸ್ಥಳೀಯ ಕ್ರೈಸ್ತರಲ್ಲೇ ವಿರೋಧವಿದೆ. ಪ್ರತಿಮೆ ನಿರ್ಮಾಣದ ಹಿಂದೆ ಕೇವಲ ಡಿ.ಕೆ ಸಹೋದರ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಹಿಂದು ಜಾಗರಣಾ ವೇದಿಕೆ ಆರೋಪಿಸಿದೆ.
ಏಸು ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಕನಕಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂತಸ ವ್ಯಕ್ತಪಡಿಸಿದ ಹಿಂದೂ ಜಾಗರಣಾ ವೇದಿಕೆ ಸದಸ್ಯರು, ಮುಂದೆಯೂ ಪ್ರತಿಮೆ ನಿರ್ಮಾಣ ಮಾಡದಂತೆ ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದರು.
ಕನಕಪುರ ತಾಲೂಕಿನ ಹಾರೋಬೆಲೆಯ ಬೆಟ್ಟದಲ್ಲಿನ 10 ಎಕರೆ ಸರ್ಕಾರಿ ಗೋಮಾಳದಲ್ಲಿ ಏಸುಕ್ರಿಸ್ತನ 114 ಅಡಿ ಎತ್ತರದ ಬೃಹತ್ ಏಸು ಪ್ರತಿಮೆ ನಿರ್ಮಾಣ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಮಾಸ್ಟರ್ ಯೋಜನೆಗೆ ಕೋರ್ಟ್ ಆದೇಶ ಭಂಗ ತಂದಿದೆ ಎಂದರು.

ಈಗಾಗಲೇ ಸರ್ಕಾರ ಪ್ರತಿಮೆ ನಿರ್ಮಾಣಕ್ಕೆ ಜಮೀನು ಹಸ್ತಾಂತರ ಮಾಡಿರುವ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ನಲ್ಲಿ ಸ್ಥಳೀಯ ಕ್ರೈಸ್ತರ ಬದಲಾಗಿ ಡಿಕೆಶಿ ಪಟಾಲಂನವರೇ ಸದಸ್ಯರಾಗಿದ್ದಾರೆ. ಕೇವಲ ಕಾಂಗ್ರೆಸ್ ನ ಸೋನಿಯಾ ಗಾಂಧಿ ಮೆಚ್ಚಿಸಲು ಡಿ.ಕೆ ಸಹೋದರರು ಏಸು ಪ್ರತಿಮೆ ನಿರ್ಮಾಣವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆ ಸದಸ್ಯರು ಆರೋಪಿಸಿದರು.
ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಡಿ.ಕೆ ಸಹೋದರರು ಧರ್ಮದ ವಿರುದ್ಧವಾಗಿ ಕೆಲಸ ಮಾಡಬಾರದು. ಈಗಾಗಲೇ ರಾಮನಗರ ಮತ್ತು ಮಂಡ್ಯ ಭಾಗದಲ್ಲಿ ಹಿಂದೂಗಳ ಬಲವಂತದ ಮತಾಂತರ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಜೊತೆಗೆ ನಮ್ಮ ಪರವಾಗಿ ಸರ್ಕಾರ ನಿಲ್ಲದಿದ್ದರೂ ಕೂಡ ನಾವು ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಗಜೇಂದ್ರ ಸಿಂಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಸುರೇಶ್, ದಕ್ಷಿಣ ಪ್ರಾಂತದ ಮುಖಂಡ ಕೇಶವಮೂರ್ತಿ, ಅರುಣ್ ಕುಮಾರ್ ಸಿಂಗ್, ಬಾಲು ವೆಂಕಟೇಶ ಮತ್ತು ಧನಂಜಯ್ ಉಪಸ್ಥಿತರಿದ್ದರು.












Click it and Unblock the Notifications