ಆರೋಪಿಗಳ ಸ್ಥಳಾಂತರ: ರಾಮನಗರ ಜೈಲು ಖಾಲಿ ಖಾಲಿ
ರಾಮನಗರ, ಏಪ್ರಿಲ್ 24: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದ ಆರೋಗ್ಯ ಸಿಬ್ಬಂದಿ ಮೇಲಿನ ಹಲ್ಲೆಯ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.
ಆದರೆ ಆ 121 ಆರೋಪಿಗಳ ಪೈಕಿ 5 ಜನರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದ್ದು, ಇಂದು 116 ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರ ಮಾಡಿದ್ದರಿಂದ, ರಾಮನಗರ ಜೈಲು ಖಾಲಿ ಖಾಲಿಯಾಗಿದೆ.
ಅಲ್ಲದೇ ರಾಮನಗರ ಜೈಲಿನ ಸುತ್ತಮುತ್ತ 100 ಮೀಟರ್ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.
ಈ ಝೋನ್ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಸಂಚರಿಸಿದ್ದ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಬೆಂಗಳೂರು-ಮೈಸೂರು ಹೆದ್ದಾರಿ, ಜಿಲ್ಲಾಡಳಿತ ಭವನ ಬಿಟ್ಟು ಇನ್ನುಳಿದ ಎಲ್ಲವೂ ಸೀಲ್ ಡೌನ್ ಮಾಡಿದೆ. ಜೈಲಿನ ಸುತ್ತ ಒಂದು ಕಿಲೋಮೀಟರ್ ಪ್ರದೇಶವನ್ನು ತೀವ್ರ ನಿಗಾ ವಹಿಸಲಾಗುತ್ತದೆ.
ಯಾರೊಬ್ಬರೂ ಅನಗತ್ಯವಾಗಿ ಮನೆ ಬಿಟ್ಟು ಹೊರ ಬರುವಂತಿಲ್ಲ. ಇದು ಸೂಕ್ಷ್ಮ ಪ್ರದೇಶವಾಗಿದ್ದು, ಎಲ್ಲರೂ ಸರಕಾರದ ಸೂಚನೆಗಳನ್ನು ಪಾಲಿಸಬೇಕು. 5 ಕಿಲೋಮೀಟರ್ ವ್ಯಾಪ್ತಿಯೊಳಗಿನ ಪ್ರದೇಶ ಕೊರೊನಾ ಬಫರ್ ಝೋನ್ ಆಗಿದೆ. ಯಾರಲ್ಲಾದರೂ ಆರೋಗ್ಯ ಏರುಪೇರಾದರೆ ಕೂಡಲೇ ಜಿಲ್ಲಾಡಳಿತಕ್ಕೆ ತಿಳಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.