ಶಿವಲಿಂಗದಲ್ಲಿ ಕಾಣಿಸಿಕೊಂಡ ಕಣ್ಣು, ಮಾಗಡಿ ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತಾಧಿಗಳು
ಮಾಗಡಿ ನವೆಂಬರ್ 26: ಆಸ್ತಿಕರು ತಾವು ನೋಡುವ ಪ್ರತಿ ವಸ್ತುವಿನಲ್ಲೂ ದೇವರ ರೂಪ ಕಾಣುತ್ತಾರೆ. ಮರ, ಗಿಡ, ಕಲ್ಲು , ಬಂಡೆ ಹಾಗೂ ತಮ್ಮ ಸುತ್ತಲಿನ ಪ್ರಕೃತಿಯಲ್ಲೂ ದೇವರನ್ನು ಕಾಣುತ್ತಾರೆ. ಕೆಲವೊಮ್ಮೆ ನಾವು ಊಹಿಸದ ಘಟನೆಗಳು ಜರುಗುತ್ತವೆ. ಅಂತಯೇ ಪುರಾತನ ಶಿವಲಿಂಗದಲ್ಲಿ ಕಣ್ಣಿನ ರೂಪ ಗೋಚರಿಸಿರುವ ಘಟನೆ ಮಾಗಡಿ ಪಟ್ಟಣದ ಉಮಾ ಮಹೇಶ್ವರಿ ದೇವಾಲಯದಲ್ಲಿ ನಡೆದಿದೆ.
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಈಶ್ವರ ದೇವಾಲಯದಲ್ಲಿ ನಿನ್ನೆ ಸಂಜೆ 5:30 ರ ಸುಮಾರಿಗೆ ಪೂಜೆಗೆ ಬಂದ ನಾಗೇಶ್ ಎಂಬುವರು ದೇವರ ದರ್ಶನ ಪಡೆದ ನಂತರ ತಮ್ಮ ಮೊಬೈಲ್ ನಲ್ಲಿ ಶಿವಲಿಂಗದ ಪೋಟೋ ತೆಗೆದಿದ್ದಾರೆ. ನಾಗೇಶ್ಅವರು ಮನೆಗೆ ತೆರಳಿದ ನಂತರ ಫೋನಿನಲ್ಲಿ ಶಿವಲಿಂಗದ ಪೋಟೋ ಗಮನಿಸಿದಾಗ ಶಿವಲಿಂಗದಲ್ಲಿ ಕಣ್ಣಿನ ಆಕಾರ ಇರುವುದು ಗೋಚರವಾಗಿದೆ.
ಶಿವಲಿಂಗದಲ್ಲಿ ಕಾಣಿಸಿಕೊಂಡ ಕಣ್ಣು
ಶಿವಲಿಂಗದಲ್ಲಿ ಕಣ್ಣಿನ ಆಕಾರ ಕಂಡು ಅಚ್ಚರಿಯಿಂದ ನಾಗೇಶ್ ಆರ್ಚಕರಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಧಾನ ಆರ್ಚಕರು ಶಿವಲಿಂಗವನ್ನು ಸೂಕ್ಷ್ಮವಾಗಿ ಪರೀಕ್ಷೆ ಮಾಡಿದಾಗ ಶಿವಲಿಂಗದಲ್ಲಿ ಎರಡು ಕಣ್ಣಿನ ಆಕಾರ ಮೂಡಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಶಿವಲಿಂಗದಲ್ಲಿ ಕಣ್ಣು ಮೂಡಿರುವ ವಿಚಾರ ಶರವೇಗದಲ್ಲಿ ಹರಡಿ, ಸಾವಿರಾರು ಸಂಖ್ಯೆಯಲ್ಲಿ ಜನರು ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ. ಸಂಜೆಯಿಂದ ಶಿವಲಿಂಗದ ದರ್ಶಕ್ಕೆ ಬರಲು ಪ್ರಾರಂಭಿಸಿದ ಸಾರ್ವಜನಿಕರು ತಡ ರಾತ್ರಿಯಾಗಿದ್ದರು ದೇವರ ದರ್ಶನಕ್ಕೆ ನೂಕು ನುಗ್ಗಲು ಹೆಚ್ಚಾಗಿದೆ. ಇನ್ನೂ ಘಟನೆ ತಿಳಿದ ತಕ್ಷಣ ಪೋಲಿಸರು ಭದ್ರತೆ ಕೈಗೊಂಡು, ಸಾರ್ವಜನಿಕರಿಗೆ ಶಿವಲಿಂಗ ದರ್ಶನ ಮಾಡಲು ಅವಕಾಶ ಕಲ್ಪಿಸಿದ್ದಾರೆ.
ಅಚ್ಚರಿ ಹಾಗೂ ಆತಂಕದಲ್ಲಿ ಸಾರ್ವಜನಿಕರು
ಪುರಾತನ ಶಿವಲಿಂಗದಲ್ಲಿ ಕಣ್ಣು ಮೂಡಿರುವುದು ಕೆಲವರಿಗೆ ಅಚ್ಚರಿ ಎನಿಸಿದರೆ, ಇನ್ನೂ ಕೆಲವರಿಗೆ ಆತಂಕ ಮೂಡಿಸಿದೆ. ನಂಬಿದ ಜನರನ್ನು ಕೈಬಿಡದ ಭಗವಂತ ತನ್ನ ಭಕ್ತರಿಗೆ ತನ್ನ ಇರುವಿಕೆಯನ್ನೂ ಈ ರೀತಿ ತೋರಿಸಿದ್ದಾನೆ ಎಂದು ಅರ್ಥೈಸುತ್ತಿದ್ದಾರೆ. ಅದರಲ್ಲೂ ಕಾರ್ತಿಕ ಮಾಸದಲ್ಲೇ ಇಂತಹ ಪವಾಡ ನಡೆದಿರುವುದಕ್ಕೆ ಆಸ್ತಿಕರು ಭಾವಪರವಶರಾಗಿದ್ದಾರೆ. ಇನ್ನೂ ಕೆಲ ಮಂದಿಯಂತು ಕಲಿಗಾಲದ ಅಂತ್ಯಕ್ಕೆ ಶಿವ ಕಣ್ಣು ಬಿಡುತ್ತಾನೆ ಎಂಬ ಪುರಾಣಗಳಲ್ಲಿ ಉಲ್ಲೇಖವಿದೆ, ಹಾಗಾಗಿ ಬೋಳು ಶಿವಲಿಂಗದಲ್ಲಿ ಕಣ್ಣು ಮೂಡಿರುವುದು ಕಲಿಗಾಲ ಅಂತ್ಯ ಸಮೀಪಿಸಿದೆ ಎಂದು ಆತಂಕಪಡುತ್ತಿದ್ದಾರೆ.
ಕೆಂಪೇಗೌಡರ ಕಾಲದ ಶಿವಲಿಂಗ
ಪಟ್ಟಣದ ಉಮಾ ಮಹೇಶ್ವರಿ ದೇವಾಲಯ ಕೇವಲ 50-60 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಆದರೆ ಕಣ್ಣು ಮೂಡಿರುವ ಶಿವಲಿಂಗ ಮಾತ್ರ ಬಹಳ ಪುರಾತನವಾದದ್ದು ಎನ್ನಲಾಗಿದೆ. ಶಿವಲಿಂಗದ ಆಯಸ್ಸು ನಿಖರವಾಗಿ ಯಾರಿಗು ಗೊತ್ತಿಲ್ಲ.ಆದರೂ ಶಿವಲಿಂಗ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕಾಲದ್ದು ಎನ್ನಲಾಗುತ್ತಿದೆ. ಪಟ್ಟಣದ ಕೋಟೆ ಮೈದಾನದಲ್ಲಿ ಕಾಮಗಾರಿ ಮಾಡುವ ವೇಳೆ ಮಣ್ಣಿನ ಕೆಳಗೆ ಈ ಶಿವಲಿಂಗ ಪತ್ತೆಯಾಗಿತ್ತು.
ಕೋಟೆ ಕಾಮಗಾರಿಯ ವೇಳೆ ಮಣ್ಣಿನಲ್ಲಿ ದೊರೆತ ಶಿವಲಿಂಗವನ್ನು ಖಾಸಗಿ ಬಸ್ ಏಜೆಂಟ್ ರಂಗಪ್ಪ ಎನ್ನುವರು ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಿ ಸಣ್ಣ ಪ್ರಮಾಣದಲ್ಲಿ ಪೂಜೆ ಮಾಡಲಾಗುತ್ತಿತ್ತು . ನಂತರ ಸ್ಥಳೀಯರು ಟ್ರಸ್ಟ್ ರಚನೆ ಮಾಡಿಕೊಂಡು ಉಮಾ ಮಹೇಶ್ವರಿ ದೇವಾಲಯ ನಿರ್ಮಾಣ ಮಾಡಿ ಅಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಿ ನಿರಂತರವಾಗಿ ಪೂಜೆ ಹಾಗೂ ಎಲ್ಲ ರೀತಿ ಉತ್ಸವಗಳು ನಡೆಸಲಾಗುತ್ತಿದೆ.
ಮಿನಿ ನಂಜನಗೂಡು ನಿರ್ಮಾಣಕ್ಕೆ ಚಿಂತನೆ
ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಾರ್ಡ್ ನ ಪುರಸಭಾ ಸದಸ್ಯ ಅನಿಲ್ ಕುಮಾರ್, ಶಿವಲಿಂಗದಲ್ಲಿ ಕಣ್ಣು ಮೂಡಿರುವ ವಿಚಾರ ತಿಳಿದಾಗ ಇದು ಕೇವಲ ವದಂತಿ ಇರಬೇಕು ಎನಿಸಿತ್ತು. ನಂತರ ನಾನೇ ಸ್ವತಃ ಬಂದು ಶಿವಲಿಂಗ ನೋಡಿದಾಗ ನನಗೆ ಅಚ್ಚರಿಯಾಗಿದೆ. ಜನರು ಕೂಡ ಸಾವಿರಾರು ಸಂಖ್ಯೆಯಲ್ಲಿ ಬಂದು ದೇವರ ಪವಾಡವನ್ನು ಕಣ್ತಂಬಿಕೊಳ್ಳುತ್ತಿದ್ದಾರೆ. ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ದೇವಾಲಯ ಇರುವುದು ನಮ್ಮ ಸೌಭಾಗ್ಯ.
ಯಾವುದೇ ತೊಂದರೆ ಇಲ್ಲದೇ ಶಿವಲಿಂಗದ ದರ್ಶನ ಪಡೆಯಲು ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಘಟನೆ ಸಂಬಂದ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶಿವಲಿಂಗದಲ್ಲಿ ಕಣ್ಣು ಮೂಡಿದ ಈ ಕ್ಷೇತ್ರವನ್ನು ಮಿನಿ ನಂಜನಗೂಡು ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲು ಚಿಂತಿಸಿದ್ದು, ಶಾಸಕರಾದ ಎ.ಮಂಜುನಾಥ ಅವರು ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಪುರಸಭಾ ಸದಸ್ಯ ಅನಿಲ್ ಕುಮಾರ್ ತಿಳಿಸಿದರು.