ವೈರಲ್ ವಿಡಿಯೋ; ಬಿಡದಿಯಲ್ಲಿ ಜೆಸಿಬಿಯಲ್ಲಿ ಶವ ಸಾಗಾಟ!
ರಾಮನಗರ, ಏಪ್ರಿಲ್ 29; ಬಿಡದಿಯಲ್ಲಿ ಮೃತಪಟ್ಟ ಕೋಲ್ಕತ್ತಾ ಮೂಲದ ವ್ಯಕ್ತಿಯ ಶವದ ಅಂತ್ಯ ಸಂಸ್ಕಾರವನ್ನು ಗ್ರಾಮಸ್ಥರೇ ನಡೆಸಿದ ಘಟನೆ ಬಿಡದಿಯಲ್ಲಿ ನಡೆದಿದೆ. ಆದರೆ, ಶವವನ್ನು ಜೆಸಿಬಿಯಲ್ಲಿ ಸಾಗಣೆ ಮಾಡಿದ ವಿಡಿಯೋ ವೈರಲ್ ಆಗಿದೆ.
ರಾಮನಗರ ಜಿಲ್ಲೆಯ ಬಿಡದಿಯ ಮಂಚನಾಯಕನಗಳ್ಳಿ ನಿವಾಸಿಯಾದ 45 ವರ್ಷದ ರಜೀಬ್ ಜೈನ್ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದರು. ಗ್ರಾಮಸ್ಥರು ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ರಜೀಬ್ ಜೈನ್ ಸುಮಾರು 15 ವರ್ಷಗಳಿಂದ ಮಂಚನಾಯಕನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ಬಿಡದಿ ಬಳಿಯ ಗ್ರಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ವೈದ್ಯರು ಕೋವಿಡ್ ಪರೀಕ್ಷೆ ಮಾಡಿಸಲು ಸಲಹೆ ಕೊಟ್ಟಿದ್ದರು.
ರಾಮನಗರ; ಆತಂಕ ತಂದ ಕೋವಿಡ್ ಸೋಂಕಿತರ ನಾಪತ್ತೆ
ಆದರೆ, ಕೋವಿಡ್ ಪರೀಕ್ಷೆಯನ್ನು ಮಾಡಿಸಿರಲಿಲ್ಲ. ಉಸಿರಾಟದ ಸಮಸ್ಯೆಯಿಂದ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಗ್ರಾಮದವರು ಆರೋಗ್ಯ ಇಲಾಖೆಗೆ ಮಾಹಿತಿ ಕೊಟ್ಟರೂ ಸ್ಥಳಕ್ಕೆ ಯಾರೂ ಸಹ ಆಗಮಿಸಲಿಲ್ಲ.
ರಾಮನಗರ; ಕೋವಿಡ್ ಸೋಂಕಿತರ ಚಿಕಿತ್ಸೆಗೆ 600 ಹಾಸಿಗೆ ಮೀಸಲು
ಆರೋಗ್ಯ ಇಲಾಖೆ ವಿರುದ್ಧ ಅಸಮಾಧಾನಗೊಂಡ ಗ್ರಾಮಸ್ಥರು ಪಿಪಿಇ ಕಿಟ್ ಧರಿಸಿ, ಗ್ರಾಮದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ಮಾಡಿದರು. ರಜೀಬ್ ಜೈನ್ ಶವವನ್ನು ಅಂತ್ಯಕ್ರಿಯೆಗೆ ಜೆಸಿಬಿಯಲ್ಲಿ ಸಾಗಣೆ ಮಾಡಲಾಯಿತು. ಈ ವಿಡಿಯೋ ಈಗ ವೈರಲ್ ಆಗಿದೆ.