ಕೂಡಿಟ್ಟ ಹಣವನ್ನು ರಾಮ ಮಂದಿರಕ್ಕೆ ಅರ್ಪಿಸಿದ ಚಿಣ್ಣರು: ಡಿಸಿಎಂ ಭಾವುಕ
ರಾಮನಗರ, ಜನವರಿ 26: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕಾಗಿ ರಾಮನಗರದಲ್ಲಿಂದು ನಡೆದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಮನೆಮನೆಗೂ ತೆರಳಿ ನಿಧಿ ಸಂಗ್ರಹ ಮಾಡಿದರು.
ರಾಮನಗರ ಜಿಲ್ಲಾ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ, ನಗರದ ವಿವಿಧ ಭಾಗಗಳಲ್ಲಿ ಡಿಸಿಎಂ ಸಂಚರಿಸಿದರು. ಆಗ ಸಾರ್ವಜನಿಕರು ಶ್ರದ್ಧೆ ಹಾಗೂ ಭಕ್ತಿಯಿಂದ ತಮ್ಮ ಕೈಲಾದ ಮಟ್ಟಿಗೆ ದೇಣಿಗೆಯನ್ನು ನೀಡಿದರು.

21ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ ಡಿಸಿಎಂ
ಚಾಮುಂಡೇಶ್ವರಿ ಬಡಾವಣೆ, ಎಂ.ಜಿ.ರಸ್ತೆ, ನಗರಸಭೆ ಎದುರಿನ ಪ್ರದೇಶ, ಕೆಂಪೇಗೌಡ ವೃತ್ತ, ಪಂಚಮುಖಿ ಆಂಜನೇಯಸ್ವಾಮಿ ರಸ್ತೆ, ರೆಡ್ಡಿ ಸಾಮಿಲ್, ರಾಯರ ದೊಡ್ಡಿ ಪ್ರದೇಶಗಳಲ್ಲಿ ಸುಮಾರು 21ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿದ ಡಿಸಿಎಂ ರವರಿಗೆ ಜನರು ರಾಮ ಮಂದಿರಕ್ಕೆ ದೇಣಿಗೆ ನೀಡಿದರು.

ಮಂದಿರ ಸಾಕ್ಷಾತ್ಕಾರವಾಗುತ್ತಿರುವುದಕ್ಕೆ ಭಾವುಕ
ತಮ್ಮ ಮನೆಗೆ ಬಂದ ಉಪ ಮುಖ್ಯಮಂತ್ರಿಯನ್ನು ಆದರದಿಂದ ಬರಮಾಡಿಕೊಂಡ ಜನರು, ಮಂದಿರ ನಿರ್ಮಾಣ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮುಖ್ಯವಾಗಿ ಹಿರಿಯ ನಾಗರೀಕರು, ಅದರಲ್ಲೂ ಮಹಿಳೆಯರು ಅಯೋಧ್ಯೆಯಲ್ಲಿ ಮಂದಿರ ಸಾಕ್ಷಾತ್ಕಾರವಾಗುತ್ತಿರುವುದಕ್ಕೆ ಭಾವುಕರಾಗಿ ಪ್ರತಿಕ್ರಿಯಿಸಿದರು. ತಮ್ಮ ಉಳಿತಾಯದಲ್ಲಿದ್ದ ಹಣವನ್ನೂ ಅವರು ಡಿಸಿಎಂ ಅವರಿಗೆ ಹಸ್ತಾಂತರ ಮಾಡಿದರು.

ಅಪ್ಪ-ಅಮ್ಮ ತಮ್ಮ ಖರ್ಚಿಗಾಗಿ ನೀಡಿದ್ದ ಹಣ
ಚಿಣ್ಣರು ಕೂಡ ಅಪ್ಪ-ಅಮ್ಮ ತಮ್ಮ ಖರ್ಚಿಗಾಗಿ ನೀಡಿದ್ದ ಹಣವನ್ನು ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ, "ರಾಮ ಮಂದಿರ ನಿರ್ಮಾಣಕ್ಕೆ ಹಣ ಕೊಡಿ ಎಂದು ಯಾರನ್ನು ಯಾರೂ ಕೇಳುತ್ತಿಲ್ಲ. ಆದರೆ ಜನರೇ ಸ್ವ-ಇಚ್ಛೆಯಿಂದ ಅಯೋಧ್ಯೆಯಲ್ಲಿ ರಾಮನಿಗೆ ಮಂದಿರ ನಿರ್ಮಿಸಲು ಕೈಜೋಡಿಸುತ್ತಿದ್ದಾರೆ. ಅದರಲ್ಲೂ ಪುಟ್ಟ ಮಕ್ಕಳು ತಮ್ಮ ಖರ್ಚಿನ ಕಾಸನ್ನೂ ರಾಮರ ಸೇವೆಗೆ ಅರ್ಪಿಸಿದ್ದು, ನನ್ನ ಮನಸ್ಸು ಉಕ್ಕಿ ಬರುವಂತೆ ಮಾಡಿತು' ಎಂದರು.
Recommended Video

ಕೆಲ ಮನೆಗಳಲ್ಲಿ ರಾಮಪೂಜೆ
ದೇಣಿಗೆ ನೀಡುವ ಸಂದರ್ಭದಲ್ಲಿ ಭಾವುಕರಾದ ಹಿರಿಯ ನಾಗರೀಕರೊಬ್ಬರು, "ನಾನು ಬದುಕಿರುವಾಗಲೇ ಅಯೋಧ್ಯೆಯಲ್ಲಿ ನಮ್ಮ ರಾಮನಿಗೆ ಮಂದಿರ ನಿರ್ಮಾಣವಾಗುತ್ತಿದೆ. ನಮ್ಮ ಪಾಲಿಗೆ ಇದು ಅತ್ಯಂತ ಸಂತೋಷದ ಸಂಗತಿ. ಇದು ಆಗುವುದಿಲ್ಲವೇನೋ ಎಂಬ ಆತಂಕವಿತ್ತು. ಆದರೆ, ಎಲ್ಲವೂ ನಿರಾತಂಕವಾಗಿ ನಡೆಯುತ್ತಿದೆ' ಎಂದು ಡಿಸಿಎಂ ಅವರ ಕೈಹಿಡಿದು ಹೇಳಿದಾಗ ಸ್ವತಃ ಅಶ್ವಥ್ ನಾರಾಯಣ ಅವರೂ ಕ್ಷಣಕಾಲ ಭಾವುಕರಾದರು. ನಿಮ್ಮೆಲ್ಲರ ಅಭಿಲಾಷೆಯಂತೆ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ಡಿಸಿಎಂ ಹೇಳಿದರು.
ನಿಧಿ ಸಮರ್ಪಣಾ ಯಾತ್ರೆಯ ವೇಳೆ ಕೆಲ ಮನೆಗಳಲ್ಲಿ ರಾಮಪೂಜೆಯನ್ನು ಏರ್ಪಡಿಸಲಾಗಿತ್ತು. ಡಿಸಿಎಂ ಅವರು ಪೂಜೆಯಲ್ಲಿ ಭಾಗಿಯಾದರು. ಪಕ್ಷದ ಜಿಲ್ಲಾ ಮುಖಂಡರು, ಹಿರಿಯರು ಈ ಸಂದರ್ಭದಲ್ಲಿ ಡಿಸಿಎಂ ಜತೆಯಲ್ಲಿದ್ದರು.












Click it and Unblock the Notifications