ಕುಮಾರಸ್ವಾಮಿ ನಿಜವಾದ ಬಣ್ಣ ಬಯಲಾಗಿದೆ:ಸಿ.ಪಿ ಯೋಗೇಶ್ವರ್
ಚನ್ನಪಟ್ಟಣ, ನವೆಂಬರ್17: ''ನಾನು ಕಾಂಗ್ರೆಸ್ ಬಿಟ್ಟ ಮೇಲೆ ನಮ್ಮ ತಾಲೂಕಿನಲ್ಲಿ ಕಾಂಗ್ರೆಸ್ ಬಹಳ ಕ್ಷೀಣವಾಗಿದೆ. ಕಳೆದ ಬಾರಿ ಕೂಡ ರೇವಣ್ಣ ಅವರು ನಮ್ಮ ತಾಲೂಕಿನವರಲ್ಲ. ಅವರನ್ನು ತಂದು ಇಲ್ಲಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಹೀಗೆ ಪ್ರತಿ ಚುನಾವಣೆಯಲ್ಲಿ ಬೇರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಕಾಂಗ್ರೆಸ್ನಿಂದ ಪ್ರಯೋಗ ಮಾಡುತ್ತಿದ್ದಾರೆ'' ಎಂದು ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕರ್ನಾಟಕದಲ್ಲಿರುವ ಮೂರು ಪಕ್ಷಗಳು ಸೈದ್ಧಾಂತಿಕವಾಗಿ ವಿಭಿನ್ನವಾಗಿದೆ. ಆದರೆ ಜೆಡಿಎಸ್ ಯಾರ ಜೊತೆಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಜೆಡಿಎಸ್ ಹಿಂದೆ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿತ್ತು. ಬಳಿಕ ಕಾಂಗ್ರೆಸ್ ಜೊತೆ ಸೇರಿ ಕೂಡ ಸರ್ಕಾರ ಮಾಡಿತ್ತು'' ಎಂದು ಜೆಡಿಎಸ್ ವಿರುದ್ಧ ಲೇವಡಿ ಮಾಡಿದರು.
ಜೆಡಿಎಸ್ಗೆ ಹೆಚ್ಚು ಅನುದಾನ: ಪುರಸಭೆ ತಾರತಮ್ಯ ಖಂಡಿಸಿ ಕಾಂಗ್ರೆಸ್ನಿಂದ ಪ್ರತಿಭಟನೆ ಎಚ್ಚರಿಕೆ
ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರನ್ನು ಎದುರಿಸಲು ಸಿದ್ಧರಿದ್ದೇವೆ. ಅಂಥದರಲ್ಲಿ ಕಾಂಗ್ರೆಸ್ ಯಾವ ಅಭ್ಯರ್ಥಿಯನ್ನು ಬೇಕಾದರೂ ನಿಲ್ಲಿಸಲಿ. ನಾವು ವಿಚಾರದ ಮೇಲೆ, ನಾವು ಮಾಡುವ ಕೆಲಸದ ಮೇಲೆ, ಅಭಿವೃದ್ಧಿ ದೃಷ್ಟಿಯಿಂದ ರಾಜಕಾರಣ ಮಾಡಲು ಬಂದಿದ್ದೇವೆ ಎಂದು ಹೇಳಿದರು.
ಜೆಡಿಎಸ್ನವರು ಹೆದರಿಸುತ್ತಾರೆ.. ಬೆದರಿಸುತ್ತಾರೆ..
ತಾಲೂಕಿಗೆ ಕುಮಾರಸ್ವಾಮಿ ತಂದ ಅನುದಾನದಿಂದ ಗುತ್ತಿಗೆದಾರರಿಗೆ ಅನುಕೂಲವಾಗಿದೆ. ಹೊರತು ಜನಸಾಮಾನ್ಯರಿಗಲ್ಲ. ತಾಲೂಕಿನ ಅಭಿವೃದ್ಧಿಗೆ ನಮ್ಮ ಸರ್ಕಾರದಲ್ಲಿ ಬೇರೆ ಬೇರೆ ಇಲಾಖೆಯಲ್ಲಿ ನೀಡುವ ಅನುದಾನವನ್ನು ತಂದು ಯಾವುದೇ ಕೆಲಸ ಮಾಡಲಿಲ್ಲ. ಅವರೇ ಮುಖ್ಯಮಂತ್ರಿಯಾಗಿದ್ದಾಗ ಅನುದಾನ ಕೊಡಬಹುದಿತ್ತು. ಜೆಡಿಎಸ್ನವರ ದಬ್ಬಾಳಿಕೆ ಯಾವಾಗಲೂ ಇದ್ದೇ ಇರುತ್ತದೆ. ಏನೋ ಗೂಂಡಾಗಿರಿ ಮಾಡುತ್ತಾರೆ. ರೌಡಿಸಂ ಮಾಡುತ್ತಾರೆ. ಹೆದರಿಸುತ್ತಾರೆ ಬೆದರಿಸುತ್ತಾರೆ. ಈ ಬಗ್ಗೆ ಯಾವುದೇ ವಿವಾದ ಮಾಡಲು ಇಷ್ಟ ಇಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ನಿಜವಾದ ಬಣ್ಣ ಬಯಲಾಗಿದೆ
ಇನ್ನು ಕಳೆದ ಇಪ್ಪತೈದು ವರ್ಷಗಳಿಂದ ಜೆಡಿಎಸ್ನಲ್ಲಿ ಕೆಲಸ ಮಾಡಿ, ಜೆಡಿಎಸ್ ಪರ ಹೋರಾಟ ಮಾಡಿದವರು ಇಂದು ಪಕ್ಷದಿಂದ ನೊಂದಿದ್ದಾರೆ. ಕುಮಾರಸ್ವಾಮಿ ಅವರು ಪ್ರಾಮಾಣಿಕವಾಗಿ ತಾಲೂಕಿನ ಅಭಿವೃದ್ಧಿಗೆ ಸ್ಪಂದಿಸಿಲ್ಲ ಎಂದು ಅನೇಕರು ಬೇಸರ ಮಾಡಿಕೊಂಡಿದ್ದಾರೆ. ಜೆಡಿಎಸ್ನವರು ಪಟ್ಟಿ ಮಾಡಿಕೊಂಡು ಮುನಿಸಿಕೊಂಡಿರುವ ಮುಖಂಡರ ಮನೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಪರಿಸ್ಥಿತಿ ಎಲ್ಲರಿಗೂ ಅರ್ಥ ಆಗಿದೆ. ಕುಮಾರಸ್ವಾಮಿ ನಿಜವಾದ ಬಣ್ಣ ಬಯಲಾಗಿದೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಸ್ವಾಭಿಮಾನ ಉಳಿಸಿಕೊಳ್ಳಬೇಕು
ತಾಲೂಕಿನಲ್ಲಿ 2018ಕ್ಕೂ 2023ಕ್ಕೂ ಬಹಳ ವ್ಯತ್ಯಾಸವಿದೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಈ ಜಿಲ್ಲೆಯ ಜನರಿಗೆ ಕುಮಾರಸ್ವಾಮಿ ಅವರ ಬಗ್ಗೆ ಎಲ್ಲವೂ ಅರ್ಥವಾಗಿದೆ. ಕುಮಾರಸ್ವಾಮಿ ಹೇಗೆ ಬ್ಲ್ಯಾಕ್ಮೇಲ್ ಮಾಡುತ್ತಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರು ಭಾವನಾತ್ಮಕತೆಯನ್ನು ದೂರ ಮಾಡಿ. ರಾಮನಗರ ಜಿಲ್ಲೆ ಸ್ವಾಭಿಮಾನ ಉಳಿಸಿಕೊಳ್ಳಬೇಕು. ಅಭಿವೃದ್ಧಿ ಕಡೆ ಗಮನಕೊಡಬೇಕು ಎಂದು ಸ್ಥಳೀಯ ನಾಯಕರಿಗೆ ಒತ್ತುಕೊಟ್ಟು ನಮ್ಮ ತಾಲೂಕು ಹಾಗೂ ಜಿಲ್ಲಾ ಮತದಾರರು ತೀರ್ಪು ಕೊಡುತ್ತಾರೆ ಎಂದರು.
ಜೆಡಿಎಸ್ ತಂದೆ, ಮಕ್ಕಳ ಪಾರ್ಟಿ
ಜೆಡಿಎಸ್ ತಂದೆ, ಮಕ್ಕಳ ಪಾರ್ಟಿ. ಇದು ಅವರ ಸ್ವಂತ ಪಾರ್ಟಿ. ಇದೊಂಥರಾ ಪ್ರೈವೆಟ್ ಲಿಮಿಟೆಡ್ ಕಂಪನಿ ಇದ್ದ ಹಾಗೆ. ಜೆಡಿಎಸ್ನವರು ಕ್ಷೇತ್ರದಲ್ಲಿ ಮಾತನಾಡುತ್ತಾರೆ. ಇಲ್ಲಿ ಬಂದು ದಬ್ಬಾಳಿಕೆ ಮಾಡುತ್ತಾರೆ. ಯಾರೋ ಒಂದು ಎರಡು ಸಾವಿರ ಕಾರ್ಯಕರ್ತರ ಜೊತೆ ಶೋ ಮಾಡುವುದು ಮುಖ್ಯ ಅಲ್ಲ. ಕ್ಷೇತ್ರದಲ್ಲಿ ಎರಡು ಲಕ್ಷ ಇಪ್ಪತೈದು ಸಾವಿರ ಜನ ಮತದಾರರಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ತೀರ್ಪು ಕೊಡುತ್ತಾರೆ. ನಮ್ಮ ತಾಲೂಕು ಹಾಗೂ ಜಿಲ್ಲಾ ಮತದಾರರು ತಮ್ಮ ಮತಗಳ ಮೂಲಕ ತೀರ್ಪು ಕೊಡುತ್ತಾರೆ ಎಂದು ಹೇಳಿದರು.