ಕೊರೊನಾವೈರಸ್ ಭೀತಿ: ಸ್ವಯಂ ಲಾಕ್ ಡೌನ್ ಗೆ ಒಪ್ಪಿದ ಕನಕಪುರ ಜನತೆ
ರಾಮನಗರ, ಜೂನ್ 22: ಕೊರೊನಾ ವೈರಸ್ ರಣಕೇಕೆಗೆ ಕನಕಪುರ ಜನ ಬೆಚ್ಚಿಬಿದ್ದಿದ್ದು, ಜೂನ್ 22 ರಿಂದ ಕನಕಪುರದಲ್ಲಿ ಜನರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಮಾಡಿಕೊಂಡಿದ್ದಾರೆ. ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 1 ರ ವರೆಗೆ ಸಂಪೂರ್ಣ ಬಂದ್ ಮಾಡಲಾಗಿದೆ.
Recommended Video
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತಿರುವ ಹಿನ್ನೆಲೆಯಲ್ಲಿ ಕನಕಪುರ ಪಟ್ಟಣವನ್ನು ಜುಲೈ 1 ರ ವರೆಗೆ ಲಾಕ್ ಡೌನ್ ಮಾಡಲು ನಾಗರೀಕರು ಒಪ್ಪಿಗೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಭಾನುವಾರ ಘೋಷಣೆ ಮಾಡಿದ್ದರು.
ಬೆಳಿಗ್ಗೆ 11 ರ ವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಅವಕಾಶ ನೀಡಲಾಗಿದ್ದು, ನಂತರ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಜನರು ಓಡಾಟ ಕೂಡ ಮಾಡುವಂತಿಲ್ಲ, ಕೆಲ ಅಂಗಡಿಗಳು ಓಪನ್ ಆಗಿದ್ದು, ಹಲವು ಅಂಗಡಿಗಳು ಕ್ಲೋಸ್ ಆಗಿವೆ.

ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನಕಪುರ ಕ್ಷೇತ್ರದ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ನಾಗರೀಕರ ಸಭೆ ನಡೆಸಿ, ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಸಲಹೆ ಪಡೆದು ನಂತರ 9 ದಿನ ಪಟ್ಟಣವನ್ನು ಲಾಕ್ ಡೌನ್ ಮಾಡುವ ಘೋಷಣೆ ಮಾಡಿದ್ದರು. ಸಭೆಯಲ್ಲಿ ಜಿಲ್ಲಾಧಿಕಾರಿ ಅರ್ಚನಾ, ಸಂಸದ ಡಿ.ಕೆ ಸುರೇಶ್ ಸೇರಿದಂತೆ ಪಟ್ಟಣದ ನಾಗರೀಕರು ಭಾಗವಹಿಸಿದ್ದರು.
ಕನಕಪುರವನ್ನು ಲಾಕ್ ಡೌನ್ ಮಾಡುತ್ತಿರುವುದು ಸರ್ಕಾರದ ಆದೇಶವಲ್ಲ, ನಮ್ಮ ಆರೋಗ್ಯಕ್ಕಾಗಿ. ಪಟ್ಟಣದ ನಾಗರೀಕರೆಲ್ಲರೂ ಸೇರಿ ಲಾಕ್ ಡೌನ್ ನಿರ್ಧಾರ ಮಾಡಿದ್ದೇವೆ. ಶಾಲೆ, ಕಾಲೇಜು ಹಾಗೂ ಪರೀಕ್ಷೆಗಳು ಮಾಮೂಲಿನಂತೆ ನಡೆಯುತ್ತವೆ, ಮದ್ಯದಂಗಡಿಗಳು ತೆರೆದಿರುತ್ತವೆ ಅವುಗಳಿಗೆ ಒಂದು ಸಮಯ ನಿಗದಿ ಮಾಡಲು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡಿಕೆಶಿ ಹೇಳಿದರು.

ಇನ್ನು ಹಾಲು, ಹಣ್ಣು, ತರಕಾರಿ, ದಿನಸಿ ಅಂಗಡಿ, ಹಾಗೂ ಮಾಂಸದಂಡಿಗಳು ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಮಾತ್ರ ತೆರೆಯಬೇಕು, ಹಾಗೂ ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಮೆಡಿಕಲ್ ಸ್ಟೋರ್ ಮತ್ತು ಆಸ್ಪತ್ರೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಸಭೆ ಮಾಡಿ ಅಂತಿಮ ಮಾಡುತ್ತಾರೆ ಎಂದರು.
ಜಿಲ್ಲೆಯಲ್ಲಿ ಕ್ವಾರಂಟೈನ್ ಇರುವ ಜನರಿಗೆ ಸರ್ಕಾರವು ಊಟಕ್ಕೆ 60 ರುಪಾಯಿ ನಿಗದಿ ಮಾಡಿದೆ. ಸರ್ಕಾರ ನೀಡುವ ಹಣದ ಜೊತೆಗೆ ನಮ್ಮ ಡಿಕೆಎಸ್ ಟ್ರಸ್ಟ್ ವತಿಯಿಂದ ಒಬ್ಬರಿಗೆ ನೂರು ನೀಡುತ್ತೇವೆ. ಒಟ್ಟು ಒಬ್ಬರಿಗೆ 160 ರುಪಾಯಿಯ ಉತ್ತಮ ದರ್ಜೆಯ ಆಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ವೇಳೆ ಉತ್ತಮ ಊಟ ಒದಗಿಸಲು ಜಿಲ್ಲಾಡಳಿತಕ್ಕೆ ಕಷ್ಟವಾದರೆ ನಮ್ಮ ಟ್ರಸ್ಟ್ ವತಿಯಿಂದಲೇ ಊಟ ಸರಬರಾಜು ಮಾಡುತ್ತೇವೆ ಎಂದರು.

ಪಟ್ಟಣದಲ್ಲಿ ವೈದ್ಯ ದಂಪತಿಗಳಿಗೆ ಕೊರೊನಾ ವೈರಸ್ ವಕ್ಕರಿಸಿದ ಬೆನ್ನಲ್ಲೇ ಅವರಿಂದ ಚಿಕಿತ್ಸೆ ಪಡೆದ 25 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಅಲ್ಲದೇ ವೈದ್ಯರಿಂದ ಚಿಕಿತ್ಸೆ ಪಡೆದ ಜನರನ್ನು ಗುರುತಿಸುವುದು ಕಷ್ಟಕರವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಭೀತಿ ಇದೆ.












Click it and Unblock the Notifications