ಕೊರೊನಾ ಎಫೆಕ್ಟ್; ರಾಮನಗರದಲ್ಲಿ 28 ವಿದೇಶಿ ಪ್ರಜೆಗಳ ಮೇಲೆ ನಿಗಾ
ರಾಮನಗರ, ಮಾರ್ಚ್ 7: ಟೊಯೋಟಾ ಕಂಪನಿ ಸಿಬ್ಬಂದಿ, ಉನ್ನತ ವ್ಯಾಸಂಗ ಮಾಡುತ್ತಿರುವ ಹಾಗೂ ಯೋಗ ಕೇಂದ್ರಕ್ಕೆ ಭೇಟಿ ನೀಡಿರುವ ಒಟ್ಟಾರೆ 28 ಮಂದಿ ವಿದೇಶಿ ಪ್ರಜೆಗಳು ಜಿಲ್ಲೆಯ ಬಿಡದಿಯಲ್ಲಿದ್ದು, ಅವರಲ್ಲಿ ಯಾರಿಗೂ ಕೊರೊನಾ ವೈರಸ್ ಕಂಡು ಬಂದಿಲ್ಲ. ಆದರೂ 14 ದಿನದಿಂದ 28 ದಿನಗಳವರೆಗೆ ವಿದೇಶಿಯರನ್ನು ಪ್ರತಿನಿತ್ಯ ತಪಾಸಣೆ ಮಾಡಲಾಗುತ್ತಿದ್ದು, ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ನಿರಂಜನ್ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ತಿಳಿಸಿದರು.
ಇಂದು ನಡೆದ ರಾಮನಗರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ಕೊರೊನಾ ವೈರಸ್ ಸುದ್ದಿ ಸದ್ದು ಮಾಡಿದೆ. ಜಿಲ್ಲೆಯಲ್ಲಿ ಬಂದಿರುವ ವಿದೇಶಿಗರ ಮೇಲೆ ನಿಗಾ ವಹಿಸಿದ್ದು ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಸಭೆಗೆ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಆತಂಕ: ಬೆಂಗಳೂರಿನ ಟ್ರಾಫಿಕ್ ಪೊಲೀಸರು ಧರಿಸಿದ್ರು ಮಾಸ್ಕ್
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಮನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸಪ್ಪ, "ಜಿಲ್ಲೆಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಜಿಲ್ಲಾ ಆರೋಗ್ಯ ಇಲಾಖೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ. ರಾಮನಗರ ಜಿಲ್ಲೆ ಬೆಂಗಳೂರಿಗೆ ಸನಿಹದಲ್ಲಿರುವ ಕಾರಣ ಕೊರೊನಾ ಭೀತಿ ಇದೆ. ಅಲ್ಲದೆ ಬಿಡದಿ ಕೈಗಾರಿಕಾ ಪ್ರದೇಶದ ಟೊಯೋಟಾ ಕಂಪನಿಗೆ ವಿದೇಶಿಗರು ಬರುವ ಹಿನ್ನೆಲೆಯಲ್ಲಿ ನಿಗಾವಹಿಸುವಂತೆ ತಿಳಿಸಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪಕ್ರರಣ ಪತ್ತೆಯಾಗಿಲ್ಲ" ಎಂದರು.
ಜಿಲ್ಲಾಸ್ಪತ್ರೆಯಲ್ಲಿ 6 ಬೆಡ್ ಹಾಗೂ ಜಿಲ್ಲಾ ವ್ಯಾಪ್ತಿಯ ಇನ್ನುಳಿದ ಮೂರು ತಾಲ್ಲೂಕುಗಳಾದ ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಶಂಕಿತರ ಚಿಕಿತ್ಸೆಗಾಗಿ ತಲಾ 6 ಬೆಡ್ ನ ಕೊಠಡಿಗಳನ್ನು ತೆರೆಯಲಾಗಿದೆ. ಅಲ್ಲದೇ ಪ್ರತಿ ಗ್ರಾಮಗಳಲ್ಲಿ ಈ ವೈರಸ್ ತಡೆಯ ಸಂಬಂಧ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಭಿತ್ತಿ ಪತ್ರಗಳನ್ನು ಮನೆ ಮನೆಗೆ ವಿತರಣೆ ಮಾಡಲಾಗಿದೆ" ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್ ಸಭೆಗೆ ಮಾಹಿತಿ ನೀಡಿದರು.