ಕೊರೊನಾ ಎಫೆಕ್ಟ್: ಮೊದಲ ಬಾರಿ ರಾಮನಗರ ಜೈಲು ಸೀಲ್ ಡೌನ್
ರಾಮನಗರ, ಮೇ 1: ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರೇಷ್ಮೆ ನಗರಿ ರಾಮನಗರ ಜಿಲ್ಲೆಯ ಜಿಲ್ಲಾ ಕಾರಗೃಹ ಸ್ಥಾಪನೆಯಾಗಿ 13 ವರ್ಷ ಕಳೆದಿವೆ. ಅಲ್ಲಿಂದ ಇಲ್ಲಿಯವರೆಗೆ ವಿಚಾರಣಾಧೀನ ಕೈದಿಗಳಿಂದ ತುಂಬಿ ತುಳುಕುತ್ತಿದ್ದ ಕಾರಾಗೃಹ ಕೊರೊನಾ ವೈರಸ್ ಎಫೆಕ್ಟ್ಗೆ ಜೈಲು ಸಂಪೂರ್ಣ ಖಾಲಿ ಮಾಡಿ ಸೀಲ್ ಡೌನ್ ಮಾಡಿದ್ದಾರೆ.
2007 ರಲ್ಲಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಮನಗರ ಜಿಲ್ಲಾ ಕಾರಾಗೃಹ ಉದ್ಘಾಟನೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಸಮಸ್ಯೆಗಳಿಲ್ಲದೇ ಜಿಲ್ಲಾ ಕಾರಗೃಹ ಕಾರ್ಯನಿರ್ವಹಿಸುತ್ತಿತ್ತು. ಆದರೆ ಪಾದರಾಯನಪುರ ಆರೋಪಿಗಳಿಂದಾಗಿ ಜೈಲು ಸಂಪೂರ್ಣ ಸೀಲ್ ಡೌನ್ ಆಗಿದೆ. ಬೆಂಗಳೂರಿನ ಪಾದರಾಯನಪುರದ ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಜಿಲ್ಲೆಯ ಪ್ರಮುಖ ನಾಯಕರ ವಿರೋಧ ನಡುವೆಯೂ ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
121 ಆರೋಪಿಗಳ ಪೈಕಿ 5 ಮಂದಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ ಅವರ ಹೋರಾಟದ ಎಚ್ಚರಿಕೆಯಿಂದಾಗಿ ಆರೋಪಿಗಳನ್ನು ಮತ್ತೆ ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡಲಾಯಿತು.
ಇದಕ್ಕೂ ಮೊದಲು ರಾಮನಗರ ಜೈಲಿನಲ್ಲಿದ್ದ 177 ಜನ ಖೈದಿಗಳ ಪೈಕಿ 160 ಜನರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿ, ಇನ್ನುಳಿದ 17 ಜನರನ್ನು ಪಾದರಾಯನಪುರದ ಆರೋಪಿಗಳಿಗೆ ಸೇವೆ ಮಾಡಲು ಇಲ್ಲೇ ಉಳಿಸಿಕೊಳ್ಳಲಾಗಿತ್ತು. ನಂತರ ಪಾದರಾಯನಪುರದ ಆರೋಪಿಗಳ ಜೊತೆಗೆ ಉಳಿದ 17 ಜನರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಯಿತು. ಆದರೆ ಈಗ ರಾಮನಗರ ಜೈಲು ಕೊರೊನಾ ಸೋಂಕಿನ ವಿಚಾರವಾಗಿ ಇಡೀ ಜೈಲನ್ನೇ ಸೀಲ್ ಡೌನ್ ಮಾಡಿ ಬೀಗ ಜಡಿಯಲಾಗಿದೆ.
ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಇಡೀ ಜೈಲನ್ನೇ ಸೀಲ್ ಡೌನ್ ಮಾಡಲಾಗಿದೆ. ಆದರೆ ಇದರಿಂದಾಗಿ ಜಿಲ್ಲೆಯಲ್ಲಿ ಅಪರಾಧಗಳನ್ನು ಮಾಡಿ ಜೈಲಿನಲ್ಲಿದ್ದ ಸ್ಥಳೀಯ ಕೈದಿಗಳ ಪರಿಸ್ಥಿತಿ ಹದಗೆಟ್ಟಿದೆ. ಇನ್ನು ಅವರ ಕುಟುಂಬದವರು ವಾರಕೊಮ್ಮೆ, ತಿಂಗಳಿಗೊಮ್ಮೆ ಜೈಲಿಗೆ ಅವರನ್ನು ನೋಡಲು ಬರುತ್ತಿದ್ದರು.
ಆದರೆ ಅವರನ್ನು ಈಗ ಬೆಂಗಳೂರಿಗೆ ಶಿಫ್ಟ್ ಮಾಡಿರುವ ಹಿನ್ನೆಲೆ ರಾಮನಗರ ಜೈಲಿನಲ್ಲಿದ್ದ ಕೈದಿಗಳ ಕುಟುಂಬಸ್ಥರು ಭೇಟಿಯಾಗದೇ ಆತಂಕದಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಈಗ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಸದ್ಯ ಜೈಲಿನಲ್ಲಿಡಲು ಜೈಲೇ ಸೀಲ್ ಡೌನ್ ಆಗಿರುವ ಕಾರಣ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.