ಮಂಗಳೂರು ಹತ್ಯೆಗಳನ್ನು ರಾಜಕೀಯವಾಗಿ ಬಂಡವಾಳ ಮಾಡಿಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ : ಹೆಚ್ಡಿಕೆ
ಚನ್ನಪಟ್ಟಣ, ಜುಲೈ 31: ಕರಾವಳಿ ಭಾಗದ ಮಂಗಳೂರಿನಲ್ಲಿ ಕೆಲವೇ ದಿನಗಳ ಅಂತರದಲ್ಲಿ ಮೂರು ಯುವಕರ ಹತ್ಯೆಗಳು ನಡೆದಿರುವುದು ಆಘಾತಕಾರಿ ಘಟನೆ . ಅಮಾಯಕ ಯುವಕರ ಹತ್ಯೆಗಳನ್ನು ರಾಜಕೀಯವಾಗಿ ಬಂಡವಾಳ ಮಾಡಿಕೊಳ್ಳುವ ಬಹುದೊಡ್ಡ ಷಡ್ಯಂತ್ರ ನಡೆದಿದೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಚನ್ನಪಟ್ಟಣದ ಗೌಡಗೆರೆಯ ಗ್ರಾಮದಲ್ಲಿ ವಿಶ್ವದ ಅತಿ ದೊಡ್ಡ ಶ್ರೀಚಾಮುಂಡೇಶ್ವರಿ ದೇವಿಗೆ ಐತಿಹಾಸಿ ಮಹಾಮಸ್ತಾಭಿಷೇಕ ಹಿನ್ನೆಲೆಯಲ್ಲಿ ದಾನಿಗಳು ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವ 15 ಕೆಜಿ ಚಿನ್ನದ ಶ್ರೀಚಾಮುಂಡೇಶ್ವರಿ ವಿಗ್ರಹಕ್ಕೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇತ್ತೀಚಿಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ವೈಷಮ್ಯ ದೂರ ಮಾಡಿ ಶಾಂತಿ ನೆಲಸುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ : ಕಾಂಗ್ರೆಸ್ ಮುಖಂಡ ಪವನ್ ಖೇರಾ ಆರೋಪ
ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ತಾಯಿಯ ಆಶೀರ್ವಾದ ನಾಡಿನ ಜನರ ಮೇಲಿರಲಿ. ಎಲ್ಲರಿಗೂ ಸದ್ಬುದ್ದಿಯನ್ನು ಕರುಣಿಸಿ, ವೈಷಮ್ಯ ದೂರಾಗಿ ಶಾಂತಿಯ ವಾತಾವರಣ ಮೂಡಲಿ, ಜನತೆ ಶಾಂತಿ ನೆಮ್ಮದಿಯಿಂದ ಇರಲೆಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಮಹಾಮಸ್ತಾಭಿಷೇಕದಲ್ಲಿ ಪಾಲ್ಗೊಂಡು ಹೆಚ್ಡಿಕೆ ತಿಳಿಸಿದರು.
ಸಾಮರಸ್ಯ ಬೆಳೆಸುವಲ್ಲಿ ಸರಕಾರ ವಿಫಲ
ಕರಾವಳಿಯ ಮಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಕೋಮು ದಳ್ಳುರಿ ಇದೆ. ಎರಡು ಕೋಮುಗಳ ನಡುವೆ ಸಾಮರಸ್ಯದ ಕೊರತೆ ಇದೆ. ಆದರೆ ಬಿಜೆಪಿ ಸರಕಾರದಿಂದ ಎರಡು ಸಮುದಾಯವನ್ನು ಬೆಸೆಯುವ ಕೆಲಸ ನಡೆಯುತ್ತಿಲ್ಲ. ಕೋಮುಗಳ ನಡುವೆ ಸಾಮರಸ್ಯ ಮೂಡಿಸಬೇಕಿದೆ. ಸಾಮರಸ್ಯ ಮೂಡಿಸುವ ಕೆಲಸ ಸರಕಾರ ಮಾಡಬೇಕಿತ್ತು, ಆದರೆ ಅದು ಮರಿಚೀಕೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಈ ರೀತಿಯ ಮಂಗಳೂರು ಪ್ರವಾಸ ನಿರೀಕ್ಷೆ ಮಾಡಿರಲಿಲ್ಲ. ರಾಜಕೀಯ ನಾಯಕರು, ಸರಕಾರದ ನಡವಳಿಕೆ ಬಗ್ಗೆ ರಾಜ್ಯದ ಜನರಲ್ಲಿ ಅಸಮಾಧಾನವಿದೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ. ಈ ರೀತಿಯ ಹತ್ಯೆಗಳಿಂದ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಸಂಘಟನೆ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹತ್ಯೆಗೊಳಗಾದ ಕುಟುಂಬಕ್ಕೆ ಭೇಟಿ
ನಾಳೆ ಬೆಳಿಗ್ಗೆ ನಾನು ಮಂಗಳೂರಿಗೆ ತೆರಳುತ್ತಿದ್ದೇನೆ. ಮಂಗಳೂರಿನಲ್ಲಿ ಹತ್ಯೆಯಾದ ಮೂರು ಅಮಾಯಕ ಯುವಕರ ಕುಟುಂಬಗಳನ್ನು ಭೇಟಿಯಾಗುತ್ತಿದ್ದೇನೆ. ಮೃತ ಯುವಕರ ಮೂರು ಕುಟುಂಬಕ್ಕೂ ಸಾಂತ್ವನ ಹೇಳುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನದೇ ಆದ ಮಾಹಿತಿಯೂ ಇದೇ. ಅಲ್ಲದೇ ಮೂರು ಕುಟುಂಬಗಳೊಂದಿಗೆ ಚರ್ಚೆಮಾಡಿ ಘಟನೆಯ ವಾಸ್ತವಾಂಶದ ಬಗ್ಗೆ ಮಾಹಿತಿ ಕಲೆ ಹಾಕುತ್ತಾನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಶಾಂತಿಯ ವಾತಾವರಣ ತರಲು ಪ್ರಯತ್ನ
ಮಂಗಳೂರು ಭೇಟಿಯ ಸಮಯದಲ್ಲಿ ನಾನು ಯುವಕರಲ್ಲಿ ಶಾಂತಿಯ ವಾತಾವರಣ ತರಲು ಮನವಿ ಮಾಡುತ್ತೇನೆ, ಈ ಮೂಲಕ ಕೆಲ ಪಟ್ಟಭದ್ರರು ಇಂತಹ ಘಟನೆಗಳನ್ನು ರಾಜಕೀಯ ಬಂಡವಾಳ ಮಾಡಿಕೊಂಡಿದ್ದಾರೆ. ರಾಜಕೀಯದ ದೊಡ್ಡಮಟ್ಟದ ಷಡ್ಯಂತ್ರ ಇದೆ. ಈ ಘಟನೆಗಳಲ್ಲಿ ಭಾವನಾತ್ಮಕ ವಿಚಾರ ಕೆದಕಿ ರಾಜಕೀಯ ಲಾಭ ಪಡೆಯಲು, ಮತ ಪಡೆಯಲು ಕೆಲವು ಪಕ್ಷ ಹೊರಟಿವೆ. ಹಾಗಾಗಿ ನಿಮ್ಮ ಕುಟುಂಬದಲ್ಲಿ ಅಶಾಂತಿ ವಾತಾವರಣ ಬರುವುದು ಬೇಡ ಎಂದು ಮನವಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕರಾವಳಿಯಲ್ಲಿ ಸರಣಿ ಹತ್ಯೆ: ಜಿಲ್ಲಾಡಳಿತದ ಶಾಂತಿ ಸಭೆಗೆ ಮುಖಂಡರು ಗೈರು
ಹತ್ಯೆ ನಿಂತು, ಮಾನವೀಯ ಮೌಲ್ಯ ಬೆಳೆಯಲಿ
ಮಂಗಳೂರಿನಲ್ಲಿ ನಡೆಯುತ್ತಿರುವ ಹತ್ಯೆಗಳು ನಿಲ್ಲಬೇಕಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಬೇಕಿದೆ .ಇಲ್ಲಿ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲಿ. ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಡೆಯಬೇಕಿದೆ. ಅಲ್ಲಿನ ಬಡವರ್ಗದ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಚಿಂತನೆ ನಡೆಸಬೇಕು ಈ ರೀತಿಯ ಹತ್ಯೆಗಳಿಂದ ಅಭಿವೃದ್ಧಿ ಆಗುವುದಿಲ್ಲ, ಇದನ್ನು ಪ್ರತಿ ಕೋಮಿನವರು ಅರ್ಥ ಮಾಡಿಕೊಳ್ಳಲಿ, ಮಂಗಳೂರಿನಲ್ಲಿ ಮೊದಲು ಶಾಂತಿಯ ವಾತಾವರಣ ಮೂಡಬೇಕಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.