ಮಾಗಡಿಯಲ್ಲಿ ಕಾಂಗ್ರೆಸ್ ಗೆ ಟಾಂಗ್ ನೀಡಿದ ಜೆಡಿಎಸ್, ಎ.ಮಂಜುಗೆ ಗಾಳ
ರಾಮನಗರ, ಅಕ್ಟೋಬರ್ 30: "ನಾನು ಈಗಾಗಲೇ ಮಾನಸಿಕವಾಗಿ ಜೆಡಿಎಸ್ ಸೇರಿದ್ದೇನೆ. ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಮಾಗಡಿಯ ಕೆಂಪೇಗೌಡ ಮೈದಾನದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಅಧಿಕೃತವಾಗಿ ಜೆಡಿಎಸ್ ಸೇರುತ್ತೇನೆ" ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯರೂ ಆಗಿರುವ ಎ.ಮಂಜು ತಿಳಿಸಿದರು.
ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಮತ್ತು ನಾನು ಉತ್ತಮ ಸ್ನೇಹಿತರು. ಬಹಳ ವರ್ಷಗಳಿಂದಲೂ ವ್ಯಾಪಾರ- ವಹಿವಾಟು ಹಾಗೂ ರಾಜಕಾರಣವನ್ನು ಜೊತೆಜೊತೆಗೆ ಮಾಡುತ್ತಿದ್ದೇವೆ. ಆದರೆ ಸ್ನೇಹ ಬೇರೆ, ರಾಜಕಾರಣ ಬೇರೆ.
ಈ ಹಿಂದೆ ಬಿಜೆಪಿಯವರು ನನ್ನನ್ನು ಮಾಗಡಿ ಕ್ಷೇತ್ರದಿಂದ ಕಣಕ್ಕಿಳಿಸಲು ಬಹಳ ಪ್ರಯತ್ನಪಟ್ಟಿದ್ದಾರೆ. ಆದರೆ ನಾನು ದೇವೇಗೌಡರಿಗೆ ಮನಸ್ಸು ಕೊಟ್ಟಿದ್ದೇನೆ, ಕೊನೆಯವರೆಗೂ ಜೆಡಿಎಸ್ ನಲ್ಲೇ ಇರುತ್ತೇನೆಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಭಿನ್ನಮತೀಯ ಶಾಸಕ ಬಾಲಕೃಷ್ಣ ಜೆಡಿಎಸ್ ನಿಂದ ಕೈ ಪಾಳಯಕ್ಕೆ ಜಿಗಿದಿದ್ದಾರೆ. ಇದಕ್ಕೆ ತಿರುಗೇಟು ನೀಡುವಂತೆ ಕಾಂಗ್ರೆಸ್ ನ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಅವರನ್ನು ಜೆಡಿಎಸ್ ಗೆ ಸೆಳೆದಿದೆ.
ಆ ಪ್ರಯತ್ನವಾಗಿ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ ಪಟ್ಟಣದಲ್ಲಿ ನೆಲ್ಲಿಗುಡ್ಡ ಕೆರೆಗೆ ಜೆಡಿಎಸ್ ವತಿಯಿಂದ ಬಾಗಿನ ಅರ್ಪಣೆ ಮತ್ತು ಗಂಗೆ ಪೂಜೆ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ಪಕ್ಷದಿಂದ ಹೊರಬಂದು ಜೆಡಿಎಸ್ ಸೇರ್ಪಡೆಯಾಗುತ್ತಿರುವ ಎ.ಮಂಜು ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಬಿಡದಿ ಬಿಜಿಎಸ್ ಸರ್ಕಲ್ ನಿಂದ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ತೆರಳಿದರು.

ಸುಮಾರು ಎರಡು ಕಿ.ಮೀ ದೂರದಲ್ಲಿನ ನೆಲ್ಲಿಗುಡ್ಡ ಕೆರೆಗೆ ಬಾಗಿನ ಅರ್ಪಿಸಲಾಯಿತು. ಐದು ಸಾವಿರಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಮತ್ತು ಎ.ಮಂಜು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿಯಾದರು. ಆ ಮೂಲಕ ಜೆಡಿಎಸ್ ನ ಭದ್ರಕೋಟೆ ಬಿಡದಿ ಎಂಬ ಸಂದೇಶವನ್ನು ರವಾನಿಸುವ ಯತ್ನ ನಡೆಯಿತು.












Click it and Unblock the Notifications