ಸಿದ್ದರಾಮಯ್ಯ ಕೃಪೆಯಿಂದ ಪ್ರತಾಪ ಸಿಂಹ ಸಂಸದರಾಗಿದ್ದಾರೆ, ಅನುಭವ ಇಲ್ಲ: ಸಿಎಂ ಇಬ್ರಾಹಿಂ
ರಾಮನಗರ, ಸೆಪ್ಟೆಂಬರ್, 05: ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಸಮರ್ಥನೆ ಮಾಡಿಕೊಂಡಿದ್ದರು. ಈ ವಿಚಾರಕ್ಕೆ ರಾಮನಗರದಲ್ಲಿ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯಿಸಿ ಕುಮಾರಸ್ವಾಮಿ ಅವರಿಗೆ ಇರುವ ಜ್ಞಾನ, ಅನುಭವ ಅವರಿಗೆ ಇಲ್ಲ. ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡು ಇದ್ದವರು ಸಿದ್ದರಾಮಯ್ಯ ಅವರ ಕೃಪೆಯಿಂದ ಇದೀಗ ಸಂಸದರಗಿದ್ದಾರೆ ಅಷ್ಟೇ. ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದರು.
"ಪ್ರತಾಪ, ಸಿಂಹ ಎರಡೂ ಇದ್ದರೆ ಕಷ್ಟ ಆಗುತ್ತದೆ. ಇಲ್ಲ ಸಿಂಹ ಇರಬೇಕು, ಇಲ್ಲ ಪ್ರತಾಪ ಇರಬೇಕು. ಪ್ರತಾಪ ಸಿಂಹ ಇದ್ದರೆ ಬರೀ ಮಾಂಸ, ಹಾ ಹಾ ಅನ್ನುತ್ತೆ, ಪ್ರತಾಪ ಸಿಂಹ ಯಾಕೆ ಆ ಕಂಪನಿಯ ಪರವಾಗಿ ಮಾತನಾಡುತ್ತಿದ್ದಾರೆ? ಗುತ್ತಿಗೆದಾರರ ಅಧ್ಯಕ್ಷರು ಹೇಳುವಂತೆ 40% ಕಮಿಷನ್ ಇಲ್ಲೂ ಇರಬೇಕು. ಇಲ್ಲದ್ದಿದ್ದರೆ ಗುತ್ತಿಗೆದಾರ ಪ್ರತಾಪ್ ಸಿಂಹರ ಚಿಕ್ಕಪ್ಪನಾ" ಎಂದು ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.
ಪ್ರತಾಪ್ ಸಿಂಹ ಏನ್ ದೊಡ್ಡ ಎಂಜಿನಿಯರಾ? ಅವರಿಂದ ಕಲಿಯಬೇಕಾ?: ಕುಮಾರಸ್ವಾಮಿ ವ್ಯಂಗ್ಯ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಹಿಂದೆಂದೂ ಕಂಡು ಕೇಳರಿಯದ ಪ್ರವಾಹ ಬಂದು ಜನರನ್ನು ಕಷ್ಟಕ್ಕೆ ದೂಡಿದೆ. ಇದಕ್ಕೆ ಅವೈಜ್ಞಾನಿಕ ಕಾಮಗಾರಿಯೇ ನೇರ ಕಾರಣ. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅವಹಾಲು ಸ್ವೀಕರಿಸಿದ್ದಾರೆ. ನಂತರ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದಿರುವ ಕಂಪನಿ ಸಾರ್ವಜನಿಕರಿಗೆ ಆಗಿರುವ ನಷ್ಟ ಕಷ್ಟಗಳಿಗೆ ನೇರ ಹೊಣೆಗಾರರು ಎಂದು ಆರೋಪಿಸಿದರು.
ತಾತ್ಕಲಿಕ ಪರಿಹಾರ ಒದಗಿಸಿ ಎಂದು ಮನವಿ
ರಾಮನಗರದಲ್ಲಿ ಹಲವು ಮನೆಗಳು ನೆಲಸಮ ಆಗಿವೆ. ರೇಷ್ಮೆ ಉದ್ಯಮ ನೆಲಕಚ್ಚಿದ್ದು, ಇಂತಹ ಸಂದರ್ಭದಲ್ಲಿಯೇ ರೇಷ್ಮೆ ನೂಲು ಗಿರಣಿಗಳು ಜಲಾವೃತವಾಗಿವೆ. ಮನೆಗಳಲ್ಲಿನ ವಸ್ತುಗಳು ನೀರು ಪಾಲಾಗಿವೆ. ಕೆಲವರು ಉಟ್ಟ ಬಟ್ಟೆಯಲ್ಲಿ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ಕೂಡಲೇ ಪ್ರತಿ ಮನೆಗೆ ತಾತ್ಕಾಲಿಕ ಪರಿಹಾರವಾಗಿ ಒಂದು ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡಬೇಕು ಎಂದು ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು.
ರಾಮನಗರ ನಂತರ ಕನಕಪುರದಲ್ಲೂ ರೌದ್ರತೆ ಮೆರೆದ ವರುಣ
ಜಿಲ್ಲೆಯ ಜನರ ಬದುಕು ಮೂರಾಬಟ್ಟೆ
ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದಂತಹ ಪ್ರವಾಹ ಆಗಿದೆ. ನಾನು ಪ್ರವಾಹ ಭೀತಿಯನ್ನು ಉತ್ತರ ಕರ್ನಾಟಕದಲ್ಲಿ ಕಂಡಿದ್ದೇ. ಆದರೆ ಅದನ್ನೂ ಮೀರಿಸುವಂತಹ ಸ್ಥಿತಿ ರಾಮನಗರದಲ್ಲಿ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ತ್ವರಿತವಾಗಿ ನೆರವಿಗೆ ನಿಲ್ಲಬೇಕು ಎಂದು ಈಗಾಗಲೇ ನಮ್ಮ ನಾಯಕರು ಒತ್ತಾಯಿಸಿದ್ದಾರೆ. ನಾನು ಕೂಡ ಅವರ ಒತ್ತಾಯಕ್ಕೆ ಧ್ವನಿಗೂಡಿಸುತ್ತೇನೆ. ಪ್ರವಾಹದಿಂದ ಸಂತ್ರಸ್ಥರಾದ ಕುಟುಂಬಗಳಿಗೆ ಸ್ವಯಂ ಸೇವಾ ಸಂಸ್ಥೆಗಳು, ಮುಸ್ಲಿಂ ಧಾರ್ಮಿಕ ಸಂಘಟನೆಗಳು, ದಾನಿಗಳು ಒಟ್ಟಾಗಿ ಬೃಹತ್ ಪ್ರಮಾಣದಲ್ಲಿ ಬಟ್ಟೆ, ಪಾತ್ರೆ, ಆಹಾರ ಪದಾರ್ಥಗಳು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅವರ ನೆರವಿಗೆ ಧಾವಿಸಿವೆ. ಜೊತೆಗೆ ಜೆಡಿಎಸ್ ಪಕ್ಷ ಹಗಲಿರುಳು ಜನರ ಕಷ್ಟಗಳಿಗೆ ಸ್ಪಂಧನೆ ನೀಡುತ್ತಿದೆ ಎಂದರು.
ಜೆಡಿಎಸ್ ಪಕ್ಷದ ಬಗ್ಗೆ ಸಿ.ಎಂ.ಇಬ್ರಾಹಿಂ ಭವಿಷ್ಯ
ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕೊಡಗಿನ ಪ್ರವಾಹ ಸಂತ್ರಸ್ಥ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದ್ದರು. ಅವರ ಮಾದರಿಯಲ್ಲೇ ಇಲ್ಲಿನ ಪ್ರವಾಹ ಪೀಡಿತ ಸಂತ್ರಸ್ಥರಿಗೂ ಮನೆ ನಿರ್ಮಾಣ ಮಾಡಿ ಕೊಡಿ. ಸರ್ಕಾರದದಿಂದ ಕೊಡುಗು ಮಾದರಿಯಲ್ಲಿ ಮನೆ ನಿರ್ಮಿಸಿ ಕೊಡಲು ನಿಮ್ಮಿಂದ ಆಗದಿದ್ದರೆ ಹೇಳಿ. ಬರುವ 2023ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಆಯ್ಕೆ ಆಗಲಿದ್ದು, ನೊಂದವರಿಗೆ ಮನೆ ಕಟ್ಟಿ ಕೊಡುವ ಕಾರ್ಯವನ್ನು ಮಾಡುತ್ತಾರೆ. ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಸಿ.ಎಂ.ಇಬ್ರಾಹಿಂ ಭವಿಷ್ಯ ನುಡಿದರು.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಪ್ರತಿಕ್ರಿಯೆ
ಕಾಂಗ್ರೆಸ್ ಪಕ್ಷ ಅಮ್ಮಿಕೊಂಡಿರುವ "ಭಾರತ್ ಜೋಡೊ" ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಮೊದಲು ಕಾಂಗ್ರೆಸ್ "ಜೋಡೋ ಯಾತ್ರೆ" ಮಾಡಬೇಕು. ಈಗಾಗಲೇ ಒಬ್ಬೊಬ್ಬರೇ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಕಾಂಗ್ರೆಸ್ ಜೋಡೊ ಯಾತ್ರೆ ಮಾಡಿದರೆ ಒಳ್ಳೆಯದು. ಹಿರಿಯ ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಜಾದ್, ಮುದ್ದಹನುಮೇಗೌಡ ಸೇರಿಂದತೆ ಹಲವು ಕಾಂಗ್ರೆಸ್ ನಾಯಕರು ಪಕ್ಷ ತೊರೆಯುತ್ತಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ರಾಮನಗರ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್, ಜೆಡಿಎಸ್ ನಗರ ಘಟಕ ಅಧ್ಯಕ್ಷ ಸುಯಲ್ ಪಾಷ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.