ಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ; ರಾಮನಗರದಲ್ಲಿ ತಡರಾತ್ರಿ ನಿವಾಸಿಗಳ ವಿರೋಧ
ರಾಮನಗರ, ಜೂನ್ 20: ಜನ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲು ಮುಂದಾದ ಅಧಿಕಾರಿಗಳ ಕ್ರಮ ವಿರೋಧಿಸಿ ಸಾರ್ವಜನಿಕರು ರಸ್ತೆಯನ್ನೇ ಬಂದ್ ಮಾಡಿದ ಘಟನೆ ನಿನ್ನೆ ತಡರಾತ್ರಿ ಚನ್ನಪಟ್ಟಣ ನಗರದ ಮಹದೇಶ್ವರ ದೇವಸ್ಥಾನದ ಬಳಿ ನಡೆದಿದೆ.
ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಹೌಸಿಂಗ್ ಬೋರ್ಡ್ ಜನವಸತಿ ಪ್ರದೇಶದ ಬಾಯ್ಸ್ ಹಾಸ್ಟೆಲ್ ಅನ್ನು ಕ್ವಾರಂಟೈನ್ ಸೆಂಟರ್ ಮಾಡುವ ಅಧಿಕಾರಿಗಳ ನಿರ್ಧಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು. ತಡರಾತ್ರಿಯೇ ಹಾಸ್ಟೆಲ್ ಬಳಿ ಜಮಾಯಿಸಿದ ಬಡವಾಣೆಯ ನಿವಾಸಿಗಳು ಅಧಿಕಾರಿಗಳ ನಿರ್ಧಾರ ಖಂಡಿಸಿ, ದೇವಸ್ಥಾನದ ಮುಖ್ಯದ್ವಾರಕ್ಕೆ ಬೇಲಿ ಹಾಕಿ ಅಧಿಕಾರಿಗಳು ಹಾಸ್ಟೆಲ್ ಪ್ರವೇಶ ಮಾಡದಂತೆ ತಡೆ ಹಿಡಿದಿದ್ದಾರೆ.
ಕ್ವಾರಂಟೆನ್ ಕೇಂದ್ರ ತೆರೆಯಲು ಗುರುತಿಸಿರುವ ಮಹದೇಶ್ವರ ದೇವಾಲಯದ ಪಕ್ಕದ ಬಾಯ್ಸ್ ಹಾಸ್ಟೆಲ್ ಸುತ್ತಲೂ ಜನ ವಸತಿ ಪ್ರದೇಶ ಇದ್ದು ಪುಟ್ಟ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರು ವಾಸಮಾಡುತ್ತಿದ್ದಾರೆ. ಅಲ್ಲದೇ ಚನ್ನಪಟ್ಟಣ - ಸಾತನೂರು ರಾಜ್ಯ ಹೆದ್ದಾರಿ ಪಕ್ಕದಲ್ಲೇ ಹಾದು ಹೋಗಿದ್ದು, ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ಮಂದಿ ಸಂಚಾರ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರದೇಶದಲ್ಲಿ ಕ್ವಾರಂಟೈನ್ ಸೆಂಟರ್ ಬೇಡ ಎಂದು ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತವನ್ನು ನಾಗರೀಕರು ಒತ್ತಾಯಿಸಿದ್ದಾರೆ.

ನಿನ್ನೆ ಶುಕ್ರವಾರ ನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತರ ಪ್ರಥಮ ಸಂಪರ್ಕಕ್ಕೆ ಬಂದಿರುವವರನ್ನು ಕ್ವಾರಂಟೈನ್ ಮಾಡಲು ತಾಲ್ಲೂಕು ಆಡಳಿತ ಮಹದೇಶ್ವರ ದೇವಾಲಯದ ಬಳಿ ಇರುವ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಆತಂಕಗೊಂಡು ಹೌಸಿಂಗ್ ಬೋರ್ಡ್, ಮಹದೇಶ್ವರ ನಗರ, ಹಲಸಿನಮರದದೊಡ್ಡಿ (ಕನಕನಗರ) ನಿವಾಸಿಗಳು ಹಾಸ್ಟೆಲ್ ಮುಂದೆ ಜಮಾಯಿಸಿ ಅಧಿಕಾರಿಗಳು ಬಂದು ಪರಿಶೀಲಿಸುವ ಮೊದಲೇ ಪ್ರತಿರೋಧ ವ್ಯಕ್ತಪಡಿಸಿದರು.
ಊರಾಚೆ ಇರುವ ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಿ, ಈ ಹಾಸ್ಟೆಲ್ ನ ಕಾಂಪೌಂಡ್ ಗೆ ಹೊಂದಿಕೊಂಡಂತೆ ಹಲವಾರು ಮನೆಗಳಿವೆ. ಅನೇಕ ಮಂದಿ ದೇವಾಲಯಕ್ಕೆ ಬಂದು ಹೋಗುತ್ತಾರೆ. ನಾಲ್ಕು ಜನರನ್ನು ರಕ್ಷಿಸುವ ಸಲುವಾಗಿ ನಾಲ್ಕು ನೂರು ಮಂದಿಗೆ ರೋಗ ತರುವುದು ತರವಲ್ಲ. ಅಧಿಕಾರಿಗಳು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.












Click it and Unblock the Notifications