ಆಸ್ಪತ್ರೆಗೆ ಬಂದವರಿಗೆ ರೋಗ ಪುಕ್ಕಟೆ! ಇದು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ಕತೆ!
ರಾಮನಗರ, ಜೂ.26: ಪಟ್ಟಣದ ಜನರ ಆರೋಗ್ಯ ಕಾಪಾಡಬೇಕಾದ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅಪಾಯಕಾರಿ ಮೆಡಿಕಲ್ ವೆಸ್ಟ್ ಸಂಗ್ರಹಿಸಿಕೊಂಡು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ನಗರದ ಜನರಿಗೆ ಕಾಯಿಲೆಗಳನ್ನು ಪುಕ್ಕಟೆಯಾಗಿ ಹಂಚುತ್ತಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯ ಮೆಡಿಕಲ್ ವೇಸ್ಟನ್ನು ಎಲ್ಲೆಂದರಲ್ಲಿ ಬಿಸಾಡುವ ಮೂಲಕ ಸಾರ್ವಜನಿಕ ಆಸ್ಪತ್ರೆ ಗಬ್ಬೆದ್ದು ನಾರುತ್ತಿದ್ದು, ಬಯೋ ಮೆಡಿಕಲ್ ವೇಸ್ಟ್ ಹ್ಯಾಂಡ್ಲಿಂಗ್ ರೂಲ್ಸ್ 2016/18 ಅನ್ನು ಉಲ್ಲಂಘನೆ ಮಾಡುವ ಜೊತೆಗೆ ಸರ್ಕಾರದ ನಿಯಮಗಳನ್ನು ಸರ್ಕಾರಿ ಅಧಿಕಾರಿಗಳೇ ಗಾಳಿಗೆ ತೂರಿದ್ದಾರೆ.
ನಾನು ಬೀದಿಯಲ್ಲಿ ಬ್ಯಾರಿಕೇಡ್ ಹತ್ತಿ ಡಾನ್ಸ್ ಮಾಡಬೇಕಿತ್ತೇ? ಕುಮಾರಸ್ವಾಮಿ
ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಕಸ ವೈಜ್ಞಾನಿಕ ವಿಲೇವಾರಿ ಮಾಡದೆ ಇರುವುದರಿಂದ ರಕ್ತ ಕೀವು ತುಂಬಿರುವ ಬ್ಯಾಂಡೇಜ್ ಬುಟ್ಟಿಗಳು ಸೇರಿದಂತೆ ಮೆಡಿಕಲ್ ವೇಸ್ಟೇಜ್ ಕಸದ ರಾಶಿಯಲ್ಲಿ ಬಿದ್ದಿದ್ದು ನಾಯಿಗಳು ಕಸದ ರಾಶಿಗೆ ಮುಗಿಬಿದ್ದಿವೆ. ಕಸವನ್ನು ಎಲ್ಲೆಂದರಲ್ಲಿ ಎಳೆದಾಡುತ್ತಿವೆ ಹಾಗಾಗಿ ರೋಗಗಳು ಹರಡುವ ಭೀತಿ ಹೆಚ್ಚಾಗುತ್ತಿದೆ ಎಂದು ಆಸ್ಪತ್ರೆಯ ಒಳ ರೋಗಿಗಳು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ
ಸಾರ್ವಜನಿಕ ಆಸ್ಪತ್ರೆಯ ಪುರುಷರ ವಾರ್ಡ್ ನಿಂದ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳ ಚಿಕಿತ್ಸೆಗೆ ಬಳಸಿದ ವಸ್ತುಗಳನ್ನು ಕಿಟಕಿಯಿಂದಲೇ ಕಸದ ರಾಶಿಗೆ ಎಸೆಯುತ್ತಾರೆ. ಆಸ್ಪತ್ರೆಯಲ್ಲಿ ಉತ್ಪತ್ತಿಯಾದ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಅಸ್ಪತ್ರೆ ನೈರ್ಮಲ್ಯ ಕಾಪಾಡಬೇಕಾದ ಆಸ್ಪತ್ರೆಯ ಸಿಬ್ಬಂದಿಗಳು ಮಾಮೂಲಿ ತ್ಯಾಜ್ಯದೊಂದಿಗೆ ಬಯೋ ಮೆಡಿಕಲ್ ವೇಸ್ಟೇಜ್ ಗಳನ್ನು ಸೇರಿಸಿ ಬಿಸಾಡುತ್ತಿದ್ದಾರೆ.
ಕಸದ ರಾಶಿ ಹಿಂಭಾಗವೇ 'ಇಂದಿರಾ ಕ್ಯಾಂಟೀನ್'
ಆಸ್ಪತ್ರೆಯ ಶವಾಗಾರದ ಹಾಗೂ ಆಕ್ಸಿಜನ್ ರೂಂ ಹಿಂಭಾಗದಲ್ಲಿ ಈ ಮೆಡಿಕಲ್ ವೇಸ್ಟೇಜ್ ತುಂಬಿ ತುಳುಕುತ್ತಿದ್ದು, ಕಸದ ರಾಶಿ ಹಿಂಭಾಗವೇ 'ಇಂದಿರಾ ಕ್ಯಾಂಟೀನ್' ಇದೆ. ಪ್ರತಿನಿತ್ಯ ನೂರಾರು ಮಂದಿ ಇಲ್ಲಿ ತಿಂಡಿ-ಊಟ ಮಾಡುವವರಿಗೂ ಸಹ ಗಬ್ಬು ನಾರುತ್ತಿದೆ. ಪಕ್ಕದಲ್ಲೇ ಆಸ್ಪತ್ರೆಯ ಕ್ಯಾಂಟೀನ್ ಸಹ ಇದ್ದು ಇಲ್ಲಿಂದಲೇ ಆಸ್ಪತ್ರೆಯ ಒಳರೋಗಿಗಳಿಗೆ ಊಟ ಸರಬರಾಜು ಆಗುತ್ತದೆ.
ಸಣ್ಣಪುಟ್ಟ ಕ್ಲಿನಿಕ್ ನಿಂದ ಹಿಡಿದು ದೊಡ್ಡದೊಡ್ಡ ನರ್ಸಿಂಗ್ ಹೋಂಗಳಿಗೂ ಸಹ ಸರ್ಕಾರದ ನಿಯಮಗಳು ಅನ್ವಯಿಸುತ್ತದೆ. ಆದರೆ ನಗರದ ಸರ್ಕಾರಿ ಆಸ್ಪತ್ರೆಗೆ ಈ ಕಾಯಿದೆ ಅನ್ವಯಿಸುವುದಿಲ್ಲವೇ! ಅದರಲ್ಲೂ ಮೆಡಿಕಲ್ ವೇಸ್ಟನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಸಂಬಂಧಿಸಿದ ಬಣ್ಣದ ಪ್ಲಾಸ್ಟಿಕ್ ಕವರ್ ಗಳಲ್ಲಿ ಹಾಕಿ ವಿಲೇವಾರಿ ಮಾಡಬೇಕು. ನಾಲ್ಕು ರೀತಿಯ ಮೆಡಿಕಲ್ ವೇಸ್ಟೇಜುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಬೆಂಗಳೂರಿನಲ್ಲಿ ಮರಿಡಿ ಬಯೋ ಇಂಡಸ್ಟ್ರೀಸ್ ಪ್ರೈ ಲಿ ಎಂಬ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ: ಅಶ್ವತ್ಥ ನಾರಾಯಣ ಘೋಷಣೆ
ಆಸ್ಪತ್ರೆಯ ಸಿಬ್ಬಂದಿಗಳ ವರ್ತನೆಗೆ ಕಿಡಿಕಾರಿದ ಸಾಮಾಜಿಕ ಹೋರಾಟಗಾರ
ನಗರದ ಎಲ್ಲಾ ಆಸ್ಪತ್ರೆಗಳಲ್ಲೂ ಮರಿಡಿ ಬಯೋ ಇಂಡಸ್ಟ್ರೀಸ್ ರವರು ನಾಲ್ಕು ಭಾಗಗಳಾಗಿ ವಿಂಗಡಿಸಿದ ಮೆಡಿಕಲ್ ವೇಸ್ಟನ್ನು ಕೊಂಡೊಯ್ಯುತ್ತಾರೆ. ಖಾಸಗೀ ಆಸ್ಪತ್ರೆಗಳು ಶುಚಿಯಾಗಿವೆ. ಲಕ್ಷಲಕ್ಷ ಸಂಬಳ ಎಣಿಸುವ ಸರ್ಕಾರಿ ಆಸ್ಪತ್ರೆಯ ವೈದ್ಯರು-ಸಿಬ್ಬಂದಿಗಳು ಮಾತ್ರ ಏಕೆ ವೇಸ್ಟೇಜನ್ನು ವಿಲೇವಾರಿ ಮಾಡುತ್ತಿಲ್ಲಾ ! ಏಕೆ ರೋಗಿಗಳು ಮತ್ತು ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸುಹೇಲ್ , ಆಸ್ಪತ್ರೆಯ ಸಿಬ್ಬಂದಿಗಳ ವರ್ತನೆಗೆ ಕಿಡಿಕಾರಿದರು. ಮೆಡಿಕಲ್ ವೇಸ್ಟೇಜ್ ಮರಿಡಿ ಸಂಸ್ಥೆಯವರು ಪ್ರತಿನಿತ್ಯ ತೆಗೆದುಕೊಂಡು ಹೋಗುತ್ತಾರೆ.
ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಮುಂದಾಗಬೇಕು
ಜನರಲ್ ವೇಸ್ಟೇಜ್ ಅನ್ನು ಎರಡು ತಿಂಗಳಿಗೊಮ್ಮೆ ತೆಗೆದುಕೊಂಡು ಹೋಗುತ್ತಾರೆ. ಯೂನಿಕ್ ಎಂಬ ಸಂಸ್ಥೆಗೆ ಟೆಂಡರ್ ನೀಡಲಾಗಿತ್ತು ಅವರ ಟೆಂಡರ್ ಅವಧಿ ಮುಗಿದಿದ್ದು ತಾತ್ಕಾಲಿಕವಾಗಿ ಮುಂದುವರೆದಿದ್ದಾರೆ ಅದು ಜನರಲ್ ವೇಸ್ಟ್ ನೊಂದಿಗೆ ಮೆಡಿಕಲ್ ವೇಸ್ಟ್ ಸೇರಿದೆ ಎಂದು ಒಪ್ಪಿಕೊಂಡ ವೈದ್ಯಾಧಿಕಾರಿ ವಿಜಯನರಸಿಂಹ, ಇನ್ನೂ ಎರಡು ದಿನಗಳಲ್ಲಿ ವೇಸ್ಟೇಜ್ ತೆಗೆಸುವುದಾಗಿ ಭರವಸೆ ನೀಡಿದರು.
ಚನ್ನಪಟ್ಟಣ ಬೊಂಬೆಗಳ ನಾಡು ಹೆಸರು ಪಡೆದಿದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಎಂಬುವುದೇ ಮರೆತ್ ಹೋಗಿದೆ ಎಂದರೆ ತಪ್ಪಾಗಲಾಗದು. ಇನ್ನಾದರೂ ಅಧಿಕಾರಿಗಳು, ಪ್ರತಿನಿಧಿಗಳು, ಶಾಸಕರು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸುವಲ್ಲಿ ಮುಂದಾಗಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.