ರಾಮನಗರ; ಹಸಿವಿನಿಂದ ಕಂಗಾಲಾದ ಮೂಕ ಪ್ರಾಣಿಗಳಿಗೂ ಆಹಾರ
ರಾಮನಗರ, ಏಪ್ರಿಲ್ 02: ಕೊರೊನಾ ಲಾಕ್ ಡೌನ್ ನಿಂದಾಗಿ ಮನುಷ್ಯರಷ್ಟೆ ಅಲ್ಲದೇ ಮೂಕ ಪ್ರಾಣಿಗಳು ಆಹಾರ ಸಿಗದೆ ಬಸವಳಿದಿವೆ. ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೇ, ಆಹಾರ ಸಿಗದೇ ಸಂಕಷ್ಟದಲ್ಲಿದ್ದ ಮೂಕ ಪ್ರಾಣಿಗಳಿಗೆ ಇಂದು ಜಿಲ್ಲಾ ಬಿಜೆಪಿ ಯುವ ಘಟಕ ಆಹಾರ ನೀಡಿದೆ.
ಜಿಲ್ಲೆಯ ಪ್ರವಾಸಿ ತಾಣಗಳಾದ ಮುತ್ತತ್ತಿ, ಕಬ್ಬಾಳು, ಸಂಗಮ ಹಾಗೂ ಸಾವನದುರ್ಗ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ನೀಡುವ ಆಹಾರವನ್ನೇ ಅವಲಂಬಿಸಿರುವ ಅಸಂಖ್ಯಾತ ನಾಯಿ ಮತ್ತು ಕೋತಿಗಳಿಗೆ ಪ್ರತಿನಿತ್ಯ ಬಾಳೆಹಣ್ಣು, ಕಡಲೆಕಾಯಿ, ಬಿಸ್ಕೆಟ್, ಬ್ರೆಡ್, ತರಕಾರಿಗಳು ಹಾಗೂ ಅನ್ನ ನೀಡಿ ಮೂಕಪ್ರಾಣಿಗಳ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಹಾಗೂ ನಿರಾಶ್ರಿತರಿಗೆ ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಊಟದ ವ್ಯವಸ್ಥೆ ಮಾಡುವ ಮೂಲಕ ಆಸರೆಯಾಗಿವೆ. ಆದರೆ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಮೂಕಪ್ರಾಣಿಗಳು ಆಹಾರವಿಲ್ಲದೇ ನರಳುತ್ತಿರುವುದನ್ನು ಮನಗಂಡು ಜಿಲ್ಲಾ ಬಿಜೆಪಿ ಯೂತ್ ಅಧ್ಯಕ್ಷ ವರದರಾಜ್ ಹಾಗೂ ಅವರ ಸ್ನೇಹಿತರು ಜಿಲ್ಲಾದ್ಯಂತ ಪ್ರವಾಸಿ ತಾಣಗಳಲ್ಲಿ ನೆಲೆಸಿರುವ ಮಂಗಗಳಿಗೆ ಹಾಗೂ ಬೀದಿನಾಯಿಗಳಿಗೆ ಹಸಿವನ್ನು ನೀಗಿಸುತ್ತಿದ್ದಾರೆ. ಇವರ ಕೆಲಸಕ್ಕೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications