"ಸಣ್ಣತನದ ರಾಜಕೀಯ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು''
ರಾಮನಗರ, ಮಾರ್ಚ್ 4: ರಾಸಲೀಲೆ ಸಿಡಿ ಬಲೆಗೆ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಪರವಾಗಿ ಕನಕಪುರ ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಹಾಗೂ ಕಳೆದ ವಿಧಾನಸಭಾ ಪರಾಜಿತ ಅಭ್ಯರ್ಥಿ ನಂದಿನಿ ಗೌಡ ಬ್ಯಾಟ್ ಬೀಸಿದ್ದಾರೆ.
ಕನಕಪುರ ಪಟ್ಟಣದ ಬೃಂದಾವನ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಂದಿನಿಗೌಡ, ಈ ರೀತಿಯ ಸಣ್ಣತನದ ರಾಜಕೀಯ ಮಾಡುವುದರಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ನಿಸ್ಸೀಮರು ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಸಿಡಿ ಪುರಾಣ ಹಿಂದೆ ಕಾಂಗ್ರೆಸ್ ಮುಖಂಡರು ಇದ್ದಾರೆ ಎಂದು ಆರೋಪಿಸಿದರು.
ರಮೇಶ್ ಜಾರಕಿಹೊಳಿ ಅವರ ರಾಜಕೀಯ ವಿರೋಧಿಗಳು ಹಾಗೂ ಉಪ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ವಿರೋಧ ಪಕ್ಷದವರು ಈ ಪಿತೂರಿ ನಡೆಸಿದ್ದಾರೆ. ಪ್ರಕರಣದಲ್ಲಿ ಮಹಿಳೆಗೆ ಅನ್ಯಾಯವಾಗಿದ್ದರೆ, ಸಂತ್ರಸ್ಥೆ ಎನಿಸಿಕೊಂಡವರು ತಮ್ಮ ಸಮಸ್ಯೆ ಬಗ್ಗೆ ಎಲ್ಲೂ ಹೇಳಿಲ್ಲ, ಸ್ವತಃ ದೂರು ನೀಡಿಲ್ಲ. ದೂರು ನೀಡಿರುವ ದಿನೇಶ್ ಕಲ್ಲಹಳ್ಳಿಗೂ, ಈ ಪ್ರಕರಣಕ್ಕೂ ಯಾವ ಸಂಬಂಧ ಎಂದು ನಂದಿನಿಗೌಡ ಪ್ರಶ್ನಿಸಿದರು.

ಸಂತ್ರಸ್ಥೆ ಪರವಾಗಿ ಹೋರಾಟ ಮಾಡುತ್ತಿದ್ದೇನೆ ಎನ್ನುವ ದಿನೇಶ್ ಕಲ್ಲಹಳ್ಳಿ, ಯಾರಿಗೆ ಅನ್ಯಾಯವಾಗಿದೆ, ಕಷ್ಟದಲ್ಲಿದ್ದಾರೆ ಅಂತ ಎಷ್ಟು ಮಂದಿಗೆ ನ್ಯಾಯ ಕೊಡಿಸಿದ್ದಾರೆ. ಇವರ ಹಿನ್ನೆಲೆ ಏನು ಎಂಬುದು ಕನಕಪುರ ತಾಲ್ಲೂಕಿಗೆ ಗೊತ್ತಿದೆ. ಕನಕಪುರದಲ್ಲಿ ಮಹಿಳೆಯರ ಮೇಲೆ
ನಡೆಯುವ ದೌರ್ಜನ್ಯ, ಅಶಕ್ತರ ಮೇಲೆ ಆಗುತ್ತಿರುವ ದಬ್ಬಾಳಿಕೆ ಬಗ್ಗೆ ಏಕೆ ದಿನೇಶ್ ಚಕಾರವೆತ್ತುತ್ತಿಲ್ಲ ಎಂದು ದೂರುದಾರ ದಿನೇಶ್ ಕಲ್ಲಹಳ್ಳಿ ವಿರುದ್ಧ ನಂದಿನಿಗೌಡ ಕಿಡಿಕಾರಿದರು.

ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರಿಗೆ ಸಿಡಿ ಕೊಟ್ಟವರು ಯಾರು, ಅವರಿಗೆ ಸಿಡಿ ಎಲ್ಲಿ ಸಿಕ್ಕಿತ್ತು. ಇಡೀ ಸಿಡಿ ಜಾಲದ ಹಿಂದೆ ಯಾರಿದ್ದಾರೆ. ಇದರಲ್ಲಿ ಆ ಹುಡುಗಿಯ ಪಾತ್ರ ಎನು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ನಂದಿನಿಗೌಡ ಒತ್ತಾಯಿಸಿದರು.
ಇನ್ನೂ ಇದೇ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಪ್ರಭಾವಿ ಮುಖಂಡ ವಿಧಾನ ಪರಿಷತ್ ಸದಸ್ಯ ಸಚಿವ ಸಿಪಿ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಸಿಗುವಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ನಂದಿನಿಗೌಡ ಸ್ಮರಿಸಿಕೊಂಡರು.











Click it and Unblock the Notifications