ಮತ್ತೆ 20 ಮಂದಿ ಕಾರ್ಮಿಕರನ್ನು ಅಮಾನತು ಮಾಡಿದ ಟೊಯೊಟಾ
ರಾಮನಗರ, ಡಿಸೆಂಬರ್ 06: ಏಷ್ಯಾದ ಅತಿ ದೊಡ್ಡ ಕಾರು ತಯಾರಕ ಕಂಪನಿ ಟೊಯೊಟಾ ಕಿರ್ಲೋಸ್ಕರ್ ನ ಬಿಡದಿ ಘಟಕದ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಮತ್ತೆ 20 ಮಂದಿ ಕಾರ್ಮಿಕರನ್ನು ಅಮಾನತು ಮಾಡಿ ಟೊಯೊಟಾ ಕಂಪನಿಯ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ.
ಕಳೆದ 25 ದಿನಗಳಿಂದ ಕಾರ್ಖಾನೆಯ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಕಾರ್ಮಿಕರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಹಿನ್ನಲೆಯಲ್ಲಿ ಶಿಸ್ತು ಮತ್ತು ಸೇವಾ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಲ್ಲಿಯವರೆಗೆ 60 ಮಂದಿ ಕಾರ್ಮಿಕರನ್ನು ಸೇವೆಯಿಂದ ಅಮಾನತಿನಲ್ಲಿರಿಸಿದೆ.
ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದು, ದುರ್ನಡತೆ ಮತ್ತು ಅಶಿಸ್ತು ನಡತೆಯ ಬಗ್ಗೆ ಪ್ರಾಥಮಿಕ ಪುರಾವೆಗಳು ಲಭಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕಂಪನಿಯ ಪ್ರಕಟಣೆ ತಿಳಿಸಿದೆ. ಕಳೆದ ತಿಂಗಳು ನ.6 ರಂದು ಒಬ್ಬರು ಮತ್ತು ನ.12 ರಂದು 39 ಮಂದಿ ಕಾರ್ಮಿಕರನ್ನು ವಿಚಾರಣೆ ಕಾದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಕಾರ್ಮಿಕರು ಮುಷ್ಕರ ಸಮಯದಲ್ಲಿ ಕೆಲಸಕ್ಕೆ ಹಾಜರಾಗಲು ಬಂದ ಇತರೆ ತಂಡದ ಸದಸ್ಯರನ್ನು ತಡೆಯುವುದು, ಕಾರ್ಮಿಕರ ಮನೆಗೆ ತೆರಳಿ ಬೆದರಿಕೆ ಹಾಕುವುದು, ಕಂಪನಿಯ ಪ್ರವೇಶ ದ್ವಾರದಲ್ಲಿ ಕಾರ್ಮಿಕರನ್ನು ತಡೆದು ಬೆದರಿಕೆ ಹಾಕುವ ಮೂಲಕ ಭಯದ ವಾತವಾರಣ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ ಕಂಪನಿ ಮತ್ತು ಕಂಪನಿಯ ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸುವುದು ಮತ್ತು ಸುದ್ದಿ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಕಂಪನಿಯ ಖ್ಯಾತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕಾರ್ಮಿಕರ ವಿರುದ್ಧ ಕಂಪನಿ ಆರೋಪ ಮಾಡಿದೆ.
ವಿಚಾರಣೆ ಕಾದಿರಿಸಿ ಸೇವೆಯಿಂದ ಅಮಾನತುಗೊಳಿಸಿರುವುದು ಶಿಕ್ಷೆಯಲ್ಲ. ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂಬರ್ಥವೂ ಅಲ್ಲ, ಮುಕ್ತ ವಿಚಾರಣೆ ನಡೆಯಲಿ ಎಂಬ ಕಾರಣಕ್ಕೆ ಅಮಾನತಿನಲ್ಲಿಡಲಾಗಿದೆ. ಕಾನೂನು ಪ್ರಕಾರ ಈ ಕಾರ್ಮಿಕರಿಗೆ ಸಲ್ಲಬೇಕಾದ ಸವಲತ್ತು ಸಲ್ಲುತ್ತದೆ ಎಂದು ಸಂಸ್ಥೆಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications