15ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಾರ್ಖಾನೆ ನೌಕರರ ಮುಷ್ಕರ
ರಾಮನಗರ, ನವೆಂಬರ್ 23: ಟೊಯೋಟಾ ಕಾರ್ಖಾನೆಯ ನೌಕರರು ನಡೆಸುತ್ತಿರುವ ಮುಷ್ಕರವು 15ನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಮಿಕರ ಬೆಂಬಲವಾಗಿ ಸೋಮವಾರದಂದು "ಕಸ್ತೂರಿ ಕನ್ನಡದ ಜನಪರ ವೇದಿಕೆ"ಯ ಅಧ್ಯಕ್ಷ ರಮೇಶ್ ಗೌಡ ಅವರು ಪಾದಯಾತ್ರೆಯ ಮೂಲಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.
ಕಾರ್ಮಿಕರ ಪ್ರತಿಭಟನೆ ಬೆಂಬಲಿಸಿ ಮಾತನಾಡಿದ ಅವರು, 3600 ಕಾರ್ಮಿಕರ ಬೆಂಬಲವಾಗಿ ನಾವು ಇಂದು ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಭಾಗವಹಿಸಿದ್ದೇವೆ. ನಮ್ಮ ಸಂಘದ ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿಯೂ (ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ) ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆಯನ್ನು ನಾಳೆಯಿಂದ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಟೊಯೊಟೊ ಆಡಳಿತ ಮಂಡಳಿ ಹಠಮಾರಿ ಧೋರಣೆಗೆ ಬಿಎಸ್ಪಿ ಖಂಡನೆ
ಕಾರ್ಮಿಕರ ಸಮಸ್ಯೆಯನ್ನು ಟೊಯೋಟಾ ಆಡಳಿತ ಮಂಡಳಿ ಬಗೆಹರಿಸದಿದ್ದರೆ, ಡಿಸೆಂಬರ್ 6 ರಂದು ಕಾರ್ಮಿಕರ ಕುಟುಂಬಸ್ಥರನ್ನು ಕರೆತಂದು ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ರಮೇಶ್ ಗೌಡ ತಿಳಿಸಿದರು.
ನಾಳೆ ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡರನ್ನು ಭೇಟಿ ಮಾಡಿ ಟೊಯೋಟಾ ಆಡಳಿತ ಮಂಡಳಿ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಮಧ್ಯೆ ಪ್ರವೇಶಿಸಬೇಕೆಂದು ಅವರನ್ನು ಕೇಳಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಹೇಳಿದರು.
ಟೊಯೋಟೊ ಆಡಳಿತ ಮಂಡಳಿಯು, ಕೆಲವರನ್ನು ಕೆಲಸದಿಂದ ವಜಾಗೊಳಿಸುತ್ತೇವೆ, ಕೋವಿಡ್-19 ನಿಂದ ಯಾವುದೇ ರೀತಿಯ ತೊಂದರೆಗೆ ಒಳಗಾದರೆ ನಾವು ಹೊಣೆಗಾರರಲ್ಲ, ಮೊಬೈಲ್ ಒಳಗಡೆ ತಂದರೆ ನಾವು ವಶಪಡಿಸಿಕೊಳ್ಳುತ್ತೇವೆ ಎಂದು ಭಯದ ವಾತಾವರಣ ಸೃಷ್ಠಿಸಿದ್ದಾರೆ.
ಇದರ ಬಗ್ಗೆ ಯಾವುದೇ ರೀತಿಯ ಸ್ಪಷ್ಟೀಕರಣ ನೀಡುತ್ತಿಲ್ಲ. ಸರ್ಕಾರ ಆದೇಶದಂತೆ ನಮ್ಮನ್ನು ಕೆಲಸ ಮಾಡಲು ಒಳಗಡೆ ಬಿಡುತ್ತಿಲ್ಲ. ಹಾಗಾಗಿ ನಾವು ಈ ಪ್ರತಿಭಟನೆಯನ್ನು ಮುಂದುವರೆಸುತ್ತಿದ್ದೇವೆ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಅವರು ತಿಳಿಸಿದರು.