ಬಿಡದಿಯ ನಲ್ಲಿಗುಡ್ಡೆ ಕೆರೆಯಲ್ಲಿ ಮರುಕಳಿಸಿದ ಜಲವೈಭವ!
ರಾಮನಗರ, ಆಗಸ್ಟ್ 01; ಈ ಬಾರಿ ರಾಜ್ಯದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆಕಟ್ಟೆಗಳು ತುಂಬಿವೆ. ಈ ನಡುವೆ ರಾಮನಗರದ ಬಿಡದಿ ಪಟ್ಟಣದ ಹೊರವಲಯದಲ್ಲಿರುವ ನಲ್ಲಿಗುಡ್ಡೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದು ಈ ಭಾಗದ ರೈತರು ಮತ್ತು ಜನರಲ್ಲಿ ಸಂತಸ ಮೂಡಿಸಿದೆ.
ಸಾಮಾನ್ಯವಾಗಿ ಈ ಕೆರೆ ಇಷ್ಟು ಬೇಗ ಭರ್ತಿಯಾಗುವುದು ಅಪರೂಪವೇ. ಆದರೆ ಈ ಬಾರಿ ಜುಲೈ ಅಂತ್ಯಕ್ಕೆ ಭರ್ತಿಯಾಗುವುದರೊಂದಿಗೆ ಅಚ್ಚರಿಯನ್ನುಂಟು ಮಾಡಿದೆ. ಜತೆಗೆ ಕೆರೆಭರ್ತಿಯಾಗಿ ಕಟ್ಟೆ ಮೇಲೆ ಧುಮ್ಮಿಕ್ಕುವ ಜಲಧಾರೆಯ ದೃಶ್ಯ ಕಣ್ಮನ ಸೆಳೆಯುತ್ತಿದ್ದು, ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿದೆ.
Infographics: ಕರ್ನಾಟಕದಲ್ಲಿ ಚುರಕುಗೊಂಡ ಮುಂಗಾರು ಮಾರುತಗಳು: ಭಾರಿ ಮಳೆ ಸಂಭವ
ನಲ್ಲಿಗುಡ್ಡೆಕೆರೆ ಭರ್ತಿಯಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಪ್ರವಾಸಿಗರು ಇತ್ತ ಮುಖ ಮಾಡಿದ್ದಾರೆ. ಒಂದಷ್ಟು ಸಮಯವನ್ನು ಕೆರೆಯದಂಡೆಯಲ್ಲಿ ಕುಳಿತು ಧುಮ್ಮಿಕ್ಕುವ ಜಲಧಾರೆಯ ಚೆಲುವನ್ನು ಆಸ್ವಾದಿಸುತ್ತಾ ಕಳೆಯುತ್ತಿದ್ದು ಕೆರೆ ಪಿಕ್ನಿಕ್ ಸ್ಪಾಟ್ ಆಗಿದೆ.
ಬಿಡದಿ ಕೆರೆ ಸೇರಿದ ಕಾರ್ಖಾನೆ ತ್ಯಾಜ್ಯ; 2 ಟನ್ ಮೀನುಗಳು ಸಾವು
ಈ ಕೆರೆ ಎಲ್ಲಾ ಕೆರೆಗಳಂತಿಲ್ಲ. ಸ್ವಚ್ಛತೆ ಕಾಪಾಡಿಕೊಳ್ಳುವುದರೊಂದಿಗೆ ಈ ವ್ಯಾಪ್ತಿಯ ಜನರ ಪಾಲಿಗೆ ಜೀವನಾಡಿಯಾಗಿದೆ. ಕೃಷಿ ಚಟುವಟಿಕೆ ಸೇರಿದಂತೆ ಬಿಡದಿ ಪಟ್ಟಣ ಹಾಗೂ ಈ ಭಾಗದ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆಯಾಗಿದೆ. ಇದು ಭರ್ತಿಯಾದರೆ ಸುತ್ತಮುತ್ತಲಿನ ಜಮೀನುಗಳಲ್ಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಹೀಗಾಗಿ ಇದು ಕೊಳವೆ ಬಾವಿಗಳಿಗೆ ಜಲ ಮೂಲ ಎಂದರೂ ತಪ್ಪಾಗಲಾರದು.
ಮೈಸೂರು: ಕೆರೆ ನೀರು ಸಂರಕ್ಷಣೆಗೆ ಮೊಸಂಬಾಯನಹಳ್ಳಿ ಜನ ಮಾಡಿದ್ದೇನು?
ನಲ್ಲಿಗುಡ್ಡೆ ಕೆರೆ ಭರ್ತಿಯಾಗುವುದು ಅಪರೂಪ
ಈ ಕೆರೆಯ ಬಗ್ಗೆ ಹೇಳುವುದಾದರೆ ಇದು ಪ್ರತಿ ವರ್ಷವೂ ಭರ್ತಿಯಾದ ಉದಾಹರಣೆ ಅಪರೂಪವೇ. ಒಂದೂವರೆ ದಶಕಗಳಿಗೂ ಹೆಚ್ಚು ಕಾಲ ಈ ಕೆರೆ ಭರ್ತಿಯಾಗಿರಲಿಲ್ಲ. ಆದರೆ ಕಳೆದ ವರ್ಷದಿಂದೀಚಿಗೆ ಭರ್ತಿಯಾಗುತ್ತಿರುವುದು ಈ ವ್ಯಾಪ್ತಿಯ ಜನರ ಸಂತಸಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ನಲ್ಲಿಗುಡ್ಡೆ ಕೆರೆ 2004ರಲ್ಲಿ ಭರ್ತಿಯಾಗಿ ಕೋಡಿ ಬಿದ್ದಿತ್ತು.
ಆ ನಂತರ ಮಳೆ ಅಭಾವ ಹಾಗೂ ಸತತ ಬರಗಾಲದಿಂದಾಗಿ ಕೆರೆಗೆ ನೀರು ಹರಿದು ಬರಲೇ ಇಲ್ಲ. ಪ್ರತಿ ವರ್ಷವೂ ಈ ಭಾಗದ ಜನರು ಈ ಬಾರಿಯಾದರೂ ಭರ್ತಿಯಾಗುತ್ತಾ? ಎಂದು ಕಾಯುತ್ತಿದ್ದರು. ಆದರೆ ಅದು ಭರ್ತಿಯಾಗಲು ಸುಮಾರು ಒಂದೂವರೆ ದಶಕಗಳ ಕಾಲವನ್ನು ತೆಗೆದುಕೊಂಡಿತ್ತು. 2017ರಲ್ಲಿ ಹಿಂಗಾರು ಮಳೆ ಅಬ್ಬರಿಸಿತ್ತು. ಪರಿಣಾಮ ಮಲೆನಾಡು ಸೇರಿದಂತೆ ಎಲ್ಲೆಡೆ ಭಾರೀ ಪ್ರಮಾಣದ ಮಳೆ ಸುರಿದಿತ್ತು. ಈ ವೇಳೆ ರಾಮನಗರ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ನಲ್ಲಿಗುಡ್ಡೆ ಕೆರೆ ಭರ್ತಿಯಾಗಿತ್ತು.
ವರ್ಷ ತುಂಬುವ ಮೊದಲೇ ಭರ್ತಿಯಾದ ಕೆರೆ
ಬಳಿಕದ ವರ್ಷಗಳಲ್ಲಿ ಮಳೆಯಾಗಿತ್ತಾದರೂ ಕೆರೆ ಭರ್ತಿಯಾಗುವ ಮಟ್ಟಿಗೆ ಮಳೆ ಸುರಿದಿರಲಿಲ್ಲ. ಹಾಗಾಗಿ ಕೆರೆ ಭರ್ತಿಯಾಗಿ ಕೋಡಿ ಬೀಳಲಿಲ್ಲ. ಕಳೆದ ವರ್ಷ ಅಂದರೆ 2021ರಲ್ಲಿ ಸುರಿದ ಹಿಂಗಾರು ಮಳೆಗೆ ಅಕ್ಟೋಬರ್ (21) ನಲ್ಲಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿತು. ಒಂದೂವರೆ ದಶಕಗಳ ಕಾಲ ಭರ್ತಿಯಾಗದ ಕೆರೆ ಕೇವಲ ನಾಲ್ಕು ವರ್ಷಕ್ಕೆ ಮತ್ತೊಮ್ಮೆ ಭರ್ತಿಯಾಗಿದ್ದು, ಸಂತಸ ತಂದಿತ್ತು.
ಇದೀಗ ವರ್ಷ ತುಂಬುವ ಮುನ್ನವೇ ಮುಂಗಾರು ಮಳೆಗೆ ಮತ್ತೊಮ್ಮೆ ಕೆರೆ ಭರ್ತಿಯಾಗಿರುವುದು ರೈತರಲ್ಲಿ ಮತ್ತಷ್ಟು ಖುಷಿ ತಂದಿದೆ. ಇಷ್ಟಕ್ಕೂ ಈ ಬಾರಿ ಬಹುತೇಕ ಕೆರೆಗಳು ಭರ್ತಿಯಾಗಿವೆ. ಅದರಂತೆ ನಲ್ಲಿಗುಡ್ಡೆ ಕೆರೆಯೂ ಜುಲೈ (31)ನಲ್ಲಿ ಭರ್ತಿಯಾಗಿದೆ. ಸದ್ಯ ಬಿಡದಿ ಸುತ್ತಮುತ್ತ ಹಾಗೂ ತಾವರೆಕೆರೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತೊರೆ-ಹಳ್ಳಗಳ ಮೂಲಕ ನಲ್ಲಿಗುಡ್ಡೆಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಎಲ್ಲ ಕೆರೆಗಳಂತಲ್ಲ ನೆಲ್ಲಿಗುಡ್ಡೆ ಕೆರೆ
ಈ ಕೆರೆ ಎಲ್ಲಾ ಕೆರೆಗಳಂತಿಲ್ಲ. ಸ್ವಚ್ಛತೆ ಕಾಪಾಡಿಕೊಳ್ಳುವುದರೊಂದಿಗೆ ಈ ವ್ಯಾಪ್ತಿಯ ಜನರ ಪಾಲಿಗೆ ಜೀವನಾಡಿಯಾಗಿದೆ. ಕೃಷಿ ಚಟುವಟಿಕೆ ಸೇರಿದಂತೆ ಬಿಡದಿ ಪಟ್ಟಣ ಹಾಗೂ ಈ ಭಾಗದ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆಯಾಗಿದೆ.
ನಲ್ಲಿಗುಡ್ಡೆ ಕೆರೆಯು ಸುಮಾರು 380 ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು, ಭರ್ತಿಯಾದರೆ ಇದರಲ್ಲಿ ಸುಮಾರು 216.45 ದಶಲಕ್ಷ ಘನ ಅಡಿಗಳಷ್ಟು (ಎಂಸಿಎಫ್ಸಿ) ಪ್ರಮಾಣದ ನೀರು ಸಂಗ್ರಹವಾಗುತ್ತದೆ. ಸುತ್ತಲಿನ 67 ಕಿ. ಮೀ. ವ್ಯಾಪ್ತಿಯಲ್ಲಿನ ಮಳೆಯಾದರೆ ಹಳ್ಳ-ಕೊಳ್ಳಗಳ ಮೂಲಕ ನೀರು ಈ ಕೆರೆಗೆ ಹರಿದು ಬರುತ್ತದೆ. ಈ ಕೆರೆಯ ಏರಿ 25 ಅಡಿಯಷ್ಟು ಎತ್ತರವಿದ್ದು, ಕೆರೆ ತುಂಬಿದಾಗ ಏರಿ ಮೇಲೆ ನೀರು ಧುಮುಕಿ ಹರಿದು ಹೋಗುತ್ತದೆ. ಈ ವೇಳೆ ಕಾಣಸಿಗುವ ಸುಂದರ ದೃಶ್ಯವನ್ನು ವರ್ಣಿಸುವುದು ಕಷ್ಟವಾಗುತ್ತದೆ.
ವೃಷಭಾವತಿ ನದಿ ಸೇರುವ ಕೆರೆ ನೀರು
ನಲ್ಲಿಗುಡ್ಡೆ ಕೆರೆಯು ಭರ್ತಿಯಾಗಿರುವುದರಿಂದ ಬಿಡದಿ, ಕೆಂಚನಕುಪ್ಪೆ, ದಾಸಪ್ಪನದೊಡ್ಡಿ, ತಮ್ಮಣ್ಣನದೊಡ್ಡಿ, ಶೆಟ್ಟಿಗೌಡನದೊಡ್ಡಿ, ಗಾಣಕಲ್, ಅವರಗೆರೆ, ಕಾಕರಾಮನಹಳ್ಳಿ, ವಾಜರಹಳ್ಳಿ, ಬನ್ನಿಕುಪ್ಪೆ ಸೇರಿದಂತೆ ಹಲವು ಹಳ್ಳಿಗಳಿಗೆ ಅನುಕೂಲವಾಗಿದೆ.
ಕೆರೆಯಿಂದ ಹರಿದು ಹೋಗುವ ನೀರು ಬಾನಂದೂರು, ಇಟ್ಟಮಡು ಗ್ರಾಮಗಳ ಮೂಲಕ ಸಾಗಿ ವೃಷಭಾವತಿ ನದಿಯನ್ನು ಸೇರಲಿದೆ. ನಂತರ ಕನಕಪುರದ ಸಮೀಪ ಅರ್ಕಾವತಿ ನದಿಯಲ್ಲಿ ವಿಲೀನವಾಗಿ ಮೇಕೆದಾಟು ಬಳಿ ಕಾವೇರಿ ನದಿಯಲ್ಲಿ ಸಂಗಮವಾಗಲಿದೆ.
ಕೆರೆ ಹೂಳು ತೆಗೆಯಲಾಗಿತ್ತು
ಈ ಕೆರೆಯನ್ನು ಕೆಲವು ವರ್ಷಗಳ ಹಿಂದೆ ಕೋಕಾ ಕೋಲ ಕಂಪನಿ ವತಿಯಿಂದ 55 ಲಕ್ಷ ರೂ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಸಿ ಹೂಳು ತೆಗೆದು, ಏರಿಯನ್ನು ಎತ್ತರಿಸಲಾಗಿತ್ತು. 2017ರಲ್ಲಿ ಕೆರೆ ತುಂಬಿದರೂ ತೂಬು ದುಸ್ಥಿತಿಯಲ್ಲಿದ್ದ ಕಾರಣ ನೀರು ವ್ಯರ್ಥವಾಗಿ ನಾಲೆಯಲ್ಲಿ ಹರಿದು ಪೋಲಾಗಿತ್ತು. ಈಗಲೂ ಅದು ಮುಂದುವರೆದಿದ್ದು ನೀರು ಪೋಲಾಗುವುದನ್ನು ತಡೆಯುಂತೆ ಮತ್ತು ಕೆರೆಯ ಸಂರಕ್ಷಣೆಯತ್ತ ಗಮನಹರಿಸುವಂತೆ ಪರಿಸರ ಪ್ರೇಮಿಗಳು ಮನವಿಯಾಗಿದೆ.