ಎಚ್.ಸಿ.ಬಾಲಕೃಷ್ಣ ಬಳಿಯಿದೆಯಂತೆ ನಿಖಿಲ್ ಗೌಡರ ಕ್ಯಾಸೆಟ್!
ರಾಮನಗರ, ಏಪ್ರಿಲ್ 28: ದೇವೇಗೌಡರ ಮೊಮ್ಮಗ ನಿಖಿಲ್ ಗೌಡ ನಮ್ಮ ವಿರುದ್ಧ ಮಾತನಾಡಿದರೆ ಅವರ ಕ್ಯಾಸೆಟ್ ಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಹೇಳುವ ಮೂಲಕ ಮಾಗಡಿಯ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಸೃಷ್ಠಿಸಿದ್ದಾರೆ.
ಒಂದು ಕಾಲದಲ್ಲಿ ದೇವೇಗೌಡರ ಪಾಳಯದಲ್ಲಿ ಗುರುತಿಸಿಕೊಂಡು ಮಾಗಡಿಯಿಂದ ಜೆಡಿಎಸ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಎಚ್.ಸಿ.ಬಾಲಕೃಷ್ಣ ಅವರು ಇದೀಗ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೆಡ್ಡು ಹೊಡೆದು ನಿಂತಿದ್ದಾರೆ.
ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು ದೇವೇಗೌಡರ ಕುಟುಂಬದ ವಿರುದ್ಧವೇ ಯುದ್ಧ ಸಾರಿರುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ. ತಮ್ಮ ಪಕ್ಷದಲ್ಲಿದ್ದು ತಮ್ಮ ವಿರುದ್ಧವೇ ಬಂಡಾಯ ಎದ್ದಿರುವ ಬಾಲಕೃಷ್ಣರನ್ನು ಈ ಬಾರಿ ಸೋಲಿಸಲೇ ಬೇಕೆಂದು ಪಣ ತೊಟ್ಟಿರುವ ಕುಮಾರಸ್ವಾಮಿ ಅವರು ಈಗಾಗಲೇ ಜೆಡಿಎಸ್ ಅಭ್ಯರ್ಥಿ ಮಂಜು ಪರ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ.

ಇದೆಲ್ಲದರ ನಡುವೆ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಗೌಡ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಬಾಲಕೃಷ್ಣರ ವಿರುದ್ಧವೇ ಹರಿಹಾಯುತ್ತಿದ್ದಾರೆ. ಇದರಿಂದ ಒಂದಷ್ಟು ಹಿನ್ನಡೆಯಾಗುತ್ತಿರುವುದನ್ನು ಅರಿತ ಬಾಲಕೃಷ್ಣರವರು ಚಿತ್ರನಟ ನಿಖಿಲ್ಗೌಡ ಅವರಪ್ಪನ ಪರ ಮತ ಕೇಳಿಕೊಂಡು ಹೋಗಲಿ. ಅದನ್ನು ಬಿಟ್ಟು ನಮ್ಮಗಳ ಬಗ್ಗೆ ಮಾತನಾಡಿದರೆ ಅವರ ಕ್ಯಾಸೆಟ್ಗಳು ನಮ್ಮ ಬಳಿಯಿವೆ, ಅವನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ಸಾರ್ವಜನಿಕವಾಗಿ ರವಾನಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಚಾರಕ್ಕೆ ಹೋದ ಕಡೆಗಳಲ್ಲಿ ನಿಖಿಲ್ಗೌಡ ನಮ್ಮ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ ನಮ್ಮ ಬಳಿಯಿರುವ ಅವರ ಬಹಳಷ್ಟು ಕ್ಯಾಸೆಟ್ಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ, ನಿಖಿಲ್ ಗೌಡ ಪಕ್ಷದ ಪರವಾಗಿ ಮತ ಕೇಳಿಕೊಂಡು ಹೋಗಲಿ ನಮ್ಮ ಅಭ್ಯಂತರವಿಲ್ಲ. ರಾಜಕಾರಣದಲ್ಲಿ ಅವರ ತಂದೆ ಮತ್ತು ನಾವು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತೇವೆ. ಅದು ಬಿಟ್ಟು ನಿನ್ನೆಮೊನ್ನೆ ಹುಟ್ಟಿದವರು ನಮ್ಮ ವಿರುದ್ಧ ಮಾತನಾಡಿದರೆ ಬಿಸಿ ಮುಟ್ಟಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಇದೀಗ ಬಾಲಕೃಷ್ಣ ಅವರು ಹೇಳಿರುವ ಕ್ಯಾಸೆಟ್ ವಿಚಾರ ಕ್ಷೇತ್ರದ ಜನರ ಕುತೂಹಲ ಕೆರಳಿಸಿದ್ದು, ಚರ್ಚೆಗೂ ಗ್ರಾಸವಾಗಿದೆ.












Click it and Unblock the Notifications