ಉಕ್ರೇನ್ ಸೈನಿಕರು ತಲೆಗೆ ಗನ್ ಇಟ್ಟರು; ಆಯೇಷಾ ಕೌಕಬ್
ರಾಮನಗರ, ಮಾರ್ಚ್ 07; ಮೂರು ತಿಂಗಳ ಹಿಂದೆ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಉಕ್ರೇನ್ಗೆ ತೆರಳಿದ್ದ ರಾಮನಗರದ ಐಜೂರು ಬಡವಾಣೆಯ ಆಯೇಷಾ ಕೌಕಬ್ ಭಾನುವಾರ ವಾಪಸ್ ಆಗಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಸಮರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಉಕ್ರೇನ್ನಲ್ಲಿ ತಾವು ಅನುಭವಿಸಿದ ಯಾತನೆ, ನೋವನ್ನು ಪೋಷಕರ ಬಳಿ ಹೇಳಿಕೊಂಡಿರಲಿಲ್ಲ. ಮರುಳಿದ ನಂತರವಷ್ಟೇ ತಮ್ಮ ಭೀಕರ ಅನುಭವಗಳನ್ನು ಹಂಚಿಕೊಂಡರು. ಆಯೇಷಾ ಲಿವಿವ್ ನಗರದಲ್ಲಿರುವ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಉಕ್ರೇನ್ನಿಂದ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅವಕಾಶ; ಎನ್ಎಂಸಿ
"ರಷ್ಯಾ ಯುದ್ದ ಆರಂಭಿಸಿದ ತಕ್ಷಣ ನಾನು ಸೇರಿದಂತೆ ಭಾರತೀಯ ವಿಧ್ಯಾರ್ಥಿಗಳು ರೈಲು ಮೂಲಕ ಕೀವ್ ನಗರಕ್ಕೆ ತಲುಪಿದೆವು. ಅಷ್ಟರಲ್ಲಿ ನಾವು ತೆರಳಬೇಕಿದ್ದ ಕೀವ್ ಏರ್ ಪೋರ್ಟ್ ಮೇಲೆ ದಾಳಿಯಾಗಿತ್ತು. ಕೀವ್ ರೈಲು ನಿಲ್ದಾಣದಿಂದ ಭಾರತೀಯ ರಾಯಭಾರಿ ಅಧಿಕಾರಿಗಳು ಬಂದು ತಮಗೆಲ್ಲ ಅಲ್ಲಿನ ಶಾಲೆಯೊಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು" ಎಂದರು.
ಉಕ್ರೇನ್ನಿಂದ ಬೆಕ್ಕನ್ನೂ ತಂದ ಮೈಸೂರಿನ ವಿದ್ಯಾರ್ಥಿನಿ!
"ಶಾಲೆಯ ಕಟ್ಟಡದ ಕೆಳಗೆ ತೀರಾ ಹಳೆಯದಾದ, ದೂಳಿನಿಂದ ಆವೃತ್ತವಾಗಿದ್ದ ಬಂಕರ್ನಲ್ಲಿ ತಮಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅದು ಹಿಟ್ಲರ್ ಕಾಲದ್ದು ಎಂದು ಅಲ್ಲಿನವರೊಬ್ಬರು ಹೇಳಿದರು. ಕೀವ್ ನಗರದಲ್ಲಿ ಕರ್ಪ್ಯೂ ಇದ್ದ ಕಾರಣ ರಾಯಭಾರಿ ಕಚೇರಿಯವರು 15 ರಿಂದ 20 ಕಿ. ಮೀ. ದೂರದಿಂದ ತಿನ್ನಲು ಆಹಾರ ತರಿಸುತ್ತಿದ್ದರು" ಎಂದು ಆಯೇಷಾ ಕೌಕಬ್ ವಿವರಿಸಿದರು.
ಹುಬ್ಬಳ್ಳಿ; ಉಕ್ರೇನ್ನಿಂದ ವಾಪಸ್ ಆದ ವಿದ್ಯಾರ್ಥಿನಿ ಸ್ವಾಗತಿಸಿದ ಸಿಎಂ
"ಕೀವ್ನಲ್ಲಿದ ಸಮಯದಲ್ಲಿ ಹೊಟ್ಟೆ ತುಂಬ ಊಟ ಸಿಗುತ್ತಿರಲಿಲ್ಲ. ರಾಯಭಾರಿ ಕಚೇರಿ ಸಿಬ್ಬಂದಿ ಕೂಡ ನಮ್ಮ ಜೊತೆಗೆ ಸಿಕ್ಕಷ್ಟು ತಿನ್ನುತ್ತಿದ್ದರು. ನಗರದ ಮೇಲೆ ದಾಳಿ ತೀವ್ರವಾಗಲಿದೆ ಎಂದು ಗೊತ್ತಾದ ಕೂಡಲೇ ನಮ್ಮನ್ನು ರೈಲಿನಲ್ಲಿ ಸ್ಲೋವಾಕಿಯಾ ಗಡಿಗೆ ಕಳುಹಿಸಲು ವ್ಯವಸ್ಥೆ ಮಾಡಿದರು. ಆದರೆ ಉಕ್ರೇನ್ ಸೈನಿಕರು ನಮಗೆ ರೈಲು ಹತ್ತಲು ಅವಕಾಶ ಕೊಡಲಿಲ್ಲ" ಎಂದು ಆಯೇಷಾ ಕೌಕಬ್ ಹೇಳಿದರು.
"ಕ್ಯಾಬ್ಗಳಲ್ಲಿ ಸ್ಲೋವಾಕಿಯಾ ಗಡಿಯತ್ತ ಹೊರಟೆವು, ಸ್ಲೋವಾಕಿಯಾ ಗಡಿ ತಲುಪಲು ಸುಮಾರು 50 ಗಂಟೆಗಳ ಕಾಲ ಪ್ರಯಾಣವಿತ್ತು. ದಾರಿಯಲ್ಲಿ ಅನೇಕಬಾರಿ ಉಕ್ರೇನ್ ಸೈನಿಕರು ತಪಾಸಣೆ ಮಾಡಿದ ವೇಳೆ ನಮ್ಮ ತಲೆಗೆ ಗನ್ ಇಟ್ಟು ನಾವೆಲ್ಲ ಯಾರು? ಎಂದು ಪ್ರಶ್ನಿಸಿದರು. ಹ್ಯಾಂಡ್ಸ್ ಅಪ್ ಅಂದಾಗ ಪಾಲಿಸಬೇಕಿತ್ತು. ನಾವು ರಷ್ಯನ್ ಕಡೆಯವರೆಂದು, ತಮ್ಮ ರಾಷ್ಟ್ರಕ್ಕೆ ತೊಂದರೆ ಮಾಡಬಹುದು ಎಂಬುದು ಅವರ ಶಂಕೆಯಾಗಿತ್ತು" ಎಂದರು.
"ಕೆಲವರು ತಮ್ಮನ್ನು ಹೆದರಿಸಿದ್ದು ಉಂಟು. ನಾವು ಭಾರತೀಯರು ಮೆಡಿಕಲ್ ಓದೋಕೆ ಬಂದಿದ್ದೀವಿ ಎಂದು ತಮ್ಮ ಮೊಬೈಲ್ನಲ್ಲಿದ್ದ ಭಾರತದ ರಾಷ್ಟ್ರಧ್ವಜ ಮುಂತಾದ ಕುರುಹುಗಳನ್ನು ಕಂಡು ಪಾಸ್ಪೋರ್ಟ್ ಪರೀಕ್ಷಿಸಿದ ನಂತರವಷ್ಟೇ ಕ್ಷಮೆ ಕೇಳಿ ಬೀಳ್ಕೊಟ್ಟರು. ಅಲ್ಲದೆ ಊಟ, ತಿಂಡಿ, ಬಟ್ಟೆ, ವೈದ್ಯಕೀಯ ವ್ಯವಸ್ಥೆ ಕೊಟ್ಟು ಗಡಿಗೆ ತೆರಳಲು ಸಹಕರಿಸಿದರು" ಎಂದು ಪರಿಸ್ಥಿತಿ ವಿವರಿಸಿದರು.
"ಕೀವ್ ನಗರದ ಶಾಲೆಯಲ್ಲಿ ವಾಸ್ತವ್ಯವಿದ್ದಾಗ ಆಗಾಗ್ಗೆ ಬಾಂಬ್ ಸಿಡಿಯುವ ಸದ್ದು ಕೇಳಿಸುತ್ತಿತ್ತು. ಅಲ್ಲಿ ಸುಮಾರು 300 ಭಾರತೀಯರು ಇದ್ದೆವು. ಒಮ್ಮೊಮ್ಮೆ ದಟ್ಟ ಹೊಗೆ ಕಾಣಿಸುತ್ತಿತ್ತು. ಆಗೆಲ್ಲ ನಮ್ಮ ಕಥೆ ಮುಗಿಯಿತು ಅಂತಲೇ ಭಾವಿಸುತ್ತಿದ್ದೆವು. ಸ್ಲೋವಾಕಿಯಾ ಗಡಿಗೆ ಕ್ಯಾಬ್ಗಳಲ್ಲಿ ಬರುತ್ತಿದ್ದಾಗ, 2-3 ಬಾರಿ ಕಣ್ಣೇದುರಿಗೆ ಬಾಂಬ್ಗಳು ಬಿದ್ದು ಸಿಡಿದವು. ಆಗಲೂ ನಮ್ಮ ಕಥೆ ಮುಗೀತು ಅಂತಲೆ ಅನಿಸುತ್ತಿತ್ತು" ಎಂದು ಭಯಾನಕ ಅನುಭವ ತೆರೆದಿಟ್ಟರು.
"ಸ್ಲೋವಾಕಿಯಾ ಗಡಿ ತಲುಪಿದಾಗ ಅಲ್ಲಿ ಭಾರತದ ಅಧಿಕಾರಿಗಳು ನಮ್ಮನ್ನು ಬರಮಾಡಿಕೊಂಡರು. ಅಲ್ಲಿಂದ ನಮಗೆ ನೀರು, ಆಹಾರದ ಕೊರತೆ ಕಾಣಲಿಲ್ಲ. ಭಾರತಕ್ಕೆ ಮರಳಲು ವಿಮಾನ ಪ್ರಯಾಣಕ್ಕೆ ಮೊದಲು ಬಂದವರಿಗೆ ಆದ್ಯತೆ. ಹೀಗಾಗಿ ನಾವು ನಮ್ಮ ಸರದಿಗಾಗಿ ಕಾಯಬೇಕಿತ್ತು. ವಿಮಾನ ನಿಲ್ದಾಣಕ್ಕೆ ಬಸ್ ವ್ಯವಸ್ಥೆಯನ್ನು ಭಾರತ ಸರ್ಕಾರವೇ ಮಾಡಿತ್ತು. ಶನಿವಾರ ಬೆಳಗ್ಗೆ ನವದೆಹಲಿಗೆ ಬಂದ ನಂತರ ಕರ್ನಾಟಕ ರಾಜ್ಯದ ಆಧಿಕಾರಿಗಳು ಬರ ಮಾಡಿಕೊಂಡರು. ಕರ್ನಾಟಕ ಭವನದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟರು. ಬೆಂಗಳೂರಿಗೆ ಬರಲು ವಿಮಾನದ ವ್ಯವಸ್ಥೆಯನ್ನೂ ರಾಜ್ಯ ಸರ್ಕಾರವೇ ಮಾಡಿತ್ತು" ಎಂದು ವಿವರಿಸಿದರು.
ಧನ್ಯವಾದ ತಿಳಿಸಿದ ಆಯೇಷಾ; "ಉಕ್ರೇನ್ನಿಂದ ನಮ್ಮನ್ನು ವಾಪಸ್ ಕರೆತರಲು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸಾಕಷ್ಟು ಶ್ರಮಿಸಿದ್ದಾರೆ. ಇತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಶ್ರಮಿಸಿವೆ. ಆರಂಭದಲ್ಲಿ ರಾಯಭಾರಿ ಕಚೇರಿಯವರ ಬಗ್ಗೆ ನನಗೂ ಕೋಪ ಬಂದಿದ್ದು ನಿಜ. ಆದರೆ ಅವರ ಸ್ಥಾನದಲ್ಲಿ ನಿಂತು ಯೋಚಿಸಿದಾಗಲೇ ಅವರ ಕಷ್ಟ ಅರ್ಥವಾಗಿತ್ತು" ಎಂದು ಆಯೇಷಾ ಹೇಳಿದರು.
Recommended Video
"ನಾವೆಲ್ಲಾ ಎದೆಗುಂದದಂತೆ, ಆತಂಕಕ್ಕೆ ಒಳಗಾಗದಂತೆ ನಮ್ಮ ಬಗ್ಗೆ ನಿಗಾ ಇಟ್ಟಿದ್ದರು. ವಿಷಮ ಪರಿಸ್ಥಿತಿಯಲ್ಲೂ ನಮ್ಮನ್ನು ಪ್ರೋತ್ಸಾಹಿಸಲು ಜೋಕ್ ಹೇಳಿ ನಗಿಸಲು ಪ್ರಯತ್ನಿಸುತ್ತಿದ್ದರು, ಪ್ರೋತ್ಸಾಹದ ನುಡಿ ಆಡುತ್ತಿದ್ದರು" ಎಂದ ಆಯೇಷಾ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
"ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಂದೆ, ತಾಯಿ, ಚಿಕ್ಕಪ್ಪ, ಸಂಬಂಧಿಕರನ್ನು ಕಂಡಾಗ ತವರಿಗೆ ಬಂದುಬಿಟ್ಟೆ ಎಂಬ ಸಂತೋಷ ಆವರಿಸಿತು. ತನ್ನ ವೈದ್ಯಕೀಯ ಪದವಿ ಮುಂದುವರೆಯಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟರೆ ಮುಂದುವರೆಸುವುದಾಗಿ" ತಿಳಿಸಿದರು.
ಆಯೇಷಾ ತಂದೆ ಜೋಹಾರ್ ಪಾಷ ಮಾತನಾಡಿ, "ಉಕ್ರೇನ್ನಲ್ಲಿರುವ ಭಾರತದ ಮಕ್ಕಳೆಲ್ಲ ವಾಪಸ್ ಬಂದಾಗ ಮಾತ್ರ ನನ್ನ ಮಗಳು ವಾಪಸ್ ಆದ ಸಂತಸ ನನ್ನಲ್ಲಿ ಮನೆ ಮಾಡಲಿದೆ" ಎಂದು ಹೇಳಿದರು.