ಆನಂದ್ ಸಿಂಗ್ ಮೇಲೆ ಹಲ್ಲೆ : ಈಗಲ್ಟನ್ ರೆಸಾರ್ಟ್ನಲ್ಲಿ ಪೊಲೀಸರ ಮಹಜರ್
ರಾಮನಗರ, ಜನವರಿ 23 : ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣದ ತನಿಖೆಯನ್ನು ಬಿಡದಿ ಪೊಲೀಸರು ಚುರುಕುಗೊಳಿಸಿದ್ದಾರೆ. ಹಲ್ಲೆ ನಡೆಸಿದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ತಲೆಮರೆಸಿಕೊಂಡಿದ್ದಾರೆ.
ನಾಲ್ಕು ತಂಡಗಳನ್ನು ರಚನೆ ಮಾಡಿಕೊಂಡು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಶಾಸಕ ಜೆ.ಎನ್.ಗಣೇಶ್ಗಾಗಿ ಹುಡುಕಾಟವನ್ನು ಪೊಲೀಸರು ಮುಂದುವರೆಸಿದ್ದಾರೆ. ಶಾಸಕರು ಎಲ್ಲಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಶಾಸಕರು ಹೊಡೆದಾಡಿ ರಂಪಾಟ ಮಾಡಿಕೊಳ್ಳಲು ಕಾರಣಗಳೇನು?
ಬುಧವಾರ ಸಂಜೆ ಬಿಡದಿ ಠಾಣೆ ಎಸ್ಐ ಹರೀಶ್ ನೇತೃತ್ವದ ತಂಡ ಈಗಲ್ಟನ್ ರೆಸಾರ್ಟ್ಗೆ ಭೇಟಿ ನೀಡಿತ್ತು. ಪೊಲೀಸರು ಸ್ಥಳ ಮಹಜರು ನಡೆಸಿದ್ದು, ರೆಸಾರ್ಟ್ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದೆ.
ಈಗಲ್ಟನ್ ರೆಸಾರ್ಟ್ ಮ್ಯಾನೇಜರ್, ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಜನವರಿ 19ರಂದು ನಡೆದ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ದೊಣ್ಣೆಯಿಂದ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪವಿದ್ದು, ಪೊಲೀಸರು ಅದಕ್ಕಾಗಿ ಹುಡುಕಾಡಿದ್ದಾರೆ.
ತಲೆ ಮರೆಸಿಕೊಂಡ ಶಾಸಕ ಗಣೇಶ್, ಪೊಲೀಸರಿಂದ ಹುಡುಕಾಟ
ಜಾಮೀನಿಗೆ ಯತ್ನ : ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಆನಂದ್ ಸಿಂಗ್ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಗಣೇಶ್ ಅರ್ಜಿ
ರಾಮನಗರ ನ್ಯಾಯಾಲಯದಲ್ಲಿ ಬುಧವಾರ ಅವರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸಂಜೆಯ ತನಕ ಯಾವ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿಲ್ಲ.
ಚೇತರಿಕೆ : ಮತ್ತೊಂದು ಕಡೆ ಶಾಸಕ ಆನಂದ್ ಸಿಂಗ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬುಧವಾರ ಸಂಜೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಸಚಿವ ಜಮೀರ್ ಅಹಮದ್ ಖಾನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.