ರಾಮನಗರ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿ ಹೆಸರು ಅಂತಿಮ
Recommended Video

ಎರಡು ಕ್ಷೇತ್ರದಲ್ಲಿ ಗೆದ್ದ ಎಚ್ ಡಿ ಕುಮಾರಸ್ವಾಮಿಯವರಿಂದ ತೆರವಾಗಿರುವ ರಾಮನಗರ ಮತ್ತು ಸಿದ್ದು ನ್ಯಾಮೇಗೌಡ ಅವರ ನಿಧನದಿಂದ ತೆರವಾಗಿರುವ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.
ಸಮ್ಮಿಶ್ರ ಸರಕಾರ ಅಧಿಕಾರದಲ್ಲಿ ಇರುವುದರಿಂದ, ಎರಡೂ ಕ್ಷೇತ್ರವನ್ನು ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ರಾಜ್ಯ ನಾಯಕರಿಗೆ ಇರುವುದರಿಂದ, ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಸ್ಥಳೀಯ ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನು ಜೆಡಿಎಸ್-ಕಾಂಗ್ರೆಸ್ ಮುಖಂಡರು ನಡೆಸುತ್ತಿದ್ದಾರೆ.
ರಾಮನಗರದಲ್ಲಿ ನಾವು ಅಷ್ಟೇನೂ ಅಸ್ತಿತ್ವದಲ್ಲಿಲ್ಲ, ಆದರೆ ಜಮಖಂಡಿಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿರುವುದರಿಂದ, ಚುನಾವಣೆಗೆ ಮೊದಲೇ ರಾಮನಗರದಲ್ಲಿ ಬಿಜೆಪಿ ಶಸ್ತತ್ಯಾಗ ಮಾಡಿದಂತಾಗಿದೆ.
ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ, ಎರಡೂ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದ, ಸಿಎಂ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಸಿಟ್ಟು ಗುರುವಾರ (ಅ 4) ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ವ್ಯಕ್ತವಾಗಿದ್ದರಿಂದ, ಉಪಚುನಾವಣೆಯ ವೇಳೆ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಲು ಎಚ್ಡಿಕೆ ನಿರ್ಧರಿಸಿದ್ದಾರೆ.
ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ದೇವೇಗೌಡರ ಕುಟುಂಬದ ಸದಸ್ಯರೊಬ್ಬರೇ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದೆ. ಈ ವಿಚಾರವನ್ನು ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.

ರಾಮನಗರ, ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರ, ಕಾರ್ಯಕರ್ತರ ಸಭೆ
ಬಿಡದಿಯ ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಸಿಎಂ ವಿರುದ್ಧವೇ ತಿರುಗಿ ಬಿದ್ದ ನಾಯಕರು ಜನರ ಸಮಸ್ಯೆಗಳು ಆಲಿಸಲು ನೀವು ಕ್ಷೇತ್ರಕ್ಕೆ ಬರುತ್ತಿಲ್ಲ. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.

ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ
ರಾಮನಗರದಲ್ಲಿ ನಡೆದ ಸರಕಾರೀ ಕಾರ್ಯಕ್ರಮವೊಂದರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ, ರಾಮನಗರದ ಜನತೆ ಸೀತಾದೇವಿ (ಅನಿತಾ ಕುಮಾರಸ್ವಾಮಿ) ಅವರನ್ನು ಈಗ ಕರೆತರಬೇಕಾಗಿದೆ. ರಾಮ, ಅಂಜನೇಯನ ಜೊತೆ ಸೀತೆಯನ್ನೂ ಕರೆತಂದರೆ ರಾಮನಗರ ಒಂದೇ ಏಕೆ, ಇಡೀ ರಾಜ್ಯ ರಾಮ ರಾಜ್ಯವಾಗುತ್ತದೆ ಎಂದಿದ್ದರು.

ಮೃತಪಟ್ಟ ಕುಟುಂಬದವನ್ನು ಭೇಟಿಯಾದ ನಿಖಿಲ್ ಕುಮಾರಸ್ವಾಮಿ
ಮಂಡ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬದವನ್ನು ಭೇಟಿಯಾದ ನಂತರ ಮಾತನಾಡುತ್ತಿದ್ದ ನಿಖಿಲ್ ಕುಮಾರಸ್ವಾಮಿ, ನಾನು ಮಂಡ್ಯದಿಂದ, ನನ್ನ ತಮ್ಮ ಪ್ರಜ್ವಲ್ ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಂದು ಮಾಧ್ಯಮದವರು ಬರೆಯುತ್ತಿದ್ದಾರೆ. ಅದನ್ನು ಓದಲು ಖುಷಿಯಾಗುತ್ತದೆ. ರಾಜಕೀಯಕ್ಕೆ ಇಳಿದರೆ, ಸಿನಿಮಾ ಮತ್ತು ಪೊಲಿಟಿಕ್ಸ್ ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತೇನೆ - ನಿಖಿಲ್ ಕುಮಾರಸ್ವಾಮಿ.

ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದು ಖಚಿತ
ರಾಮನಗರದಿಂದ ನನ್ನ ತಾಯಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದು ಖಚಿತ ಎಂದು ನಿಖಿಲ್ ಕುಮಾರಸ್ವಾಮಿ ಹೇಳುವ ಮೂಲಕ, ಜೆಡಿಎಸ್ ಅಭ್ಯ್ಯರ್ಥಿಯಾರು ಎನ್ನುವ ಕುತೂಹಲಕ್ಕೆ ಬಹುತೇಕ ತೆರೆ ಎಳೆದಿದ್ದಾರೆ. ಚುನಾವಣಾ ಆಯೋಗ ದಿನಾಂಕ ಘೋಷಿಸಿದ ನಂತರ, ಅನಿತಾ ಹೆಸರನ್ನು ಅಧಿಕೃತವಾಗಿ ಜೆಡಿಎಸ್ ರಾಜ್ಯಾಧ್ಯಕ್ಷರು ಘೋಷಿಸುವ ಸಾಧ್ಯತೆಯಿದೆ.

ರಾಜಕೀಯ ನನ್ನ ರಕ್ತದ ಕಣದಲ್ಲಿ ಬಂದಿದೆ
ರಾಜಕೀಯ ನನ್ನ ರಕ್ತದ ಕಣದಲ್ಲಿ ಬಂದಿದೆ. ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡವಿದೆ. ಮಂಡ್ಯದಿಂದ ಪ್ರಜ್ವಲ್ ರೇವಣ್ಣ, ನಿಖಿಲ್ ಯಾರು ಸ್ಪರ್ಧೆ ಮಾಡಬೇಕು ಎನ್ನುವ ಬಗ್ಗೆ ನಮ್ಮ ತಂದೆ ಹಾಗೂ ಜೆಡಿಎಸ್ ಪಕ್ಷ ತೀರ್ಮಾನ ತೆಗೆದುಕೊಳ್ಳಬೇಕು. ಪಕ್ಷದ ನಾಯಕರ ತೀರ್ಮಾನ, ಕಾರ್ಯಕರ್ತರ ಸಲಹೆಗೆ ನಾನು ಬದ್ಧನಾಗಿರುತ್ತೇನೆ ಎಂದು ನಿಖಿಲ್ ಹೇಳುವ ಮೂಲಕ, ರಾಜಕೀಯ ಎಂಟ್ರಿಯ ಸುಳಿವು ನೀಡಿದ್ದರು.












Click it and Unblock the Notifications