ಜೆಡಿಎಸ್ ಕಾರ್ಯಾಗಾರ; ಎಚ್ಡಿಕೆಗೆ ಅನಿತಾ ಕುಮಾರಸ್ವಾಮಿ ಸಲಹೆ ಏನು?
ರಾಮನಗರ, ಸೆಪ್ಟೆಂಬರ್ 29: "ಎಚ್. ಡಿ. ಕುಮಾರಸ್ವಾಮಿ ಅವರು ಹಿಂದೆ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದರು. ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ ಮಾಡಬೇಕು" ಎಂದು ರಾಮನಗರದ ಶಾಸಕಿ ಅನಿತಾ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಲಹೆ ನೀಡಿದರು.
'ಜನತಾ ಪರ್ವ 1.O', 'ಮಿಷನ್ 123' ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ಆಯೋಜಿಸಲಾಗಿರುವ ಜೆಡಿಎಸ್ ಸಂಘಟನಾ ಕಾರ್ಯಗಾರದಲ್ಲಿ 3ನೇ ದಿನವಾದ ಬುಧವಾರ ಮಹಿಳಾ ಗೋಷ್ಠಿಯನ್ನು ಅನಿತಾ ಕುಮಾರಸ್ವಾಮಿ ಉದ್ಘಾಟಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅನಿತಾ ಕುಮಾರಸ್ವಾಮಿ, "ಮಹಿಳೆಯರಿಗೆ ವಿಶೇಷವಾದ ಕಾರ್ಯಕ್ರಮ ಕೊಡಿ. ಇದು ನಾನು ಕುಮಾರಸ್ವಾಮಿ ಅವರಿಗೆ ನೀಡುವ ಮುಖ್ಯವಾದ ಸಲಹೆ" ಎಂದರು.
"ರೈತರು ಮಾಡಿದ ಸಾಲ ಮನ್ನಾ ಕ್ರಾಂತಿಕಾರಿ ಕ್ರಮ. ಹಾಗೆಯೇ ಕುಟುಂಬ ನಿರ್ವಹಣೆಗೆ, ಮಕ್ಕಳ ಶಿಕ್ಷಣಕ್ಕೆ ಮಹಿಳೆಯರು ಸಾಲ ಮಾಡಿಕೊಂಡಿದ್ದಾರೆ. ಮಹಿಳೆಯರು ಸಾಲ ಮನ್ನಾ ಮಾಡಿ ಎಂದು ಕೇಳುತ್ತಿದ್ದಾರೆ. ಕಷ್ಟದಲ್ಲಿ ಇರುವ ಮಹಿಳೆಯರ ನೆರವಿಗೆ ಕುಮಾರಸ್ವಾಮಿ ಅವರು ಧಾವಿಸಬೇಕು ಎಂದರು. ಮುಂದೆ ನೀವು ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲವನ್ನೂ ಮನ್ನಾ ಮಾಡುವ ಮೂಲಕ ಮಹಿಳೆಯರ ನೆರವಿಗೆ ಧಾವಿಸುವಂತೆ" ಅನಿತಾ ಕುಮಾರಸ್ವಾಮಿ ಒತ್ತಾಯಿಸಿದರು.
ಬುಧವಾರ ಬೆಳಗ್ಗೆ ಕಾರ್ಯಾಗಾರ ಆರಂಭವಾಗುವ ಮೊದಲು ಮಾತನಾಡಿದ್ದ ಎಚ್. ಡಿ. ಕುಮಾರಸ್ವಾಮಿ, "2023ರ ಚುನಾವಣೆಯಲ್ಲಿ 30 ರಿಂದ 35 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಮೀಸಲು ಇಡುತ್ತೇವೆ" ಎಂದು ಘೋಷಣೆ ಮಾಡಿದ್ದರು.

ಪಂಚರತ್ನ ಯೋಜನೆ ಶ್ಲಾಘನೆ
"ಪಂಚರತ್ನ ಯೋಜನೆ ರೂಪಿಸುವ ಯೋಚನೆ ಶ್ಲಾಘನೀಯ. ಇದರ ಜತೆಗೆ ಉಚಿತ ಶಿಕ್ಷಣ ನೀಡಿದರೆ ಸಮಾಜಕ್ಕೆ, ರಾಜ್ಯಕ್ಕೆ ಇನ್ನೂ ಒಳ್ಳೆಯದು. ಉಚಿತ ಆರೋಗ್ಯ ಯೋಜನೆಮಾಡಿದರೆ ಒಳ್ಳೆಯದು. ಈ ಮೂಲಕ ಬಡಜನರ ಆರೋಗ್ಯದ ಬವಣೆ ತಪ್ಪುತ್ತದೆ. ಉತ್ತಮ ಆರೋಗ್ಯ ಇದ್ದರೆ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ" ಎಂದು ಅನಿತಾ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
"ಕುಮಾರಸ್ವಾಮಿಯವರು ಮಾನವೀಯ ಗುಣವುಳ್ಳ ನಾಯಕರು. ಎರಡು ಬಾರಿ ಸಿಎಂ ಆದಾಗಲೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅನೇಕ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಯಾವೊಬ್ಬ ಮುಖ್ಯಮಂತ್ರಿ ಮಾಡದೇ ಇರುವ ಕಾರ್ಯಕ್ರಮ ನೀಡಿದ್ದಾರೆ. ಜನತಾ ದರ್ಶನದ ಮೂಲಕ ಜನಮನದಲ್ಲಿ ನೆಲೆಸಿದ್ದಾರೆ" ಎಂದರು.

ಉತ್ತಮ ಅವಕಾಶಗಳು ಇವೆ
"ಮಹಿಳೆಯರಿಗೆ ಉತ್ತಮ ಅವಕಾಶಗಳಿವೆ. ಎಲ್ಲರೂ ಇದಕ್ಕೆ ಪ್ರೋತ್ಸಾಹ ನೀಡಬೇಕು. ಚುನಾವಣಾ ಅಭ್ಯರ್ಥಿಗಳು ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಸ್ವತಂತ್ರವಾಗಿ ಮಹಿಳೆಯರು ಕೆಲಸ ನಿಭಾಯಿಸಲು ಕಲಿಯಬೇಕು. ದೇವರು ಈ ಅವಕಾಶ ಕೊಟ್ಟಿದ್ದಾನೆ. ಸ್ವತಂತ್ರವಾಗಿ ಬದುಕಬೇಕು, ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುವ ದಿಟ್ಟತನ ತೋರಬೇಕು" ಎಂದು ಅನಿತಾ ಕುಮಾರಸ್ವಾಮಿ ಕರೆ ನೀಡಿದರು.
"ಮೊದಲು ಯಜಮಾನರನ್ನು ಕೇಳಬೇಕು ಅನ್ನೋದನ್ನು ಬಿಡಿ. ಸ್ವತಂತ್ರವಾಗಿ ಆಲೋಚನೆ ಮಾಡಿ. ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಇದ್ದಾರೆ. ನೀವೆಲ್ಲರೂ ಮುಂದೆ ಹೇಗೆ ಬೆಳೆಯಬೇಕು ಎಂಬುದನ್ನು ಇಂದೇ ತೀರ್ಮಾನ ಮಾಡಿ. ಅನೇಕ ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಸಾನಿಯಾ ಮಿರ್ಜಾ ಕೂಡ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ದೊಡ್ಡ ಸಾಧನೆ ಮಾಡಿದ್ದಾರೆ" ಎಂದರು.

ದೇವೇಗೌಡರ ಗುಣಗಾನ ಮಾಡಿದ ಸೊಸೆ
"ನಮಗೆಲ್ಲ ನಿಜವಾದ ಸ್ಪೂರ್ತಿ ಎಂದರೆ ದೇವೇಗೌಡರು. ನಾವು ನಾಚಿಕೊಳ್ಳುವ ರೀತಿ ಪಾದರಸದ ರೀತಿ ಓಡಾಡುತ್ತಾರೆ. ಪ್ರತಿಯೊಂದು ವಿಷಯಕ್ಕೂ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರೇ ನಮಗೆಲ್ಲ ಸ್ಪೂರ್ತಿ, ಮೀಸಲಾತಿ ವಿಚಾರದಲ್ಲಿ ದೇವೇಗೌಡರ ಕೊಡುಗೆ ಅಪಾರ. ನಾನು ರಾಜಕಾರಣ ಏನಾದರೂ ತಿಳಿದುಕೊಂದಿದ್ದರೆ ಅದು ದೇವೇಗೌಡರಿಂದ. ನಾನು ಅವರ ಸೊಸೆ ಎಂಬುದು ಒಂದು ಕಡೆಯಾದರೆ, ಇನ್ನೊಂದೆಡೆ ಅವರ ಅಪ್ಪಟ ಅಭಿಮಾನಿ. ಯಾವುದೇ ಒಂದು ವಿಚಾರಕ್ಕೆ ಬೇಜಾರಾದರೆ ಅವರ ಜೀವನವನ್ನು ಒಮ್ಮೆ ಮೆಲುಕು ಹಾಕಿದರೆ ಸಾಕು. ಏನೋ ಒಂದು ರೀತಿಯಾದ ಸಮಾಧಾನ ಆಗುತ್ತದೆ" ಎಂದು ಮಾವನ ಗುಣಗಾನ ಮಾಡಿದರು.
"ಈಗ ಬದಲಾವಣೆ ಪರ್ವ ಬಂದಿದೆ ಅನ್ನುವ ಭಾವನೆ ನನಗಿದೆ. ಜನರೂ ಕೂಡ ಬದಲಾವಣೆ ಬಯಸುತ್ತಿದ್ದಾರೆ. ಬಡವರ, ರೈತರ ಪರ ಸರ್ಕಾರ ರಚನೆ ಮಾಡಬೇಕು. ದೂರದೃಷ್ಟಿ ಇರುವ ರಾಜಕಾರಣಿಗಳಾಗಿ ನಾವೆಲ್ಲ ಬೆಳೆಯಬೇಕು" ಎಂದು ಅನಿತಾ ಕುಮಾರಸ್ವಾಮಿ ಕರೆ ಕೊಟ್ಟರು.

ಮಹಿಳೆಯರಿಗೆ ಟಿಕೆಟ್ ನೀಡಲಾಗುತ್ತದೆ
"2023ರ ಚುನಾವಣೆಯಲ್ಲಿ 30-35 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಮೀಸಲು ಇಡುತ್ತೇವೆ. ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟುಗಳನ್ನು ಮಹಿಳೆಯರಿಗೆ ಕೊಡಲಾಗುವುದು. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಇದನ್ನು ಸರಿ ಮಾಡುವ ಕೆಲಸ ಮಾಡಲಾಗುವುದು. ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಈ ಕಾರ್ಯಾಗಾರದಿಂದ ಪ್ರಾರಂಭ ಮಾಡುತ್ತೇವೆ" ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದರು.












Click it and Unblock the Notifications