ಸರ್ಕಾರಿ ಶಾಲೆ ಉಳಿಸಲು ಕೈ ಜೋಡಿಸಿದ ನಟಿ ನೀತು
ರಾಮನಗರ, ನವೆಂಬರ್ 29; 'ಸರ್ಕಾರಿ ಶಾಲೆ ಉಳಿಸಿ' ಅಭಿಯಾನಕ್ಕೆ ಚಿತ್ರ ನಟಿ ನೀತು ಕೈಜೋಡಿಸಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಸರ್ಕಾರಿ ಶಾಲೆಗೆ ಸ್ವತಃ ಬಣ್ಣ ಬಳಿಯುವ ಮೂಲಕ ಸರ್ಕಾರಿ ಶಾಲೆ ಉಳಿಸಿ ಎಂದು ಸಂದೇಶ ಸಾರಿದರು.
ಕನ್ನಡ ಮನಸುಗಳ ಪ್ರತಿಷ್ಠಾನ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯಾದ್ಯಂತ 9 ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿದು ಶಾಲೆಗಳಿಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶಾಲೆಗಳಿಗೆ ಹೊಸ ಮೆರಗನ್ನು ತಂದು ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಮುಂದುವರೆಸಿದ್ದಾರೆ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ತವರು ಮಾಗಡಿಯಲ್ಲಿ ಸೋಮವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 13 ಕೊಠಡಿಗಳಿಗೆ ಕನ್ನಡ ಮನಸ್ಸುಗಳ ಪ್ರತಿಷ್ಠಾನದ ಸದಸ್ಯರೊಂದಿಗೆ ಚಿತ್ರ ನಟಿ ನೀತು ಬಣ್ಣ ಬಳಿದು ಅಂದಗೊಳಿಸಿದರು. ಇನ್ನೂ ಕನ್ನಡ ಪ್ರತಿಷ್ಠಾನ ಹಮ್ಮಿಕೊಂಡಿರುವ ಅಭಿಯಾನಕ್ಕೆ ಹೂವಿನಹೊಳೆ ಪ್ರತಿಷ್ಠಾನ ಹಾಗೂ ರಿವರ್ಬೆಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೂರ್ಯ ಫೌಂಡೇಶನ್ ಇವರುಗಳ ಸಹಕಾರದೊಂದಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ದತ್ತು ತೆಗೆದುಕೊಂಡು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ.

ನಿರ್ಲಕ್ಷ್ಯಕ್ಜೆ ಒಳಗಾದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಸುಮಾರು 5-6 ಲಕ್ಷಗಳ ವೆಚ್ಚದಲ್ಲಿ ಸುಣ್ಣ-ಬಣ್ಣ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ಕನ್ನಡ ಮನಸ್ಸುಗಳ ಪ್ರತಿಷ್ಠಾನ ಹಾಗೂ ಮಾಗಡಿ ವಿದ್ಯಾರ್ಥಿ ವೇದಿಕೆ ಸಹಕಾರದೊಂದಿಗೆ ಅನುಷ್ಠಾನಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಟಿ ನೀತು, "ಕನ್ನಡ ಮನಸ್ಸುಗಳ ಪ್ರತಿಷ್ಠಾನ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಂಡಿದೆ. ಈಗಾಗಲೇ 9 ಸರ್ಕಾರಿ ಶಾಲೆಗಳನ್ನು ಗುರುತಿಸಿ ಶಾಲೆ ಅಗತ್ಯ ಮೂಲಸೌಕರ್ಯ ಒದಗಿಸಿ ಸರ್ಕಾರಿ ಶಾಲೆ ಉಳಿವಿಗೆ ಶ್ರಮಿಸಿದ್ದಾರೆ. ಸರ್ಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ಪಾಲ್ಗೊಂಡು ಶಾಲೆಯ ಕೊಠಡಿಗೆ ಬಣ್ಣ ಬಳಿದೆ. ನನಗೆ ತುಂಬಾ ಖುಷಿಯಾಗಿದೆ ಮುಂದೆಯೂ ಕನ್ನಡ ಮಸಸ್ಸುಗಳು ಹಮ್ಮಿಕೊಳ್ಳುವ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ" ಎಂದರು.

"ಸರ್ಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ಭಾಗವಹಿಸುವಂತೆ ಸ್ನೇಹಿತರು ಮನವಿ ಮಾಡಿದ್ದರು. ಆದರೆ ನಾನ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಇಂದು ಬೆಂಗಳೂರು ಸಮೀಪವೇ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ಅಭಿಯಾನದಲ್ಲಿ ಪಾಲ್ಗೊಂಡೆ. ಸಿಗಂದೂರು, ಕಾಸರಗೊಡು ಸೇರಿದಂತೆ ಹಿಂದಿನ 9 ಶಾಲೆಗಳ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದಕ್ಕೆ ಬೇಸರವಾಗಿದೆ" ಎಂದು ತಿಳಿಸಿದರು.
ಸರ್ಕಾರದ ಕರ್ತವ್ಯ; "ಸರ್ಕಾರಿ ಶಾಲೆಗಳನ್ನು ಉಳಿಸುವುದು ಸರ್ಕಾರಗಳ ಕರ್ತವ್ಯ. ಅದನ್ನು ಸರ್ಕಾರಗಳು ಯಾರಿಂದಲೂ ಹೇಳಿಸಿಕೊಳ್ಳಬಾರದು. ಅಧಿಕಾರದಲ್ಲಿ ಯಾವುದೇ ಸರ್ಕಾರವಿರಲಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ಖಾಸಗಿ ಶಾಲೆಗಳ ಅಭಿವೃದ್ಧಿಯನ್ನು ಆಡಳಿತ ಮಂಡಳಿ ಮಾಡುತ್ತದೆ, ಸರ್ಕಾರಿ ಶಾಲೆಗಳು ಅಭಿವೃದ್ಧಿಯಲ್ಲಿ ಕಡೆಗಣೆನೆಯಾಗುತ್ತವೆ. ಯಾವುದೇ ಕಾರಣಕ್ಕೆ ಖಾಸಗಿ ಶಾಲೆ ಸರ್ಕಾರಿ ಶಾಲೆ ಎಂಬ ತಾರತಮ್ಯ ಆಗಬಾರದು, ಸರ್ಕಾರಗಳು ಖಾಸಗಿ ಶಾಲೆಗೆ ಸರಿಸಮವಾಗಿ ಸರ್ಕಾರಿ ಶಾಲೆಯಗಳನ್ನು ಅಭಿವೃದ್ಧಿಪಡಿಸಬೇಕು" ಎಂದು ನಟಿ ನೀತು ಒತ್ತಾಯಿಸಿದರು.
ಸಾಮಾಜಿಕ ಕೆಲಸಕ್ಕೆ ಮುಂದಾಗಿ; 'ಇಂದಿನ ಯುವ ಜನಾಂಗ ಫೇಸ್ಬುಕ್, ವಾಟ್ಸಪ್, ಟ್ವಿಟರ್ಗಳಲ್ಲಿ ಸರ್ಕಾರಗಳನ್ನು ಟೀಕಿಸುತ್ತಾ ಪರಸ್ಪರ ಕಿತ್ತಾಡುತ್ತಿದ್ದಾರೆ. ಕಿತ್ತಾಟ ಬಿಡಿ ಸರ್ಕಾರ ತನ್ನ ಜವಾಬ್ದಾರಿ ತಾನು ಮಾಡುತ್ತಾದೆ. ಯುವಕರು ತಳ ಮಟ್ಟಕ್ಕೆ ಬಂದು ತಮ್ಮ ಕೈಲಾದ ಸೇವೆಯನ್ನು ಮಾಡಿ, ಸಮಾಜಕ್ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸುವಂತೆ" ನೀತು ಕರೆ ನೀಡಿದರು.












Click it and Unblock the Notifications