ರಾಮನಗರ: ಹೆದ್ದಾರಿಯಲ್ಲಿಯೇ ಆಕಸ್ಮಿಕವಾಗಿ ಹೊತ್ತಿ ಉರಿದ ಮಾರುತಿ ಕಾರು
ರಾಮನಗರ, ಜೂನ್ 7: ರಾಮನಗರ ಜಿಲ್ಲೆ ಬಿಡದಿ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರೊಂದು ಅಗ್ನಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಗಳೂರು ಕಡೆಯಿಂದ ಬರುತ್ತಿದ್ದ ಮಾರುತಿ ಕಾರ್ ಬಿಡದಿ ನಗರಕ್ಕೆ ಪ್ರವೇಶ ಮಾಡಿಕೊಳ್ಳುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಕಾರು ಮಾಲೀಕ ಕೆಳಗಿಳಿದು ನೋಡುವಷ್ಟರಲ್ಲಿ ಬೆಂಕಿಯ ಕೆನ್ನಾಲಗೆಗೆ ಸಿಕ್ಕು ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ರಾಮನಗರದಲ್ಲಿ ದ್ವೇಷಕ್ಕೆ ಬಲಿಯಾದವು 300 ಬಾಳೆ ಗಿಡಗಳು!
ಮಳೆ ಬರುತ್ತಿದ್ದರೂ ಕೂಡಾ ಬೆಂಕಿ ನಂದಿಸಲಾಗದೆ ಕಾರು ಮಾಲೀಕ ಕೈ ಚೆಲ್ಲಿ ಕುಳಿತರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲಕಾಲ ಅಸ್ಥವ್ಯಸ್ಥಗೊಂಡಿತ್ತು, ಬಳಿಕ ಹೊತ್ತಿ ಉರಿಯುತ್ತಿದ್ದ ಕಾರು ಪಕ್ಕದಲ್ಲೇ ವಾಹನಗಳು ಹೋಗಲಾರಂಭಿಸಿದ್ದರಿಂದ ಸಂಚಾರ ದಟ್ಟಣೆ ಕಡಿಮೆಯಾಯಿತು.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಅಲ್ಲದೆ ಹೆದ್ದಾರಿಯಲ್ಲಿಯೇ ಬೆಂಕಿ ಹೊತ್ತಿಕೊಂಡರೂ ಯಾವುದೇ ಹೆಚ್ಚಿನ ಅಪಾಯವಾಗಿಲ್ಲ. ಸ್ಥಳಕ್ಕೆ ಬಿಡದಿ ಪೊಲೀಸರು ಆಗಮಿಸಿ ಬಳಿಕ ಅಗ್ನಿಶಾಮಕ ದಳ ಕರೆಸಿ ಬೆಂಕಿ ನಂದಿಸುವ ಹೊತ್ತಿಗೆ ಕಾರು ಸಂಪೂರ್ಣ ಭಸ್ಮವಾಗಿಬಿಟ್ಟಿತ್ತು. ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.