ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಅಂಬರೀಶ್
ಚನ್ನಪಟ್ಟಣ,ಜೂನ್ 30: "ಸರ್ಕಾರಿ ಶಾಲೆಗಳು ಉಳಿಯಬೇಕು, ನಾನೇನು ಸರ್ಕಾರಕ್ಕೆ ಸಲಹೆ ಕೊಡುವಷ್ಟು ದೊಡ್ಡವನಲ್ಲ ಆದರೂ ಅಧಿಕಾರ ನಡೆಸುವವರು ಈ ಬಗ್ಗೆ ಚಿಂತಿಸಲಿ ಎಂದು ಪರೋಕ್ಷವಾಗಿ ಸರ್ಕಾರಿ ಶಾಲೆ ಉಳಿವಿಗೆ ಸರ್ಕಾರ ಮುಂದಾಗಲಿ" ಎಂದು ನಟ ಹಾಗೂ ಮಂಡ್ಯ ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.
ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಚಿತ್ರ ನಟ, ರಾಜಕಾರಣಿ ದಿವಂಗತ ಅಂಬರೀಶ್ ಅಭಿಮಾನಿಗಳು ಹಮ್ಮಿಕೊಂಡಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
" ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ಈ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಈಗ ಬಹಳಷ್ಟು ಸರ್ಕಾರಿ ಶಾಲೆ ಮುಚ್ಚುತ್ತಿವೆ. ಶಾಸಕರು, ಮಂತ್ರಿಗಳು ಈ ವಿಚಾರವಾಗಿ ಕ್ಯಾಬಿನೆಟ್ ನಲ್ಲಿಯೂ ಚರ್ಚೆ ಮಾಡಿ ಆದಷ್ಟು ಶೀಘ್ರವಾಗಿ ಪರಿಹಾರ ಒದಗಿಸಬೇಕು, ನಾನೊಬ್ಬ ನಾಗರಿಕನಾಗಿ ಇಷ್ಟನ್ನು ಮಾತ್ರ ಕೇಳಬಹುದು" ಎಂದು ತಿಳಿಸಿದರು.

ರಾಜಕೀಯಕ್ಕೆ ಎಂಟ್ರಿ ಯಾವಾಗ?
ಗ್ರಾಮದಲ್ಲಿ ಅಭಿಷೇಕ್ ಅಂಬರೀಶ್ ನೋಡಲು ಜನರು ಕಿಕ್ಕಿರಿದು ಜಮಾಯಿಸಿದ್ದರು. ಜನಸ್ತೋಮ ಕಂಡು ತಮ್ಮ ತಂದೆ ಅಂಬರೀಶ್ ಅಭಿನಯದ ಅಂತ ಸಿನಿಮಾದ "ಕನ್ವರ್ ಲಾಲ್ ಡೈಲಾಗ್ " ಹೇಳುವ ಮೂಲಕ ಅಭಿಷೇಕ್ ಜನರನ್ನು ರಂಜಿಸಿದರು.
ಈ ವೇಳೆ ಅಭಿಷೇಕ್ ಗೆ ವಿದ್ಯಾರ್ಥಿಗಳು, ಜನರು ಜೈಕಾರ ಹಾಕಿದರು. ಇನ್ನು ಅಭಿಷೇಕ್ ರಾಜಕೀಯಕ್ಕೆ ಬರ್ತಾರಾ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರೀತಿ ಇದ್ದ ಕಡೆ ನಾನು ಇರುತ್ತೇನೆ, ಏನೇ ನಿರ್ಧಾರ ಮಾಡಿದರೂ ನಿಮಗೆ ಹೇಳಿಯೇ ಮಾಡ್ತೇನೆ. ಸದ್ಯಕ್ಕೆ ಬ್ಯಾಡ್ ಮ್ಯಾನರ್ಸ್ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಕಾಳಿ ಚಿತ್ರದ ಜೊತೆಗೆ ಮತ್ತೊಂದು ಚಿತ್ರ ಇದೇ. ಸದ್ಯದಲ್ಲೇ ಬ್ಯಾಡ್ ಮ್ಯಾನರ್ಸ್ ತೆರೆಗೆ ಬರಲಿದೆ ಚಿತ್ರ ನೋಡಿ ಹರಸಿ" ಎಂದು ಮನವಿ ಮಾಡಿಕೊಂಡರು.

800 ಮಕ್ಕಳಿಗೆ ಸಮವಸ್ತ್ರ ವಿತರಿಸಿದ ಅಭಿಷೇಕ್
ವಿದ್ಯಾಸಂದ್ರ ಎಂದೇ ಖ್ಯಾತಿಗಳಿಸಿರುವ ಅರಳಾಳುಸಂದ್ರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ LKG ಶಾಕೆಯಿಂದ ದ್ವಿತೀಯ ಪಿಯುಸಿ ವರೆಗಿನ ಸುಮಾರು 800 ಮಕ್ಕಳಿಗೆ ಅಭಿಷೇಕ್ ಸಮವಸ್ತ್ರ ವಿತರಿಸಿದರು. ಅಭಿಮಾನಿಗಳು ಮಾಡುತ್ತಿರುವ ಈ ಕಾರ್ಯಕ್ರಮ ಕಂಡು ನನಗೆ ಬಹಳ ಖುಷಿ ಆಗ್ತಿದೆ. ಇದೆಲ್ಲಾ ಅವರೆ ಮಾಡಿದ್ದಾರೆ, ನಾನು ಕೇವಲ ಬಂದು ಸಮವಸ್ತ್ರ ವಿತರಣೆ ಮಾಡಿದ್ದೇನೆ ಅಷ್ಟೇ ಎಂದು ಮಾಧ್ಯಮಕ್ಕೆ ತಿಳಿಸಿದರು.

ಅಂಬರೀಶ್ ಅಭಿಮಾನಿಗಳಿಂದ ಕಾರ್ಯಕ್ರಮ
ಈ ಕಾರ್ಯಕ್ರಮ ಆಯೋಜಿಸಿದ್ದ ಅಂಬಿ ಅಭಿಮಾನಿ ಪರಮೇಶ್ ಎಂಬುವವರಿಗೆ ಧನ್ಯವಾದ ಅರ್ಪಿಸಿದರು. "ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯ ಸಂಪೂರ್ಣ ಕ್ರೆಡಿಟ್ ಅಂಬರೀಶ್ ಅಭಿಮಾನಿ ಪರಮೇಶ ಅವರಿಗೆ ಸಲ್ಲುತ್ತದೆ. ನಮ್ಮ ತಂದೆ ಅಭಿಮಾನಿ ಸಂಘದಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಪರಮೇಶ್ ಅಪ್ಪಟ ಅಂಬರೀಶ್ ಅಭಿಮಾನಿಯಾಗಿದ್ದು, ಈ ಮಹತ್ಕಾರ್ಯ ನೆರವೇರಿಸಿದ್ದಾರೆ. ಅವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ " ಎಂದು ಅಭಿಷೇಕ್ ಅಂಬರೀಶ್ ಅಭಿಮಾನ ವ್ಯಕ್ತಪಡಿಸಿದರು.

ಬಿಜೆಪಿ ಸೇರುವಾಗ ಬಗ್ಗೆ ಪ್ರತಿಕ್ರಿಯೆ
ಬಿಜೆಪಿ ಪಕ್ಷಕ್ಕೆ ಸೇರುವ ಬಗ್ಗೆ ಮಾತನಾಡಿದ ಅವರು, ಯಾವುದೇ ನಿರ್ಧಾರ ತೆಗೆದುಕೊಂಡರೂ ನಿಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡಿ ತೆಗೆದುಕೊಳ್ಳುತ್ತೇನೆ. ಯಾರಿಗೂ ಹೇಳಿದೆ ತೆಗೆದುಕೊಳ್ಳುವುದಿಲ್ಲ. ಸದ್ಯಕ್ಕೆ ನನ್ನ ಗಮನ ಚಿತ್ರರಂಗದ ಕಡೆಗೆ. ರಾಜಕೀಯಕ್ಕೆ ಸೇರುವ ಸಂದರ್ಭ ಬಂದಾಗ ಎಲ್ಲರಿಗೂ ಹೇಳಿಯೇ ತೆಗೆದುಕೊಳ್ಳುತ್ತೇನೆ. ಅದಕ್ಕೆಲ್ಲಾ ಸಮಯ ಸಂದರ್ಭ ಬರಬೇಕು ಎಂದು ತಿಳಿಸಿದರು.
ಎರಡು ದಿನಗಳ ಹಿಂದೆ ಇದೇ ವಿಷಯಕ್ಕೆ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ರನ್ನು ಮಗನ ರಾಜಕೀಯತ ಪ್ರವೇಶದ ಬಗ್ಗೆ ಕೇಳಿದ್ದಕ್ಕೆ, ಅಭಿಷೇಕ್ ಏನು ಚಿಕ್ಕ ಮಗುವಲ್ಲ, ಅವನು ಸ್ವಂತ ನಿರ್ಧಾರ ತೆಗೆದುಕೊಳ್ಳುವಷ್ಟು ಬೆಳೆದಿದ್ದಾನೆ ಎಂದು ತಿಳಿಸಿದ್ದರು.












Click it and Unblock the Notifications