ಕನಕಪುರ: ತಾಯಿ ಕಳೆದುಕೊಂಡಿದ್ದ ಮರಿಯಾನೆಗೆ ಆಶ್ರಯ ನೀಡಿದ ಗ್ರಾಮಸ್ಥರು
ರಾಮನಗರ, ಸೆಪ್ಟೆಂಬರ್ 9: ತಾಯಿಯನ್ನು ಕಳೆದುಕೊಂಡು ಅನಾಥವಾಗಿ ಮೂರ್ನಾಲ್ಕು ದಿನ ಆಹಾರವಿಲ್ಲದೆ ತಾಯಿಗಾಗಿ ಪರಿತಪಿಸಿ ನಿತ್ರಾಣಗೊಂಡಿದ್ದ ಮರಿ ಆನೆಗೆ ಅಶ್ರಯ ನೀಡಿ ರಕ್ಷಣೆ ಮಾಡುವ ಮೂಲಕ ಕನಕಪುರದ ಕೊಂಡನಗುಂದಿಗೆ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯಲ್ಲಿ ಕಾಡು ಪ್ರಾಣಿ ಹಾಗೂ ಮಾನವ ನಡುವಿನ ಸಂರ್ಘಷ ಹೆಚ್ಚಾಗಿರುವ ಸಮಯದಲ್ಲೇ ಕನಕಪುರ ತಾಲ್ಲೂಕಿನ ಕೊಂಡನಗುಂದಿ ಗ್ರಾಮಸ್ಥರು ತಾಯಿ ಕಳೆದುಕೊಂಡು ಅಶ್ರಯ ಅರಸಿ ಕಾಡಿನಿಂದ ನಾಡಿಗೆ ಬಂದ ಪುಟಾಣಿ ಆನೆ ಮರಿಗೆ ಅಶ್ರಯ ನೀಡಿ ಕಳೆದ ಮೂರು ದಿನಗಳಿಂದ ಪೋಷಣೆ ಮಾಡುತ್ತಿದ್ದಾರೆ.
ಕಾವೇರಿ ವನ್ಯ ಜೀವಿ ಅರಣ್ಯ ವಲಯದ ಸೋಲಿಗೆರೆ ಗ್ರಾಮದ ಸಮೀಪದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾಡಿಗೆ ಮೇಯಲು ಹೋಗಿದ್ದ ಜಾನುವಾರುಗಳ ಜೊತೆಯಲ್ಲಿ ನಿತ್ರಾಣಗೊಂಡ ಆನೆ ಮರಿ ಕೊಂಡನಗುಂದಿ ಗ್ರಾಮಕ್ಕೆ ಬಂದಿದೆ. ಗ್ರಾಮಸ್ಥರು ನಿತ್ರಾಣಗೊಂಡಿದ್ದ ಮರಿ ಆನೆಗೆ ಅಶ್ರಯ ನೀಡಿ ಪೋಷಣೆ ಮಾಡಿದ್ದಾರೆ ಹಾಗೂ ಅರಣ್ಯ ಇಲಾಖೆಗೆ ಮರಿ ಆನೆ ಗ್ರಾಮಕ್ಕೆ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದೀಗ ತಾಯಿಯನ್ನು ಕಳೆದುಕೊಂಡಿರುವ ಮರಿ ಆನೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಅಕ್ಕರೆಯ ಆರೈಕೆಯಲ್ಲಿ ಚೇತರಿಸಿಕೊಂಡು ಆರೋಗ್ಯವಾಗಿದ್ದು, ಗ್ರಾಮದ ಮಕ್ಕಳೊಂದಿಗೆ ತುಂಟಾಟ ಆಡುತ್ತಾ ಕಾಲ ಕಳೆಯುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ರಕ್ಷಣೆಯಲ್ಲಿರುವ ಮರಿ ಆನೆ ಆರೈಕೆಗೆ ಅರಣ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ಕೂಡ ಕೈ ಜೊಡಿಸಿದ್ದಾರೆ.
ಕಂದಕ್ಕೆ ಬಿದ್ದು ತಾಯಿ ಆನೆ ಸಾವು
ಹಸುಗಳೊಂದಿಗೆ ಮರಿ ಆನೆ ಗ್ರಾಮಕ್ಕೆ ಬಂದ ನಂತರ ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿಗಳು ತಾಯಿ ಆನೆಗಾಗಿ ಕಾವೇರಿ ವನ್ಯ ಜೀವಿ ವಲಯದಲ್ಲಿ ಹುಡುಕಾಡಿದಾಗ ತಾಯಿ ಆನೆ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ ತಾಯಿ ಇಲ್ಲದ 1 ತಿಂಗಳ ಮರಿ ಆನೆ ಎರಡ್ಮೂರು ದಿನಗಳ ಕಾಲ ಮಳೆ, ಚಳಿಯಲ್ಲಿಯೇ ಅಮ್ಮನಿಗಾಗಿ ಅಲೆದು ಹಸುಗಳೊಂದಿಗೆ ಗ್ರಾಮಕ್ಕೆ ಬಂದಿರುವುದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಮನದಟ್ಟಾಗಿದೆ.

ಕನಕಪುರ ಕಾವೇರಿ ವನ್ಯ ಜೀವಿ ವಲಯದ ಕುದುರೆ ದಾರಿ ಎಂಬ ಸ್ಥಳದ ಕಂದಕದಲ್ಲಿ ತಾಯಿ ಆನೆಯ ಮೃತದೇಹ ಪತ್ತೆಯಾಗಿದ್ದು . ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮೃತ ಆನೆಯ ಶವ ಪರೀಕ್ಷೆ ನಡೆಸಿ ಕಾಡಿನಲ್ಲೆ ಮೃತ ಆನೆಯ ಅಂತ್ಯಸಂಸ್ಕಾರ ನಡೆಸಿದ್ದಾರೆ.












Click it and Unblock the Notifications