ಚನ್ನಪಟ್ಟಣ; ಮಾನವ, ಪ್ರಾಣಿ ಸಂಘರ್ಷಕ್ಕೆ ಕಾಡಾನೆ ಬಲಿ
ರಾಮನಗರ, ಸೆಪ್ಟೆಂಬರ್ 10; ಇಂದು ವಿಘ್ನ ನಿವಾರಕ ಗಣೇಶನ ಹಬ್ಬ. ದೇಶದ ಹಲವು ಕಡೆ ಬಹಳ ವಿಜೃಂಭಣೆಯಿಂದ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇಂತಹ ದಿನದಂದೇ ಆನೆಯೊಂದು ಮೃತಪಟ್ಟಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಪ್ರಾಣ ಕಳೆದುಕೊಂಡಿದೆ.
ಗಣೇಶ ಹಬ್ಬದ ದಿನವೇ ಒಂಟಿ ಸಲಗವೊಂದು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. 40 ವರ್ಷದ ಗಂಡಾನೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ವಲಯದ ಮಲ್ಲಂಗೆರೆ ಗ್ರಾಮದ ಸಮೀಪದ ಎನ್. ಆರ್. ಕಾಲೋನಿ ಗ್ರಾಮದ ಪಕ್ಕದ ತೋಟದಲ್ಲಿ ಈ ಘಟನೆ ನಡೆದಿದೆ.
ವಿದ್ಯುತ್ ತಗುಲಿ ಆನೆ ಸಾವು, ಕರ್ನಾಟಕದಲ್ಲಿ ಆನೆ ಸಾವಿನ ಅಂಕಿ-ಅಂಶಗಳು
ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಒಂಟಿ ಸಲಗ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಅಕ್ರಮವಾಗಿ ತಂತಿ ಬೇಲಿಗೆ ಅಳವಡಿಸಿದ್ದ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ.
ಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯ
ಗುಂಪಾಗಿ ಆನೆಗಳು ಆಗಮಿಸಿದ್ದು, ಒಂದು ಆನೆಗೆ ವಿದ್ಯುತ್ ತಗುಲಿದ ತಕ್ಷಣ ಬೇರೆ ಆನೆಗಳು ಕಾಡಿನತ್ತ ವಾಪಸ್ ತೆರಳಿವೆ. ಅರಣ್ಯದಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ಆನೆಗಳು ದಾಂಗುಡಿ ಇಡುತ್ತಲೆ ಇರುತ್ತವೆ. ರೈತರ ಬೆಳೆಗಳನ್ನ ನಾಶ ಪಡಿಸುತ್ತಲೆ ಇರುತ್ತವೆ. ಹಾಗಾಗಿ ಕೆಲ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಜಮೀನಿನ ಸುತ್ತ ತಂತಿಗಳನ್ನು ಕಟ್ಟಿ ರಾತ್ರಿ ವೇಳೆ ಅದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡುತ್ತಾರೆ.
ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!
ಅಕ್ರಮವಾಗಿ ಬೆಳೆ ರಕ್ಷಣೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಆನೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಳೆದ ತಿಂಗಳ 25 ರಂದು ಕಬ್ಬಾಳು ಅರಣ್ಯದಲ್ಲಿ 35 ವರ್ಷದ ಗಂಡಾನೆ ಮೃತಪಟ್ಟಿತ್ತು. ಈ ಬೆನ್ನಲ್ಲೇ ಇಂದು ಮತ್ತೊಂದು ಆನೆ ಮೃತಪಟ್ಟಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿ. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಕೂಡ ಮಾಡಿದ್ದಾರೆ. ಗಣೇಶ ಚತುರ್ಥಿ ದಿನದಂದೆ ಗಜರಾಜ ಆಹಾರ ಆರಸಿ ನಾಡಿಗೆ ಬಂದು ಪ್ರಾಣ ಬಿಟ್ಟಿದೆ. ಗಂಡು ಆನೆ ಮೃತಪಟ್ಟಿರುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಮತ್ತು ಶ್ಯಾನಭೋಗನಹಳ್ಳಿ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಬೆಳೆ ನಾಶ ಮಾಡಿದ್ದ ಘಟನೆ ಕೆಲವು ತಿಂಗಳ ಹಿಂದೆ ನಡೆದಿತ್ತು. ಎರಡು ಗ್ರಾಮಗಳ 5-6 ರೈತರ ಜಮೀನುಗಳ ಮೇಲೆ 10 ಕಾಡನೆಗಳ ಹಿಂಡು ದಾಳಿ ಮಾಡಿದ್ದವು.
ಹೆಚ್ಚಿದ ಆನೆಗಳ ಹಾವಳಿ; ಚನ್ನಪಟ್ಟಣದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ದೊಡ್ಡನಹಳ್ಳಿಯಲ್ಲಿ ಸೆಪ್ಟೆಂಬರ್ 3ರಂದು ಜೋಡಿ ಆನೆಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದ್ದವು.
ರೈತರ ಮಾವಿನ ತೋಟಕ್ಕೆ ಆನೆಗಳು ನುಗ್ಗಿದ್ದವು. ಜನರು ಜೋರಾಗಿ ಕೂಗುತ್ತ ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನ ನಡೆಸಿದ್ದರು. ತೆಂಗಿನಕಲ್ಲು ಅರಣ್ಯದಿಂದ ಆನೆಗಳು ಆಗಮಿಸಿದ್ದವು.
ಆನೆಗಳ ಅಸಹಜ ಸಾವು; ದಕ್ಷಿಣ ಭಾರತದಲ್ಲಿ ಕೇರಳ, ತಮಿಳುನಾಡು ರಾಜ್ಯಗಳ ಜೊತೆ ಕರ್ನಾಟಕದಲ್ಲಿಯೂ ಆನೆಗಳ ಅಸಹಜ ಸಾವಿನ ಪ್ರಕರಣ ಹೆಚ್ಚುತ್ತಿದೆ. ಗುಂಡೇಟು, ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುವ ಆನೆಗಳ ಸಂಖ್ಯೆಯೇ ಅಧಿಕವಾಗಿದೆ.
ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಿದ್ಯುತ್ ಸ್ಪರ್ಶದಿಂದಲೇ ವರ್ಷಕ್ಕೆ 10 ರಿಂದ 15 ಆನೆಗಳು ಸಾವನ್ನಪ್ಪುತ್ತಿವೆ. ಆನೆಗಳ ಅಸಹಜ ಸಾವಿನ ಪ್ರಕರಣ ಪತ್ತೆಯಾದಾಗ ಎಫ್ಐಆರ್ ದಾಖಲಾಗುತ್ತದೆ. ಆದರೆ ಇಂತಹ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಸಂಖ್ಯೆ ಕಡಿಮೆ.
Recommended Video
ರಾಜ್ಯದಲ್ಲಿ 2014-15ರಲ್ಲಿ 15, 2015-16ರಲ್ಲಿ 8, 2016-17ರಲ್ಲಿ 6, 20217-18ರಲ್ಲಿ 10, 2018-19ರಲ್ಲಿ 9 ಮತ್ತು 2019-20ರಲ್ಲಿ 8 ಆನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿವೆ. ಕಳೆದ 5 ವರ್ಷದಲ್ಲಿ 16 ಆನೆಗಳು ಗುಂಡೇಟು ತಿಂದು ಪ್ರಾಣ ಬಿಟ್ಟಿವೆ.