ರಾಯಚೂರು ಜಿಲ್ಲೆಯ ಒಂದಿಂಚೂ ಜಾಗವನ್ನು ತೆಲಂಗಾಣಕ್ಕೆ ಬಿಟ್ಟುಕೊಡಲ್ಲ: ಶಿವರಾಜ್ ಪಾಟೀಲ್
ರಾಯಚೂರು ಆಗಸ್ಟ್ 18 : ರಾಯಚೂರು ಜಿಲ್ಲೆಯ ಒಂದಿಂಚೂ ಜಾಗವನ್ನು ತೆಲಂಗಾಣಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಹಿಂದೆ ನಾನು ನೀಡಿದ್ದ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟನೆ ಕೂಡಾ ನೀಡಿದ್ದೇನೆ ಎಂದು ರಾಯಚೂರು ಶಾಸಕ ಡಾ. ಶಿವರಾಜ ಪಾಟೀಲ ತಿಳಿಸಿದರು.
ತೆಲಂಗಾಣ ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಎನ್.ಎಸ್.ಬೋಸರಾಜರ ಕುಮ್ಮಕ್ಕಿನಿಂದ ಪ್ರಿಯಾಂಕಾ ಖರ್ಗೆ ಮಾತನಾಡುತ್ತಿದ್ದಾರೆ. ಬೇಕಿದ್ದರೆ ಅವರೇ ತೆಲಂಗಾಣಕ್ಕೆ ಸೇರಿಕೊಳ್ಳಲಿ. ನಾನು ನೀಡಿದ್ದ ಹೇಳಿಕೆ ಆಧರಿಸಿ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಸದನದಲ್ಲೇ ಪ್ರಸ್ತಾಪಿಸಿ ಮಾತನಾಡಿದ್ದರು. ಆ ಕೂಡಲೇ ನಾನು ತೆಲಂಗಾಣದ ನಾರಾಯಣ ಪೇಟ್ಗೆ ಹೋಗಿ ಅವರ ಹೇಳಿಕೆ ಖಂಡಿಸಿ ಮಾತನಾಡಿ ಬಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ನವರಿಗೆ ಮಾತನಾಡುವುದಕ್ಕೆ ಬೇರೆ ವಿಷಯಗಳಿಲ್ಲ. ಹೀಗಾಗಿ ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ತೆಲಂಗಾಣದವರು ಏನಾದರೂ ಹೇಳಿಕೊಳ್ಳಲಿ, ರಾಯಚೂರು ಜಿಲ್ಲೆ ಕರ್ನಾಟಕ ಅವಿಭಾಜ್ಯ ಅಂಗವಾಗಿದೆ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದರು.

ಶಾಸಕರ ಹೇಳಿಕೆ ವಿವಾದ:
2021 ಅಕ್ಟೋಬರ್ 7 ರಂದು ರಾಯಚೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಪಶುಸಂಗೋಪನೆ ಸಚಿವ ಪ್ರಭು ಚೌವಾಣ ಅವರ ಸಮ್ಮುಖ ಮಾತನಾಡಿದ್ದ ಶಾಸಕ ಡಾ.ಶಿವರಾಜ ಪಾಟೀಲ, " ಅಭಿವೃದ್ಧಿ ವಿಷಯದಲ್ಲಿ ರಾಯಚೂರು ಜಿಲ್ಲೆಯನ್ನು ಮೊದಲಿನಿಂದಲೂ ಕಡೆಗಣಿಸಲಾಗುತ್ತಿದೆ. ಉತ್ತರ ಕರ್ನಾಟಕವೆಂದರೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಎಂದು ಪರಿಗಣಿಸಲಾಗಿದೆ. ಕಲ್ಯಾಣ ಕರ್ನಾಟಕವೆಂದರೆ ಬೀದರ್, ಕಲಬುರ್ಗಿ ಎರಡೇ ಜಿಲ್ಲೆಗಳು ಕಣ್ಣಿಗೆ ಕಾಣುತ್ತವೆ. ರಾಯಚೂರು ಬೇಡವಾಗಿದ್ದರೆ ತೆಲಂಗಾಣಕ್ಕೆ ಸೇರಿಸಿಬಿಡಿ" ಎಂದು ಮಾತನಾಡಿದ ವಿಡಿಯೊ ವೈರಲ್ ಆಗಿತ್ತು.
ತೆಲಂಗಾಣದ ಪತ್ರಿಕೆಗಳು ಶಾಸಕರ ಹೇಳಿಕೆ ಆಧರಿಸಿ ಸುದ್ದಿಗಳನ್ನು ಪ್ರಕಟಿಸಿದ್ದವು. ತೆಲಂಗಾಣಕ್ಕೆ ಸೇರಬೇಕಾದ ಕರ್ನಾಟಕದ ಗಡಿ ಪ್ರದೇಶಗಳ ಬಗ್ಗೆ ರಾಜ್ಯ ಸರಕಾರವು ಹಕ್ಕು ಮಂಡಿಸಲು ಇದು ಸಕಾಲ. ರಾಯಚೂರು ತೆಲಂಗಾಣದ ಅಭಿವೃದ್ಧಿಯ ಭಾಗವಾಗಲು ಸಿದ್ಧವಿದೆ ಎಂದು ಬರೆದಿದ್ದವು. ಈ ಘಟನೆ ಬೆನ್ನಲ್ಲೇ ಶಾಸಕರ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೂಡಲೇ ಎಚ್ಚೆತ್ತ ಶಾಸಕ ಡಾ.ಶಿವರಾಜ ಪಾಟೀಲ ಕ್ಷಮೆಕೋರಿ ಸ್ಪಷ್ಟನೆ ನೀಡಿದ್ದರು. ಹತ್ತು ತಿಂಗಳುಗಳ ಬಳಿಕ ವಿವಾದಿತ ಹೇಳಿಕೆ ಮತ್ತೆ ಪ್ರಸ್ತಾಪಕ್ಕೆ ಬಂದಿದೆ.
ಕೆಸಿಆರ್ ಹೇಳಿಕೆ ಏನು?
ನಮ್ಮ ಕಲ್ಯಾಣ ಕಾರ್ಯಕ್ರಮಗಳನ್ನು ನೋಡಿರುವ ರಾಯಚೂರು ಜಿಲ್ಲೆಯ ಜನರು ತೆಲಂಗಾಣಕ್ಕೆ ಸೇರಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತಿದ್ದಾರೆ" ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ವಿಕಾರಾಬಾದ್ನಲ್ಲಿ ಬುಧವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆ ಇಡೀ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕರು ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.












Click it and Unblock the Notifications