ರಾಯಚೂರನ್ನು ಏಮ್ಸ್ಗೆ ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ: ಸಿಎಂ ಬಸವರಾಜ ಬೊಮ್ಮಾಯಿ
ರಾಯಚೂರು, ಆಸ್ಟ್ 27: ಹಿಂದುಳಿದಿರುವಿಕೆ, ಮಹಾತ್ವಕಾಂಕ್ಷಿ ಜಿಲ್ಲೆ ಮತ್ತು ಅಪೌಷ್ಠಿಕತೆ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉನ್ನತ ಆರೋಗ್ಯ ಸಂಸ್ಥೆ ಅಗತ್ಯವಾಗಿದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಮೀಕ್ಷೆ ನಡೆಸಿ, ಏಮ್ಸ್ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಸವರಾಜ ಬೊಮ್ಮಾಯಿ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಸಿರಿಧಾನ್ಯ ಮೇಳ ಕಾರ್ಯಕ್ರಮ ಉದ್ಘಾಟನೆ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಏಮ್ಸ್ ಕುರಿತು ಚರ್ಚಿದ್ದೇನೆ. ರಾಯಚೂರು ಜಿಲ್ಲೆಯ ಸಮಸ್ಯೆಗಳ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ. ಈ ಜಿಲ್ಲೆ ಮಹಾತ್ವಕಾಂಕ್ಷಿ ಜಿಲ್ಲೆಗಳಲ್ಲೊಂದಾಗಿದೆ. ಅಲ್ಲದೆ, ಹಿಂದುಳಿದ ಪ್ರದೇಶವಾಗಿದ್ದು, ಅಪೌಷ್ಟಿಕತೆ ಸಮಸ್ಯೆ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಆರೋಗ್ಯ ಸಂಸ್ಥೆಯ ಅಗತ್ಯವಿದೆ. ಕಾರಣ ಏಮ್ಸ್ ಸ್ಥಾಪನೆ ಸಂದರ್ಭದಲ್ಲಿ ಇವುಗಳನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ ಎಂದರು.
13,000 ಶಾಲೆಗಳಿಂದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪಿಎಂ ಮೋದಿಗೆ ಪತ್ರ
ಕೇಂದ್ರಕ್ಕೆ ಶಿಫಾರಸ್ಸು ಮಾಡುವಾಗ ರಾಜ್ಯ ಸರ್ಕಾರ ಜಿಲ್ಲೆಯ ಹೆಸರು ಮಾತ್ರ ಶಿಫಾರಸ್ಸು ಮಾಡುವುದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಕೇಳಲಾಗಿದೆ. 371 (ಜೆ) ವಿಶೇಷ ಸ್ಥಾನಮಾನದ ಸೌಲಭ್ಯವನ್ನು ಪರಿಗಣಿಸುವಂತೆಯೂ ಕೇಳಲಾಗಿದೆ ಎಂದರು.
ತೆಲಂಗಾಣ ಸೇರ್ಪಡೆ ವಿವಾದಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಕೆಸಿಆರ್ ಹೇಳಿಕೆ ಹಾಸ್ಯಾಸ್ಪದವಾಗಿದೆ. ರಾಜ್ಯ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಲಾಗಿದೆ. ತೆಲಂಗಾಣ ಹಿಂದುಳಿದ ಜಿಲ್ಲೆ ಆಗಿದ್ದರಿಂದಲೇ ಪ್ರತ್ಯೇಕ ರಾಜ್ಯವನ್ನಾಗಿ ಸ್ಥಾಪಿಸಲಾಗಿದೆ. ಇಂದಿಗೂ ಸಹ ಅಲ್ಲಿನ ಜಿಲ್ಲೆಗಳು ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ ಅವರು, ಈ ಸಮಸ್ಯೆಗಳಿಂದ ಜನರನ್ನು ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಬ್ರಿಜೇಶ್ ಪಾಟೀಲ್ ವರದಿ ಲಭ್ಯವಾಗಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 525 ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ 1.36 ಲಕ್ಷ ಎಕರೆ ಜಮೀನು ಮುಳುಗಡೆ ಆಗಲಿದೆ. ಅನೇಕ ಗ್ರಾಮಗಳನ್ನು ಸ್ಥಳಾಂತರಿಸಬೇಕಾಗಿದೆ. ಇದಕ್ಕಾಗಿ 5 ಸಾವಿರ ಕೋಟಿ ನೀಡಲಾಗುತ್ತದೆ. ಜಲಾಶಯ ಎತ್ತರ ಮತ್ತು ಗ್ರಾಮಗಳ ಸ್ಥಳಾಂತರ ಏಕಕಾಲಕ್ಕೆ ನಡೆಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಜಿಲ್ಲೆಯಿಂದ ಗುಳೆ ತಪ್ಪಿಸಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಕೈಗೊಳ್ಳಲಿದೆ. ಇದರ ಭಾಗವಾಗಿ ಗಾರ್ಮೆಂಟ್ ಉದ್ಯಮಕ್ಕೆ ಉತ್ತೇಜನ ನೀಡಲಾಗುತ್ತದೆ. ರಾಜ್ಯದಿಂದ ಆರಂಭಿಸಲು ಉದ್ದೇಶಿಸಿದ ಟೆಕ್ಸ್ ಟೈಲ್ಸ್ ಪಾರ್ಕ್ಅನ್ನು ರಾಯಚೂರಿನಲ್ಲಿ ಸ್ಥಾಪಿಸಲು ಚಿಂತನೆ ನಡೆದಿದೆ ಎಂದರು.
ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸಲು ಅಗತ್ಯ ನೆರವು
ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಗೆ ಒಂದು ಸಿರಿಧಾನ್ಯ ಗೊತ್ತುಪಡಿಸಿ ಬೆಳೆಯಬೇಕು. ಪ್ರತಿ ಜಿಲ್ಲೆಯಲ್ಲಿ ಸಂಸ್ಕರಣೆ ಘಟಕ ಸ್ಥಾಪಿಸಲಾಗುವುದು. ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸಲು ಕೆಪೆಕ್ ಸಂಸ್ಥೆಯ ಮೂಲಕ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
"ನಾನು ಕಳೆದ 30 ವರ್ಷಗಳಿಂದ ಅಕ್ಕಿ ಬದಲು ಸಿರಿಧಾನ್ಯವನ್ನೇ ಸೇವಿಸುತ್ತಾ ಬಂದಿದ್ದೇನೆ. ಇದನ್ನು ಎಲ್ಲಕಡೆಗೂ ಪಸರಿಸಲು ಉತ್ಸುಕನಾಗಿದ್ದೇನೆ. ಶೀಘ್ರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ವ್ಯಾಪಾರ ಮೇಳ ಮಾಡಲಾಗುವುದು. ಈ ಮೇಳದ ನಂತರ 'ರಾಯಚೂರು ಸಿರಿಧಾನ್ಯ ಘೋಷಣೆ'ಗಳನ್ನು ಪ್ರಕಟಿಸುವ ಕೆಲಸವನ್ನು ಕುಲಪತಿ ಮಾಡಬೇಕು. ಸಿರಿಧಾನ್ಯಗಳ ಬಗ್ಗೆ ಗೊತ್ತಿದೆ. ಆದರೆ ಮುಂದೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದರ ದಾರಿ ಸ್ಪಷ್ಟವಾಗಬೇಕಿದೆ" ಎಂದು ಹೇಳಿದರು.