ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಶ್ರೀಗಂಧ ಮರಗಳ ಕಳವು
ಲಿಂಗಸುಗೂರು, ಜನವರಿ 05 : ಅದು ಚಿನ್ನದ ಗಣಿಯ ಅಧಿಸೂಚಿತ ಪ್ರದೇಶ. ಆ ಪ್ರದೇಶದಲ್ಲಿ ಹೇರಳವಾಗಿ ಶ್ರೀಗಂಧದ ಮರಗಳು ಬೆಳೆಯುತ್ತವೆ. ಅಷ್ಟೇ ಪ್ರಮಾಣದಲ್ಲಿ ರಾಜಾರೋಷವಾಗಿ ಶ್ರೀಗಂಧದ ಮರಗಳು ಕಳ್ಳತನವಾಗುತ್ತಿದೆ. ಇಷ್ಟಾದರೂ ಯಾವುದೇ ಅಧಿಕಾರಿಗಳು ಈ ಕುರಿತು ಗಮನಹರಿಸುತ್ತಿಲ್ಲ. ಅಲ್ಲದೇ ಶ್ರೀಗಂಧದ ಮರಗಳಿಂದ ಸ್ಥಳೀಯ ನಿವಾಸಿಗಳು ಜೀವಭಯ ಎದುರಿಸುತ್ತಿದ್ದಾರೆ.
ನೆಲಕ್ಕೆ ಬಿದ್ದಿರೋ ಶ್ರೀಗಂಧದ ಮರ: ಹೆಚ್ಚಾದ ಕಳ್ಳ ಸಾಗಣೆದಾರರ ಹಾವಳಿ. ದಿನದಿಂದ ದಿನಕ್ಕೆ ಕಳ್ಳತನವಾಗುತ್ತಿವೆ ಮರಗಳು. ಕಣ್ಣಿದ್ದು ಕುರುಡಾದ ಅಧಿಕಾರಿಗಳು. ಹೌದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮ ಚಿನ್ನದ ಗಣಿಯಿಂದ ಪ್ರಖ್ಯಾತಿ ಪಡೆದಿದೆ. ಅದೇ ಹಟ್ಟಿ ಗ್ರಾಮ ಸೇರಿದಂತೆ ಸುತ್ತಮುತ್ತ ಹೇರಳವಾಗಿ ಶ್ರೀಗಂಧದ ಮರಗಳು ಬೆಳೆಯುತ್ತವೆ. ಕಣ್ಣು ಹಾಯಿಸಿದಲ್ಲೆಲ್ಲ ನಿಸರ್ಗದತ್ತವಾಗಿ ಶ್ರೀಗಂಧದ ಮರಗಳು ಬೆಳೆದು ನಿಂತಿವೆ.
ಜೊತೆಗೆ ಮರ ಕಳ್ಳ ಸಾಗಣೆದಾರರ ಹಾವಳಿಯೂ ಹೆಚ್ಚಾಗುತ್ತಿದೆ. ರಾಜಾರೋಷವಾಗಿ ಹಟ್ಟಿ ಗ್ರಾಮಕ್ಕೆ ನುಗ್ಗುವ ಕಳ್ಳರು ಶ್ರೀಗಂಧದ ಮರಗಳನ್ನ ಕತ್ತರಿಸಿಕೊಂಡು ಹೋಗುತ್ತಿದ್ದಾರೆ. ಎರಡು ದಿನಗಳ ಹಿಂದೆ ಮಧ್ಯರಾತ್ರಿ ಬಂದ 8 ಜನರ ತಂಡ ಬೃಹತ್ ಶ್ರೀಗಂಧದ ಮರವನ್ನ ಕತ್ತರಿಸಿಕೊಂಡು ಹೋಗಿದೆ. ಶ್ರೀಗಂಧದ ಮರದ ಬಳಿಯಿದ್ದ ಮನೆಯವರಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಹಟ್ಟಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂದಾಜು ಸಾವಿರಕ್ಕೂ ಹೆಚ್ಚು ಶ್ರೀಗಂಧದ ಮರಗಳು ನೈಸರ್ಗಿಕವಾಗಿ ಬೆಳೆದಿವೆ. ಇದು ಮರ ಕಳ್ಳ ಸಾಗಣೆದಾರರಿಗೆ ವರವಾಗಿದೆ. ಹಟ್ಟಿ ಗ್ರಾಮವು ಚಿನ್ನದ ಗಣಿಯ ಅಧಿಸೂಚಿತ ಪ್ರದೇಶವಾದ್ರೂ ಶ್ರೀಗಂಧದ ಮರಗಳ ಕಳ್ಳತನಕ್ಕೆ ಕೊಂಚವೂ ಬ್ರೇಕ್ ಬೀಳುತ್ತಿಲ್ಲ. ಕಳೆದ ನಾಲ್ಕು ತಿಂಗಳ ಅಂತರದಲ್ಲಿ ಸುಮಾರು 6 ಶ್ರೀಗಂಧದ ಮರಗಳು ಕಳ್ಳತನವಾಗಿವೆ.
ಅಷ್ಟೇ ಅಲ್ಲ ಹಟ್ಟಿ ಚಿನ್ನದ ಗಣಿಯ ವಸತಿ ಗೃಹ ಹಾಗೂ ಅಧಿಕಾರಿಯೊಬ್ಬರ ಮನೆಯ ಆವರಣದಲ್ಲಿದ್ದ ಶ್ರೀಗಂಧದ ಮರವೂ ಕಳವುವಾಗಿದೆ. ಎಷ್ಟೇ ಶ್ರೀಗಂಧದ ಮರಗಳು ಕಳವಾದ್ರೂ ಪ್ರಕರಣ ಮಾತ್ರ ದಾಖಲಾಗುತ್ತಿಲ್ಲ. ಹಟ್ಟಿ ಚಿನ್ನದ ಗಣಿಯ ಆಡಳಿತ ಮಂಡಳಿ ಹಾಗೂ ಅರಣ್ಯ ಇಲಾಖೆ ಇತ್ತ ತಲೆ ಕೂಡ ಹಾಕುತ್ತಿಲ್ಲ.
ಪದೇ ಪದೇ ಹಟ್ಟಿ ಗ್ರಾಮದಲ್ಲಿ ಶ್ರೀಗಂಧದ ಮರಗಳು ಕಳವಾಗುತ್ತಿರೋದು ಭದ್ರತಾಲೋಪವನ್ನ ಎತ್ತಿ ತೋರಿಸುತ್ತಿದೆ. ಹಟ್ಟಿ ಚಿನ್ನದ ಗಣಿಯ ಅಧಿಸೂಚಿತ ಪ್ರದೇಶ ಹಾಗೂ ಗಣಿಯಿಂದ ಕೂಗಳೆತಯ ದೂರದಲ್ಲೇ ಶ್ರೀಗಂಧದ ಮರಗಳು ಕಳ್ಳತನ ಆಗಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಶ್ರೀಗಂಧದ ಮರಗಳಿಂದ ಹಟ್ಟಿ ನಿವಾಸಿಗಳಿಗೆ ಜೀವ ಭಯ ಕಾಡುತ್ತಿದೆ. ಮರ ಕಳ್ಳ ಸಾಗಣೆಗೆ ಬರೋರು ಜನರಿಗೆ ಹೆದರಿಸುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.