ರಾಯಚೂರು: ತುಂಗಭದ್ರಾ ನದಿಯಲ್ಲಿ ಕೊಚ್ಚಿ ಅರ್ಚಕ ಸಾವು
ರಾಯಚೂರು ಜುಲೈ 15: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಅರ್ಚಕರೊಬ್ಬರು ಕಾಲುಜಾರಿ ನದಿಗೆ ಬಿದ್ದು ಕೊಚ್ಚಿಹೋಗಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ನಡೆದಿದೆ. ಕೊಚ್ಚಿ ಹೋಗಿರುವ ವ್ಯಕ್ತಿಯನ್ನು ಲಿಂಗಪ್ಪ (50) ಎಂದು ಗುರುತಿಸಲಾಗಿದೆ. ಇವರು ಕರಿವಿಶ್ವೇಶ್ವರ ದೇವಸ್ಥಾನದ ಅರ್ಚಕರಾಗಿದ್ದರು. ತುಂಗಭದ್ರ ನದಿಯಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ಕಾಲ ಜಾರಿ ಕೊಚ್ಚಿ ಹೋಗಿದ್ದಾರೆ. ಇವರು ದೇವಸ್ಥಾನದ ಅರ್ಚಕ ಎಂದು ತಿಳಿದು ಬಂದಿದೆ. ಸದ್ಯ ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.
ಕಳೆದ ಕೆಲ ದಿನಗಳಿಂದ ರಾಯಚೂರಿನಲ್ಲಿ ತೀವ್ರ ಮಳೆಯಾಗುತ್ತಿದ್ದು ಬಿಸಿಲು ನಾಡಿ ಮಂದಿ ಹೈರಾಣಾಗಿದ್ದಾರೆ. ಬೆಂಬಿಡದೆ ಸುರಿಯುತ್ತಿರುವ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆಗಳು ಮನೆಗಳಿಗೆ ನೀರು ನುಗ್ಗಿದ ವರದಿಗಳಾಗಿವೆ. ಮಾತ್ರವಲ್ಲದೇ ಗ್ರಾಮಗಳಿಗೆ ಸಂಪರ್ಕಕ ಕಲ್ಪಸುವ ಕಿರಿದಾದ ರಸ್ತೆಗಳು ಮೇಲೆ ಪ್ರವಾಹದಂತೆ ನೀರು ರಬಸದಿಂದ ಹರಿಯುತ್ತಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರದ ಪುಣೆ, ಸತಾರಾ ಮತ್ತು ಕೊಲ್ಹಾಪುರದಲ್ಲಿ ಮುಂದಿನ ಮೂರು ದಿನಗಳವರೆಗೆ ರೆಡ್ ಅಲರ್ಟ್ ನೀಡಲಾಗಿದೆ. ಕಳೆದ ಎರಡು, ಮೂರು ದಿನಗಳಿಂದ ನಾರಾಯಣಪುರ, ಆಲಮಟ್ಟಿ ಮೇಲ್ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಜಲಾಶಯದ ನೀರು ಹೊರಬರುವುದರಿಂದ ಲಿಂಗಸೂಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ಪಾತ್ರದ ಜನರು ತೀವ್ರ ಆತಂಕಕ್ಕೆ ಗುರಿಯಾಗುವಂತೆ ಮಾಡಿದೆ.