ರಾಯಚೂರಿನಲ್ಲಿ ವಿದ್ಯಾರ್ಥಿನಿಯ ನಿಗೂಢ ಸಾವು, ಕಟ್ಟೆಯೊಡೆದ ಆಕ್ರೋಶ
ರಾಯಚೂರು, ಏಪ್ರಿಲ್ 19: ರಾಯಚೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳ ಅನುಮಾನಾಸ್ಪದ ಸಾವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ಲೋಕಸಭೆ ಚುನಾವಣೆಯ ಸದ್ದಿನಲ್ಲಿ ಸುದ್ದಿಯೇ ಆಗದಿದ್ದ ಈ ಘಟನೆ, ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದ ನಂತರ ಬೆಳಕಿಗೆ ಬಂದಿದೆ.
ಏಪ್ರಿಲ್ 16 ರಂದು 23 ವರ್ಷ ವಯಸ್ಸಿನ ಯುವತಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ರಾಯಚೂರಿನ ಮಾಣಿಕ್ ಪ್ರಭು ದೇವಾಲಯದ ಗುಡ್ಡದ ಮರವೊಂದರಲ್ಲಿ ಪತ್ತೆಯಾಗಿತ್ತು. ರಾಯಚೂರಿನ ಐಡಿಎಸ್ ಎಂಟಿ ಬಡಾವಣೆಯ ಈ ವಿದ್ಯಾರ್ಥಿನಿ, ಏಪ್ರಿಲ್ 15 ರಂದು ಕಾಲೇಜಿಗೆಂದು ತೆರಳಿದವಳು ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ತಂದೆ-ತಾಯಿ ಎಲ್ಲೆಡೆಯೂ ಹುಡುಕಿದಾಗ ದೇವಾಲಯದ ಬಳಿ ಆಕೆಯ ಶವ ಪತ್ತೆಯಾಗಿದೆ.
ಆದರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂಥ ದುರ್ಬಲ ಮನಸ್ಸಿನ ಹುಡುಗಿಯಲ್ಲ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ದೂರಿ ಆಕೆಯ ತಂದೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆಕೆಯ ದೇಹದಲ್ಲಿ ಸಂಪೂರ್ಣ ಸುಟ್ಟ ಗಾಯಗಳೂ ಪತ್ತೆಯಾಗಿದ್ದು, ಆಕೆ ಗುರುತಿಸಲಾಗದಷ್ಟು ವಿಕಾರ ಸ್ಥಿತಿಯಲ್ಲಿದ್ದಳು. ಆಕೆಯನ್ನು ಹಿಂಸಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆಯೆಂದು ದೂರಲಾಗುತ್ತಿದ್ದು ಸಾಮಾಜಿಕ ಮಾಧ್ಯಮಗಳಲ್ಲಿಆಕೆಗೆ ನ್ಯಾಯ ನೀಡಿ ಎಂದು ಆಕ್ರೋಶ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಆಕೆಯ ಸಾವಿಗೆ ಯಾರು ಕಾರಣ?
"ಇಂದು ನಿನ್ನ ಹುಟ್ಟಿದ ದಿನ. ಆದರೆ ನಾವು ನಿನ್ನೆ ನಿನ್ನ ಅಂತ್ಯ ಕ್ರಿಯೆ ಮುಗಿಸಿ ಬಂದು ಕುಳಿತಿದ್ದೇವೆ. ನೀವು ಆತ್ಮಹತ್ಯೆ ಮಾಡಿಕೊಂಡಿದ್ದೆ ಎಂದು ವದಂತಿ ಹಬ್ಬಿದೆ. ನೀನು ಬರೆದ ಡೆತ್ ನೋಟ್ ನಲ್ಲಿ ನಾನು ಇಂಜಿನಿಯರಿಂಗ್ ನ ಕೆಲವು ವಿಷಯಗಳಲ್ಲಿ ಫೇಲ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆಸಿದ್ದಾರೆ. ಆದರೆ ನೀನು ಯಾವುದರಲ್ಲೂ ಫೇಲ್ ಆಗಿರಲಿಲ್ಲ. ಸರ್ಕಾರ ಸಂತ್ರಸ್ತೆಯ ಕುಟುಂಬದ ಪರ ನಿಲ್ಲಬೇಕು, ನ್ಯಾಯ ನೀಡಬೇಕು. ನಮಗೆ ಈ ಘಟನೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಸಂತ್ರಸ್ಥೆಯ ಅಕ್ಕ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಮಾಧ್ಯಮಗಳು ಸುದ್ದಿ ಮಾಡಲಿಲ್ಲ!
ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜೊತೆಗೆ ಅವಳ ಬಳಿಯೇ ಡೆತ್ ನೋಟ್ ಬರೆಸಿಕೊಳ್ಳಲಾಗಿದೆ. ಆದರೆ ಇದನ್ನು ಪೇಯ್ಡ್ ಮಾಧ್ಯಮಗಳು ಪ್ರಸಾರ ಮಾಡಿಲ್ಲ. ಘಟನೆಯಾಗಿ ಎರಡು ದಿನವಾದರೂ ಇದು ಸುದ್ದಿಯಾಗಿಲ್ಲ ಎಂದು ಅಮೃತ್ ಗೌಡ ಎಂಬುವವರು ದೂರಿದ್ದಾರೆ.

ಇಂಥವರನ್ನು ಎನ್ ಕೌಂಟರ್ ಮಾಡಿ ಸಾಯಿಸಬೇಕು
ಅಪರಾಧಿಗಳನ್ನು ಪೊಲೀಸರು ಹಿಡಿದು ಶಿಕ್ಷಿಸಬಹುದು. ಆದರೆ ಇಂಥ ಘಟನೆಗಳನ್ನು ನಾವು ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಇಂಥ ಘಟನೆಗಳು ನಡೆಯಬಾರದು ಎಂದರೆ ಒಂದಷ್ಟು ಅಪರಾಧಿಗಳಿಗೆ ಅಪರಾಧ ಸಾಬೀತಾದ ಕೂಡಲೇ ಕಠಿಣ ಶಿಕ್ಷೆ ನೀಡಬೇಕು. ಎನ್ ಕೌಂಟರ್ ಮಾಡಿ ಸಾಯಿಸಬೇಕು ಎಂದು ಶಿವಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯದಲ್ಲಿ ಕರ್ನಾಟಕ ಬ್ಯುಸಿ!
ಕರ್ನಾಟಕವು ರಾಜಕೀಯದ ಕೆಸರೆರಚಾಟದಲ್ಲಿ ಬ್ಯುಸಿಯಾಗಿದೆ. ಆದರೆ ನಾವಿಲ್ಲಿ ನಮ್ಮ ಒಬ್ಬ ಮಗಳನ್ನು ಕಳೆದುಕೊಂಡಿದ್ದೇವೆ. ಆಕೆಯನ್ನು ಬರ್ಬರವಾಗಿ ಹಿಂಸಿಸಿ, ಸುಟ್ಟು ಕೊಲ್ಲಲಾಗಿದೆ. ಆದರೆ ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿಯೇ ಇಲ್ಲ! ದಯವಿಟ್ಟು ಇದನ್ನು ಪ್ರಸಾರ ಮಾಡಿ, ಮಧುವಿಗೆ ನ್ಯಾಯ ನೀಡಿ ಎಂದು ಯಶಸ್ವಿ ಎಂಬುವವರು ಮನವಿ ಮಾಡಿದ್ದಾರೆ.

ನೀವು ನಿದ್ದೆ ಮಾಡೋಲ್ಲ!
ಆಕೆಗೆ ನ್ಯಾಯ ನೀಡಿ. ನಿಮ್ಮ ತಂಗಿಯೋ, ಮಗಳೋ ಆ ಸ್ಥಿತಿಯಲ್ಲಿದ್ದಾಳೆ ಎಂದುಕೊಳ್ಳಿ. ನೀವು ಖಂಡಿತ ನಿದ್ರಿಸೋಲ್ಲ ಎಂದು ಆಯೇಶಾ ಫೆರಿಹಾ ಟ್ವೀಟ್ ಮಾಡಿದ್ದಾರೆ.












Click it and Unblock the Notifications