ಕಬ್ಬನ್ ಪಾರ್ಕ್ ನಿಲ್ದಾಣ: ನಮ್ಮ ಮೆಟ್ರೋ ಕೆಟ್ಟು ನಿಲ್ತಿರೋದ್ಯಾಕೆ? ತನಿಖೆ ನಡೆಸಿದ BMRCLಗೆ ಗೊತ್ತಾದ ಸತ್ಯ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಹಾಗೂ ಇನ್ನಿತರ ವಿಚಾರಗಳಿಗೆ ಹೆಚ್ಚು ಸದ್ದು ಮಾಡುತ್ತಿತ್ತು. ಇತ್ತೀಚೆಗೆ ನಮ್ಮ ಮೆಟ್ರೋ ಸೇವೆಯಲ್ಲಿನ ಲೋಪದೋಷಗಳಿಂದ ಹೆಚ್ಚು ಸುದ್ದಿಯಾಗುತ್ತಿದೆ. ಮೂರು ದಿನಗಳ ಹಿಂದಷ್ಟೇ ನಡೆದಿದ್ದ ತಾಂತ್ರಿಕ ದೋಷದ ಬೆನ್ನಲ್ಲೆ ಗುರುವಾರ ಸಂಜೆ ರೈಲಿನ ಬಾಗಿಲು ಮುಚ್ಚದೇ ತೊಂದರೆ ಆಗಿತ್ತು. ಇದರಿಂದ ಹಲವು ನಿಮಿಷಗಳ ಕಾಲ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಮಹತ್ವದ ಮಾಹಿತಿ ಗೊತ್ತಾಗಿದೆ.
ನಿನ್ನೆ ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದ ರೈಲಿನ ಬಾಗಿಲು ಸರಿಯಾಗಿ ಮುಚ್ಚಲಿಲ್ಲ. ಈ ಹಿನ್ನೆಲೆಯಲ್ಲಿ ಸಂಜೆ 7:36 ರಿಂದ 7:54 ಗಂಟೆಯವರೆಗೆ ಮೆಟ್ರೋ ಸೇವೆಯಲ್ಲಿ, ತಾತ್ಕಾಲಿಕ ವ್ಯತ್ಯಯ ಉಂಟಾಗಿತ್ತು. ಈ ಘಟನೆಯ ಕುರಿತು ನಡೆಸಲಾದ ಪ್ರಾಥಮಿಕ ತನಿಖೆಯಲ್ಲಿ ಘಟನೆಯ ಕಾರಣ ಪತ್ತೆಯಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ನಡೆಸಿದ ತನಿಖೆಯಲ್ಲಿ, ಪ್ರಯಾಣಿಕರೊಬ್ಬರ ಲೋಹದ ಸರ (Metal Chain) ರೈಲಿನ ಬಾಗಿಲಿನ ಡೋರ್ ಗೈಡ್ವೇ (Door Guideway) ಯಲ್ಲಿ ಸಿಲುಕಿಕೊಂಡಿದ್ದರಿಂದ ಬಾಗಿಲುಗಳು ಸರಿಯಾಗಿ ಮುಚ್ಚಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಕಾರ್ಯಾಚರಣೆಯಲ್ಲಿ ತಾತ್ಕಾಲಿಕ ವಿಳಂಬ ಉಂಟಾಗಿತ್ತು. ಇದರ ಹೊರತು ರೈಲಿನಲ್ಲಿ ಯಾವುದೇ ದೋಷ ಪತ್ತೆ ಆಗಿಲ್ಲ ಎಂದು ದೃಢಪಡಿಸಿದ್ದಾರೆ.
ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯ ಸಮಗ್ರ ತಾಂತ್ರಿಕ ಪರಿಶೀಲನೆಯ ನಂತರ, ರೈಲಿನ ಉಪಕರಣಗಳಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಸುರಕ್ಷಿತ, ವಿಶ್ವಾಸಾರ್ಹ ಹಾಗೂ ನಿರಂತರ ಮೆಟ್ರೋ ಸೇವೆಗಳನ್ನು ಒದಗಿಸಲು ಬದ್ಧರಾಗಿದ್ದೇವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೇಳಿದರು.
ಪ್ರಯಾಣಿಕರೊಬ್ಬರ ಮೆಟಲ್ ಚೈನ್ ಸಿಲುಕಿ ಸಮಸ್ಯೆ
ಸಂಜೆ 7:36 ರಿಂದ 7:54 ಗಂಟೆಯವರೆಗೆ ಕಬ್ಬನ್ ಪಾರ್ಕ್ನಲ್ಲಿ ರೈಲಿನ ಬಾಗಿಲು ಹಾಕಲಾಗಲಿಲ್ಲ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಪ್ರಯಾಣಿಕರನ್ನು ಕೆಳಗೆ ಇಳಿಸಿದರು. ಕೆಲವು ನಿಮಿಷಗಳ ಬಳಿಕ ಸಮಸ್ಯೆ ಬಗಹರಿಸಿದ ತಜ್ಞರು ಸುಗಮ ರೈಲು ಸಂಚಾಕ್ಕೆ ಅವಕಾಶ ಮಾಡಿಕೊಟ್ಟರು. ಅಲ್ಲಿಯವರೆಗೆ ಸುಮಾರು 17 ನಿಮಿಷ ರೈಲುಗಳ ಸಂಚಾರವಿಲ್ಲದೇ ಜನ ಪರದಾಡಿದರು. ಜೊತೆಗೆ ಇತರ ರೈಲುಗಳ ಸೇವೆಗೂ ಅಡಚಣೆ ಉಂಟಾಗಿತ್ತು.
ಪದೇ ಪದೇ ಈ ರೀತಿಯ ಸಮಸ್ಯೆ ಉಂಟಾದ ಹಿನ್ನೆಲೆ ತನಿಖೆ ಕೈಗೊಂಡ ಅಧಿಕಾರಿಗಳಿಗೆ ಬಾಗಿಲ ಸಂದಿಯಲ್ಲಿ ಪ್ರಯಾಣಿಕರ ಮೆಟಲ್ ಚೈನ್ ಸಿಲುಕಿದ್ದು ಗೊತ್ತಾಗಿದೆ. ಮೆಟ್ರೋ ಬಾಗಿಲುಗಳು ಸೆನ್ಸಾರ್ ಮುಖೇನ ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. ಬಾಗಿಲಿಗೆ ಅಡ್ಡವಾಗಿ, ಸಂದಿಗಳಲ್ಲಿ ಏನಾದರೂ ಸಿಲುಕಿದಾಗ ರೀತಿಯ ಸಮಸ್ಯೆ ಆಗುವುದು ಸಾಮಾನ್ಯ. ಇದೆಲ್ಲ ವಿಚಾರ ತನಿಖೆಯಿಂದ ಗೊತ್ತಾಗಿದ್ದು, ನೇರಳೆ ಮಾರ್ಗದ ರೈಲುಗಳು ತಾಂತ್ರಿಕವಾಗಿ ಸರಿಯಾಗಿವೆ ಎಂದು ತಿಳಿಸಲಾಗಿದೆ.
ಮಂಗಳವಾರವು ರೈಲು ಸೇವೆ ದಿಢೀರ್ ಸ್ಥಗಿತ
ಇನ್ನೂ ಮಂಗಳವಾರ ಇದೇ ಕಬ್ಬನ್ ಪಾರ್ಕ್ ನಿಲ್ದಾಣದ ಭೂಗತ ಮಾರ್ಗದಲ್ಲಿ ರೈಲು ದಿಢೀರ್ ನಿಂತುಕೊಂಡಿತ್ತು. ಅಂದು ವಿದ್ಯುತ್ ಪೂರೈಕೆಯ ವೈಯರ್ ಸ್ಪೋಟಗೊಂಡಿದ್ದರಿಂದ ವಿದ್ಯುತ್ ಪ್ರವಹಿಸಿದೇ ರೈಲು ಸೇವೆಯಲ್ಲಿ ವ್ಯತ್ಯಯವಾಗಿತ್ತು. ಪ್ರಯಾಣಿಕರು ಭಾರೀ ಸಮಸ್ಯೆ ಅನುಭವಿಸಿದರು, ಕೊನೆಗೆ ಲಾರಿ, ಬಸ್, ಆಟೋ ಹಿಡಿದು ಮನೆಗೆ ನಡೆದರು. ಇನ್ನೂ ಇದೇ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರು ಸುರಕ್ಷತಾ ಮಾನದಂಡಗಳ ಬದಲಾವಣೆ, ಅಂತಾರಾಷ್ಟ್ರೀಯ ಸುರಕ್ಷತಾ ಕ್ರಮ ಅನುಸರಣೆಗೆ ಒತ್ತಾಯಿಸಿದ್ದಾರೆ.













Click it and Unblock the Notifications