ಕಲ್ಯಾಣ ಕರ್ನಾಟಕ ವಿಭಾಗಕ್ಕೆ 1,600 ಬಸ್ ಖರೀದಿ: ಶ್ರೀರಾಮುಲು ಭರವಸೆ
ರಾಯಚೂರು, ನವೆಂಬರ್, 01: ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಅನುದಾನದಲ್ಲಿ 1,600 ಬಸ್ಗಳನ್ನು ಖರೀದಿ ಮಾಡಲಾಗುವುದು. ಸದ್ಯ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಎಲೆಕ್ಟ್ರಿಕ್ ಬಸ್ಗಳನ್ನು ರಾಜ್ಯಾದ್ಯಂತ ವಿಸ್ತರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ರಾಯಚೂರಿನಲ್ಲಿ ತಿಳಿಸಿದರು.
ನಗರ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ವತಿಯಿಂದ ನಡೆಯಲಿರುವ ರಾಜ್ಯ ಮಟ್ಟದ ಎಸ್.ಟಿ ಮೋರ್ಚಾದ ಪೂರ್ವಭಾವಿ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. 2030ರ ಒಳಗಾಗಿ 27,000 ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಲಾಗುವುದು. ಈಗಾಗಲೇ ಈ ಬಗ್ಗೆ ನಮ್ಮ ಸರ್ಕಾರ ಕ್ರಿಯಾಯೋಜನೆ ರೂಪಿಸಿದೆ. ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ಗಳು ಓಡಾಡುತ್ತಿದ್ದು, ಇನ್ಮುಂದೆ ರಾಜ್ಯಾದ್ಯಂತ ಎಲೆಕ್ಟ್ರಿಕ್ ಬಸ್ ಸಂಚಾರ ಪ್ರಾರಂಭಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗಕ್ಕೆ 1,600 ಬಸ್ಗಳನ್ನು ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸುಳ್ಳು ಹೇಳುವುದೇ ಸಿದ್ದರಾಮಯ್ಯ ಸಿದ್ದಾಂತ
ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಾರದ ಪಂಚವಾರ್ಷಿಕ ಯೋಜನೆಯಂತೆ ಚುನಾವಣೆ ಸಂದರ್ಭದಲ್ಲಿ ಅಹಿಂದ ಜನರು ನೆನಪಾಗುತ್ತಾರೆ. ಸುಳ್ಳು ಹೇಳುವುದೇ ಸಿದ್ದರಾಮಯ್ಯ ಅವರ ಸಿದ್ಧಾಂತವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕೆಳ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬಹುದಿತ್ತು. ಪ್ರಿನ್ಸಿಪಲ್ ಸೆಕ್ರೆಟರಿ ವರದಿ ಕೊಟ್ಟ ಸಂದರ್ಭದಲ್ಲಿ ಆಯೋಗ ರಚನೆ ಮಾಡಿ ಮೀಸಲಾತಿ ಜಾರಿ ಮಾಡಬಹುದಾಗಿತ್ತು. ಆದರೆ ಅವರು ಮೀಸಲಾತಿಯನ್ನು ಜಾರಿ ಮಾಡಲಿಲ್ಲ. ಬಿಜೆಪಿ ಸರ್ಕಾರದಿಂದ ಮೀಸಲಾತಿ ಹೆಚ್ಚಿಸಿರುವ ಕುರಿತು ಸುಳ್ಳು ಹೇಳುವುದು ಸರಿಯಲ್ಲ. ಹೀಗೆ ಸುಳ್ಳು ಹೇಳಿದರೆ ನೀವು ಅಹಿಂದ ನಾಯಕ ಎನಿಸಿಕೊಳ್ಳಲು ಅರ್ಹರಲ್ಲ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ತಿಪ್ಪರಾಜು ಹವಾಲ್ದಾರ್, ಮಾಜಿ ಸಚಿವರಾದ ಕೆಆರ್ಡಿಸಿಎಲ್ ಅಧ್ಯಕ್ಷ ಶ್ರೀ ಕೆ.ಶಿವನಗೌಡ ನಾಯಕ, ಸಂಸದರಾದ ರಾಜಾ ಅಮರೇಶ್ವರ ನಾಯಕ, ರಾಜು ಗೌಡ, ಗಂಗಾಧರ ನಾಯಕ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ವಿರುದ್ದ ಶ್ರೀರಾಮುಲು ವಾಗ್ದಾಳಿ
ಕೆಲ ದಿನಗಳ ಹಿಂದೆಯಷ್ಟೇ ಸಿದ್ದರಾಮಯ್ಯ ಮಿರ್ ಸಾದಕ್ ರಾಜಕಾರಣಿ ಆಗಿದ್ದರು. ಹಿಂದುಳಿದ ವರ್ಗಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಶ್ರೀನಿವಾಸ್ ಪ್ರಸಾದ್ ಮೊದಲಾದ ದಲಿತ ನಾಯಕರನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ಮುಗಿಸಿದರು. ಕಾಂಗ್ರೆಸ್ನಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ವೇಳೆ ಕಾಡು ಗೊಲ್ಲ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸಂವಾದಕ್ಕೆ ಮುಂದಾಗಿದ್ದ ಕಾಡು ಗೊಲ್ಲರಿಗೆ ತಡೆಯೊಡ್ಡಲಾಗಿದೆ. ಕಾಡು ಗೊಲ್ಲರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಅಡ್ಡಿಪಡಿಸಲಾಗಿದೆ. ಇದು ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ವಿರೋಧಿತನಕ್ಕೆ ಸಾಕ್ಷಿ ಆಗಿದೆ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications