ರಾಯಚೂರು: ನರೇಗಾ ಹಾಗೂ ನೀತಿ ಆಯೋಗದ ಅನುದಾನದಲ್ಲಿ 102 ಕೆರೆಗಳಿಗೆ ಕಾಯಕಲ್ಪ
ರಾಯಚೂರು: ಜುಲೈ 13: ನರೇಗಾ ಹಾಗೂ ನೀತಿ ಆಯೋಗದ ಅನುದಾನದಲ್ಲಿ ಕೇಂದ್ರ ಸರ್ಕಾರದ ಆಜಾದಿ ಕಾ ಅಮೃತ ಮಹೋತ್ಸವದ ಸವಿ ನೆನೆಪಿಗಾಗಿ ರಾಯಚೂರು ಜಿಲ್ಲಾ ಪಂಚಾಯಿತಿಯಿಂದ ಜಿಲ್ಲೆಯದಾದ್ಯಂತ 102 ಕೆರೆಗಳಿಗೆ ಕಾಯಕಲ್ಪ ನೀಡಲು ಮುಂದಾಗಿದೆ.
ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನ, ಮಳೆ ನೀರು ಕೊಯ್ಲು, ಕೆರೆ ಕಲ್ಯಾಣಿಗಳ ಪುನಶ್ಚೇತನ , ಜಲಸಂಗ್ರಹ , ಅಂತರ್ಜಲ ಹೆಚ್ಚಳಕ್ಕೆ ನಾನಾ ಹಾಗೂ ಹಲವು ವಿಭಿನ್ನ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದೀಗ ಆಜಾದಿ ಕಾ ಅಮೃತ ಮಹೋತ್ಸವ ಸವಿ ನೆನಪಿನಲ್ಲಿ ವಿಶೇಷ ಆಸಕ್ತಿ ವಹಿಸಿ ಅಮೃತ ಸರೋವರ ಯೋಜನೆ ರೂಪಿಸಿದೆ.
ಈ ಯೋಜನೆಯಡಿ ಪ್ರತಿ ಜಿಲ್ಲೆಗೆ ಕನಿಷ್ಠ 75 ಹಳೆಯ ಕೆರೆ, ಕಲ್ಯಾಣಿಗಳ ಪುನಶ್ಚೇತನಕ್ಕೆ ಮುಂದಾಗಿದೆ. ಅಮೃತ ಸರೋವರ ಯೋಜನಯಡಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 15 ಹೊಸ ಕೆರೆ ನಿರ್ಮಾಣದ ಜೊತೆಗೆ 87 ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಈಗಾಗಲೇ ಕೆರೆ ನಿರ್ಮಾಣದ ಕಾರ್ಯ ಆರಂಭಿಸಿದ್ದು, ಕೆರೆ ನಿರ್ಮಾಣಕ್ಕೆ ಕನಿಷ್ಠ ಒಂದು ಎಕರೆ ವ್ಯಾಪ್ತಿ ಜಾಗ ಗುರುತಿಸಲಾಗಿದೆ.

ಕೆರೆಗಳ ನಿರ್ಮಾಣಕ್ಕೆ ನರೇಗಾ ಅನುದಾನ ಬಳಕೆ
ಜಿಲ್ಲೆಯಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕೆ ನರೇಗಾದಿಂದ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು. ನೀತಿ ಆಯೋಗದಿಂದ 5 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಡಿ ಕೆರೆಗಳ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 20 ಕೆರೆಗಳನ್ನು ನಿರ್ಮಿಸಲಾಗುತ್ತದೆ.

ವರ್ಷದೊಳಗೆ 75 ಕೆರೆಗಳ ನಿರ್ಮಾಣ
ಅಮೃತ ಸರೋವರ ಯೋಜನೆಯಡಿ ಕನಿಷ್ಠ 102 ಕೆರೆಗಳ ಪೈಕಿ 75 ಕೆರೆಗಳ ನಿರ್ಮಾಣ ಕಾಮಗಾರಿಯನ್ನು ವರ್ಷದೊಳಗೆ ಮುಗಿಸಬೇಕಾಗಿದ್ದು, ಹೀಗಾಗಿ ಪ್ರಥಮ ಹಂತವಾಗಿ ಜಿಲ್ಲೆಯಲ್ಲಿ15 ಕೆರೆಗಳ ನಿರ್ಮಾಣ ಕಾಮಗಾರಿಯನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ.
ಜಿಲ್ಲೆಯಲ್ಲಿ ಹೊಸ ಕೆರೆ ನಿರ್ಮಿಸಲು ಮತ್ತು ಪುನಶ್ಚೇತನಗೊಳಿಸಲು ತಾಲೂಕುಗಳಲ್ಲಿ ಸ್ಥಳ ಗುರುತಿಸಲು ಮುಂದಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಕೇಂದ್ರದ ಜಲಶಕ್ತಿ ಇಲಾಖೆಯಿಂದ ಯೋಜನೆ ಅನುಷ್ಠಾನವಾಗಲಿದೆ. ಅದರಂತೆ ದೇವದುರ್ಗ 15, ಲಿಂಗಸೂಗೂರು 14, ಮಾನ್ವಿ 7 , ಮಸ್ಕಿ 8 , ರಾಯಚೂರು 15, ಸಿಂಧನೂರು 34, ಸಿರವಾರ 9 ಸೇರಿ ಒಟ್ಟು 102 ಕೆರೆಗಳ ಅಭಿವೃದ್ಧಿಗೆ ಮುಂದಾಗಿದೆ.

87 ಕೆರೆಗಳ ಪುನಶ್ಚೇತನ, 15 ಹೊಸ ಕೆರೆ ನಿರ್ಮಾಣ
ಜಿಲ್ಲೆಯಲ್ಲಿ15 ಹೊಸ ಕೆರೆ ನಿರ್ಮಾಣ ಹಾಗೂ 87 ಕೆರೆಗಳ ಪುನಶ್ಚೇತನಗೊಳಿಸಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಆಧುನಿಕ ತಂತ್ರಜ್ಞಾನ ಬಳಕೆಗೆ ಮುಂದಾಗಿದ್ದಾರೆ. ಭೂಮಿಯ ಲಭ್ಯತೆ, ನೀರಿನ ಸೆಲೆ ಮೂಲ, ನಾಲೆಗಳ ಸಂಪರ್ಕ, ಅಕ್ಕಪಕ್ಕದ ರೈತರ ಜಮೀನುಗಳಿಗೆ ಹಾನಿಯನ್ನು ತಪ್ಪಿಸುವುದು ಸೇರಿ ನಾನಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆರೆಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.

2023ರೊಳಗೆ ಪೂರ್ಣ ಗುರಿ ಸಾಧನೆ
ಕೇಂದ್ರ ಸರ್ಕಾರದ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಅಮೃತ ಸರೋವರ ಯೋಜನೆ ರೂಪಿಸಿದ್ದು ನರೇಗಾ ಯೋಜನೆಯಲ್ಲಿ ಜಿಲ್ಲೆಯ 102 ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಇದರಲ್ಲಿ 15 ಹೊಸ ಕೆರೆ ನಿರ್ಮಾಣ ಮತ್ತು 87 ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗಿದ್ದ, ನೀತಿ ಆಯೋಗದಿಂದ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಕನಿಷ್ಠ 75 ಕೆರೆ ನಿರ್ಮಾಣ ಅಥವಾ ಪುನಶ್ಚೇತನ ಮಾಡಲಾಗುವುದು. ಕೆಲ ಕೆರೆಗಳನ್ನು ಆಗಸ್ಟ್ನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದು 2023ರೊಳಗೆ ಪೂರ್ಣ ಗುರಿ ಸಾಧಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications