ರಾಯಚೂರು: 14 ತಿಂಗಳ ಮಗುವಿನ ನೇತ್ರದಾನ ಮಾಡಿ ಮಾದರಿಯಾದ ಪೋಷಕರು
ರಾಯಚೂರು ಜನವರಿ 12: ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೆಜ್ಜಲಗಟ್ಟಾ ಗ್ರಾಮದ ಮೂಲ ನಿವಾಸಿಗಳಾಗಿದ್ದು, ಹಟ್ಟಿ ಪಟ್ಟಣದಲ್ಲಿ ವಾಸಿಸುವ ಅಮರೇಗೌಡ ಹಾಗೂ ವಾಣಿ ಎನ್ನುವವರು ತಮ್ಮ 14 ತಿಂಗಳ ಮಗು ಬಸವಪ್ರಭುವಿನ ಕಣ್ಣುಗಳನ್ನು ದಾನ ಮಾಡಿದ್ದಾರೆ.
ತಮ್ಮ ಮೂರನೇ ಮಗುವಾಗಿರುವ ಬಸವಪ್ರಭು ಅನುವಂಶಿಕ ಕಾಯಿಲೆಯಿಂದ ಬಳಲುತ್ತಿತ್ತು. ಮಗುವಿಗೆ ತಜ್ಞ ವೈದ್ಯರ ಬಳಿಕ ಚಿಕಿತ್ಸೆ ನೀಡಿಸಿದರೂ ಫಲಕಾರಿಯಾದೆ ಮಗು ಮೃತಪಟ್ಟಿತ್ತು. ಆದರೆ ಮಗನ ಸಾವಿನ ದುಃಖದ ನಡುವೆಯೂ ಇನ್ನೊಬ್ಬರಿಗೆ ಬೆಳಕಗಲಿ ಎನ್ನುವ ಸದ್ದುದೇಶದಿಂದ ನೇತ್ರವನ್ನು ಇತ್ತೀಚೆಗೆ ನವೋದಯ ಮೇಡಿಕಲ್ ಕಾಲೇಜಿಗೆ ನೀಡಿದ್ದಾರೆ.
ಅಮರೇಗೌಡ ಕಾಮರೆಡ್ಡಿ ಹಾಗೂ ವಾಣಿಯವರು ಇಬ್ಬರಿಗೆ ವಿವಾಹವಾಗಿದ್ದು, ರಕ್ತ ಸಂಬಂಧಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತರದಲ್ಲಿ ಪ್ರಥಮವಾಗಿ ಗಂಡು ಮಗು ಜನಿಸಿತ್ತು. ಆದರೆ ಅನಾರೋಗ್ಯದಿಂದ ಮಗು ಮೃತಪಟ್ಟಿತ್ತು. ಇದಾದ ಬಳಿಕ ಎರಡನೇಯದಾಗಿ ಹೆಣ್ಣು ಮಗು ಜನಸಿದ್ದು ಆರೋಗ್ಯವಾಗಿದ್ದಾಳೆ. ಆದರೆ ಮೂರನೇದಾಗಿ ಮತ್ತೊಮ್ಮೆ ಗಂಡು ಮಗು ಜನಿಸಿದ್ದು ಅದು ಸಹ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿತ್ತು.
ಇದಕ್ಕಾಗಿ ರಾಯಚೂರು, ಹಟ್ಟಿ ಸೇರಿದಂತೆ ನಾನಾ ಕಡೆಯ ತಜ್ಞನ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಲು ಸಾಕಷ್ಟು ಪ್ರಯತ್ನಿಸಲಾಗಿದೆ. ಮಗು ಬದುಕು ಉಳಿಯುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಆಗ ಪಾಲಕರು ಹಟ್ಟಿ ಚಿನ್ನದ ಗಣಿಯ ನೇತ್ರ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು, ನವೋದಯ ಮೆಡಿಕಲ್ ಕಾಲೇಜಿಗೆ ತಮ್ಮ ಮಗನ ಎರಡು ಕಣ್ಣುಗಳು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕನ್ನು ನೀಡಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಅವರ ನಿಧನ ನಂತರ ಜನಸಿತ್ತು. ಮಗು ಆಳುತ್ತಿರುವಾಗ ಪಾಲಕರು ಸಮಾಧಾನ ಪಡಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದರು. ಆದರೆ ಸಮಾಧಾನವಾಗುತ್ತಿರಲಿಲ್ಲ. ಆದರೆ ಅಪ್ಪು ಹಾಡುಗಳನ್ನು ಕೇಳಿದರೆ ಅಳುವನ್ನು ನಿಲ್ಲಿಸುತ್ತಿತ್ತು. ರಕ್ತ ಸಂಬಂಧದಲ್ಲಿ ಮದುವೆಯಾಗಿರುವುದ್ದರಿಂದ ಮಗುವಿಗೆ ಅನುವಂಶಿಕ ಕಾಯಿಲೆ ಎದುರಾಗಿತ್ತು. ಇದಕ್ಕಾಗಿ ಮಕ್ಕಳ ನುರಿತ ವೈದ್ಯರನ್ನು ರಾಯಚೂರು, ಬೆಳಗಾವಿ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿಕಿತ್ಸೆಗಾಗಿ ಓಡಾಡಲಾಯಿತು.ಆದರೆ ವೈದ್ಯರು ಈ ಕಾಯಿಲೆ ಬಲು ಅಪರೂಪ ಸಾವಿರಾರು ಜನರಲ್ಲಿ ಒಬ್ಬರಲ್ಲಿ ಇಂತಹ ಕಾಯಿಲೆ ಕಂಡು ಬರುತ್ತಿದ್ದು, ಇಂತಹ ಕಾಯಿಲೆ ತುತ್ತಾದಾಗ ಬದುಕು ಉಳಿಯುವುದು ಕಷ್ಟವೆಂದು ವೈದ್ಯರು ಹೇಳಿದರು. ಅಲ್ಲದೇ ಗಂಡು ಮಕ್ಕಳಿಗೆ ಈ ಕಾಯಿಲೆ ಬಾಧಿಸುತ್ತದೆ ಎಂದು ತಿಳಿಸಿದರು.
ಈ ಬಗ್ಗೆ ಜೊತೆ ಮಾತನಾಡಿರುವ ಮಗುವಿನ ತಂದೆ ಅಮರೇಗೌಡ ಕಾಮರೆಡ್ಡಿ, "ಮಗು ಇನ್ನೂ ಉಳಿಯುವುದಿಲ್ಲ ಎಂದು ಅರಿತ ಬಳಿಕ ನಾನು ಹಾಗೂ ನನ್ನ ಪತ್ನಿ ಚರ್ಚಿಸಿ ಕಣ್ಣುದಾನ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ಹೇಗೆ ದಾನ ಮಾಡಬೇಕು ಎನ್ನುವ ಮಾಹಿತಿ ಇರಲಿಲ್ಲ. ಹಟ್ಟಿ ಚಿನ್ನದ ಗಣಿ ಕಂಪನಿ ಆಸ್ಪತ್ರೆಯ ನೇತ್ರ ವೈದ್ಯರನ್ನು ಜೊತೆ ಮಾತನಾಡಿದ ಬಳಿಕ, ನವೋದಯ ಮೆಡಿಕಲ್ ಕಾಲೇಜಿಗೆ ಸಂಪರ್ಕಿಸಿ ಕಣ್ಣುಗಳನ್ನು ದಾನ ಮಾಡಿದ್ದೇವೆ. ಮೊದಲನೆಯ ಹಾಗೂ ಮೂರನೇ ಗಂಡು ಮಕ್ಕಳು ಇಬ್ಬರು ಮೃತಪಟ್ಟಿದ್ದಾರೆ. ಎರಡನೇಯದಾಗಿ ಜನಿಸಿದ ಹೆಣ್ಣು ಮಗು ಅನ್ವಿತಾ ಗೆ ಈ ಕಾಯಿಲೆ ಎದುರಾಗಿಲ್ಲ. ಆರೋಗ್ಯಯುತವಾಗಿದ್ದಾಳೆ" ಎಂದು ಹೇಳಿದ್ದಾರೆ.