15 ದಿನಗಳ ಅಂತರದಲ್ಲಿ 2 ಬಾರಿ ಕುಸಿದ ಕಾಲುವೆ, ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ರಾಯಚೂರು, ನವೆಂಬರ್ 8 : ಲಿಂಗಸುಗೂರು ತಾಲ್ಲೂಕಿನ ರಾಂಪುರ- ನವಲಿ ಜಡಿಸಂಕರಲಿಂಗ ಏತ ನೀರಾವರಿ ಯೋಜನೆಯ ಒಂದನೇ ಜಾಕವೆಲ್ದಿಂದ ಎರಡನೇ ಜಾಕವೆಲ್ ಮಧ್ಯದ ಮುಖ್ಯ ಕಾಲುವೆ ಹದಿನೈದು ದಿನಗಳ ಅಂತರದಲ್ಲಿ ಎರಡನೇ ಬಾರಿ ಕಾಂಕ್ರಿಟ್ ಲೈನಿಂಗ್ ಕುಸಿದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಹದಿನೈದು ದಿನಗಳ ಹಿಂದೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದಾಗ 10.520 ಕಿ.ಮೀ ಸಮೀಪ ಕುಸಿದಿದ್ದ ಕಾಂಕ್ರಿಟ್ ಲೈನಿಂಗ್ ದುರಸ್ತಿ ಮಾಡಲಾಗಿತ್ತು. ದುರಸ್ತಿ ಮಾಡಿದ ಸ್ಥಳದಲ್ಲಿ ಪುನಃ ಕಾಂಕ್ರಿಟ್ ಕೊಚ್ಚಿ ಹೋಗಿದೆ. ಅದೇ ಸ್ಥಳದಿಂದ ಅನತಿ ದೂರದಲ್ಲಿ 10.560 ನೇ ಕಿ.ಮೀದಲ್ಲಿ ಲೈನಿಂಗ್ ಕಾಮಗಾರಿ ಕುಸಿದಿದ್ದು, ಕಳಪೆಯಿಂದ ಕೂಡಿದ ದುರಸ್ತಿ ಕಾಮಗಾರಿ ಲೈನಿಂಗ್ ಕುಸಿತಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
"ಏತ ನೀರಾವರಿ ಯೋಜನೆಯ 9 ರಿಂದ 14ನೇ ಕಿ.ಮೀವರೆಗೆ ಲ್ಯಾಟರಲ್ ಸೇರಿ ಏಳು ಪ್ಯಾಕೇಜ್ಗಳಲ್ಲಿ 14ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ.
ಆದರೆ ಗುತ್ತಿಗೆದಾರರು ಮನಸೋ ಇಚ್ಛೆ ಕಾಮಗಾರಿ ಮಾಡಿದ್ದರಿಂದ ಕಳಪೆ ಬಹಿರಂಗಗೊಂಡಿದೆ. ಕಾಲುವೆ ನಿರ್ಮಾಣಕ್ಕೆ ಕಡಿಮೆ ಸರಳು ಹಾಗೂ ಕಾಂಕ್ರೀಟ್ ಬಳಸಿರುವುದೇ ಕುಸಿತಕ್ಕೆ ಕಾರಣ ಎಂದು ನರಕಲದಿನ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಮಣ್ಣಿನ ಏರಿ ಪ್ರದೇಶಗಳಲ್ಲಿ ಕಬ್ಬಿಣ ಸರಳು ಜೋಡಣೆ ಮಾಡಿ 4 ಇಂಚು ಕಾಂಕ್ರಿಟ್ ಹಾಕಬೇಕಿತ್ತು. ಗುತ್ತಿಗೆದಾರರು ಅದ್ಯಾವುದನ್ನು ಪರಿಶೀಲಿಸದೆ ಮನಸೋ ಇಚ್ಛೆ ಕಾಮಗಾರಿ ಮಾಡಿದ್ದರಿಂದ ಕಳಪೆ ಬಹಿರಂಗಗೊಂಡಿದೆ. ಕಬ್ಬಿಣ ಸರಳು ಬಳಸದೆ, ಕಡಿಮೆ ಪ್ರಮಾಣದ ಕಾಂಕ್ರಿಟ್ ಬಳಕೆಯೆ ಕುಸಿತಕ್ಕೆ ಕಾರಣ" ಎಂದು ದೂರಿದ್ದಾರೆ.
ಪ್ಯಾಕೇಜ್ ಟೆಂಡರ್ ಹಣ ಪಾವತಿಗೆ ಮುಂಚೆಯೆ ಮುಖ್ಯ ನಾಲೆಗಳಲ್ಲಿ ಕುಸಿತ ಕಾಣಿಸಿಕೊಂಡಿರುವುದನ್ನು ಗಮನಕ್ಕೆ ತಂದಿದ್ದರು ಕೂಡ ಎಂಜಿನಿಯರ್ಗಳು ಶಾಮೀಲಾಗಿ ಬಿಲ್ ಪಾವತಿಸಿದ್ದಾರೆ. ಕಾರಣ ಈ ಪ್ರಕರಣವನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಇತರೆ ಪ್ರಕರಣಗಳಿಗೆ ಜೋಡಣೆ ಮಾಡಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬುದು ರೈತರ ಒತ್ತಾಸೆಯಾಗಿದೆ.
ಕಾಂಕ್ರಿಟ್ ಲೈನಿಂಗ್ ಕುಸಿದಿರುವ ಮಾಹಿತಿ ಲಭ್ಯವಿಲ್ಲ. ಈ ಕೂಡಲೆ ಪರಿಶೀಲಿಸಿ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಏತ ನೀರಾವರಿ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ತಂಬಿದೊರೈ ಹೇಳಿದ್ದಾರೆ.
ಆರ್ಟಿಪಿಎಸ್ನಲ್ಲಿ ಬೆಂಕಿ
ನಗರದ ಆರ್ಟಿಪಿಎಸ್ ವಿದ್ಯುತ್ ಉತ್ಪಾದನೆ ವೇಳೆ ಕಲ್ಲಿದ್ದಲು ಸಾಗಿಸುವ ಕೋಲ್ ಬೆಲ್ಟ್ ಹೊತ್ತಿ ಉರಿದಿದೆ. ತಕ್ಷಣ ಸ್ಥಳದಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಲು ಪ್ರಯತ್ನಕ್ಕೆ ಮುಂದಾಗಿ ಅಗ್ನಿ ಎಚ್ಚರಿಕೆಯ ಮೊಳಗಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ.
ಅಗ್ನಿ ಅನಾಹುತದಿಂದ ಕಲ್ಲಿದ್ದಲು ಉರಿಸುವ ಒಲೆಗೆ ಉರುವಲು ಸರಬರಾಜು ಮಾಡುವ ಸುಮಾರು 25 ಕನ್ವೇಯರ್ ಬೆಲ್ಟ್ಗಳು ಹೊತ್ತಿ ಉರಿದಿದೆ. ಈ ಘಟನೆಯಿಂದ 5 ಮತ್ತು 8ನೇ ಘಟಕಕ್ಕೆ ಕಲ್ಲಿದ್ದಲು ಸರಬರಾಜು ಸ್ಥಗಿತಗೊಂಡಿತ್ತು. ವಿದ್ಯುತ್ ಉತ್ಪಾದನೆಗೂ ವ್ಯತ್ಯಯ ಉಂಟಾಗಿದೆ. ಅಗ್ನಿ ಅನಾಹುತದಿಂದ ಸುಮಾರು 70 ಲಕ್ಷ ರೂ ಮೌಲ್ಯದಷ್ಟು ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.