ಆರ್ಟಿಪಿಎಸ್ ಒಂದನೇ ವಿದ್ಯುತ್ ಘಟಕ ತೆರವಿಗೆ ಕೆಪಿಸಿಎಲ್ ನಿಗಮ ಚಿಂತನೆ
ರಾಯಚೂರು, ಜನವರಿ 5: ಶಾಖೋತ್ಪನ್ನ ವಿದ್ಯುತ್ ಸ್ಥಾವರದ(ಆರ್ಟಿಪಿಎಸ್) ಒಂದನೇ ವಿದ್ಯುತ್ ಉತ್ಪಾದನೆಯ ಘಟಕದ ಆಧುನೀಕರಣಕ್ಕೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಯೋಜಿಸಿದೆ.
30ವರ್ಷಗಳಷ್ಟು ಹಳೆಯದಾದ ಆರ್ಟಿಪಿಎಸ್ನ ಮೊದಲೆರಡು ಘಟಕಗಳ ಪೈಕಿ 210 ಮೆಗಾವಾಟ್ ಸಾಮರ್ಥ್ಯದ ಒಂದನೇ ವಿದ್ಯುತ್ ಘಟಕವನ್ನು ಆಧುನೀಕರಣ ಕೈಗೆತ್ತಿಕೊಳ್ಳಲು ಚಿಂತನೆ ನಡೆಸಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡುವುದು ಕೆಪಿಸಿಗೆ ಸವಾಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ದಿಢೀರ್ ಬದಲಾದ ವಾತಾವರಣ
ಹೊಸ ಯೋಜನೆಗಳಿಗೆ ಕಲ್ಲಿದ್ದಲು ಲಭ್ಯತೆ ಸಮಸ್ಯೆಯೂ ಎದುರಾಗಿದೆ. ವಿದ್ಯುತ್ ಉತ್ಪಾದಿಸುತ್ತಿರುವ ಹಾಲಿ ವಿದ್ಯುತ್ ಘಟಕಗಳೂ ಸುಮಾರು 25ವರ್ಷ ದಾಟಿದ್ದರಿಂದ ಜೀವ ತುಂಬುವ ಕಾರ್ಯಕ್ಕೆ ಕೆಪಿಸಿ ಮುಂದಾಗಿದೆ.
ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿನ ಘಟಕಗಳು 25 ವರ್ಷ ನಿರಂತರ ಕಾರ್ಯನಿರ್ವಹಿಸಿದ ನಂತರ ಸಾಮಾನ್ಯವಾಗಿ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವುದು ಇಲ್ಲವೇ ಹೊಸದಾಗಿ ಘಟಕಗಳನ್ನು ಅದೇ ಸ್ಥಳದಲ್ಲಿ ನಿರ್ಮಾಣ ಮಾಡುವುದು ಅನಿವಾರ್ಯ. ಸದ್ಯ ಹೊಸ ಘಟಕಗಳ ಸ್ಥಾಪನೆ ಮಾಡಿದಲ್ಲಿ ಕಲ್ಲಿದ್ದಲು ಹಂಚಿಕೆಯಾಗುವುದು ಅನುಮಾನ.
ಸದ್ಯ ಆರ್ಟಿಪಿಎಸ್ನ ಮೊದಲೆರಡು ಘಟಕಗಳ ನವೀಕರಣ ಮತ್ತು ಆಧುನೀಕರಣ ಕಾಮಗಾರಿಗೆ ಕೆಪಿಸಿ 2013ರಲ್ಲಿಯೇ ಮುಂದಾಗಿತ್ತು. ಆದರೆ, ವಿದ್ಯುತ್ ಬೇಡಿಕೆಯ ಒತ್ತಡದಿಂದ ಕೇವಲ 1ನೇ ಘಟಕದಲ್ಲಿ ಆಧುನೀಕರಣದ ಕಾಮಗಾರಿ ಕೈಗೊಳ್ಳಲಾಗಿತ್ತು. ಆರ್ಟಿಪಿಎಸ್ನ ಒಂದನೇ ಘಟಕವು 32ವರ್ಷಗಳಷ್ಟು ಹಳೆಯದು. 2ನೇ ಘಟಕವು 31 ವರ್ಷಗಳ ಹಿಂದೆ ನಿರ್ಮಿಸಿದ್ದಾಗಿದೆ. ಈ ಘಟಕಗಳಿಗೆ ಮರುಜೀವ ನೀಡುವ ರೀತಿಯಲ್ಲಿ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ.
ಆರ್ಟಿಪಿಎಸ್ ಒಂದನೇ ವಿದ್ಯುತ್ ಘಟಕವನ್ನು ಆಧುನೀಕರಣ ಅಥವಾ ತೆರವುಗೊಳಿಸುವ ಕುರಿತು ಕೆಪಿಸಿಎಲ್ ನಿಗಮದ ಪ್ರಸ್ತಾವನೆಯಲ್ಲಿ ಇದೆ. ವಿದ್ಯುತ್ ಬೇಡಿಕೆ ಇಲ್ಲದ ಕಾರಣ ಕಳೆದ ನಾಲ್ಕು ತಿಂಗಳಿಂದ 1 ಮತ್ತು 2ನೇ ವಿದ್ಯುತ್ ಘಟಕದ ಉತ್ಪಾದನೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಒಟ್ಟು 8 ವಿದ್ಯುತ್ ಘಟಕಗಳ ಪೈಕಿ 5 ವಿದ್ಯುತ್ ಘಟಕಗಳಿಂದ ಉತ್ಪಾದನೆ ಮಾಡಲಾಗುತ್ತಿದೆ.
1,720 ಮೆಗಾವಾಟ್ ಸಾಮರ್ಥ್ಯದಲ್ಲಿ 700 ಮೆಗಾವಾಟ್ ರಷ್ಟು ಉತ್ಪಾದನೆ ಆಗುತ್ತಿದೆ. ಕಲ್ಲಿದ್ದಲು ವಿಭಾಗದಲ್ಲಿ 3.70 ಲಕ್ಷ ಮೆಟ್ರಿಕ್ ಟನ್ ರಷ್ಟು ಕಲ್ಲಿದ್ದಲು ಸಂಗ್ರಹ ಇದೆ. ಪ್ರತಿದಿನ ಗಣಿಗಳಿಂದ 6 ಕಲ್ಲಿದ್ದಲು ರೇಕ್ಗಳು ಬರುತ್ತಿವೆ. ಸದ್ಯಕ್ಕೆ ವಿದ್ಯುತ್ ಕಲ್ಲಿದ್ದಲು ಸಮಸ್ಯೆ ಇಲ್ಲ. 2ನೇ ವಿದ್ಯುತ್ ಘಟಕ ಉತ್ಪಾದನೆಗೆ ಆರಂಭಿಸಲು ಪೂರ್ವ ಸಿದ್ದತೆ ನಡೆಸಲಾಗಿದೆ ಎಂದು ಆರ್ ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಎಂ.ದಿವಾಕರ್ ಹೇಳಿದರು.